ಚಿನ್ನದ ವ್ಯಾಪಾರಿಗಳಿಗೆ ವಂಚಿಸಿದ್ದ ಪಶ್ಚಿಮ ಬಂಗಾಳ ಮೂಲದ ಆರೋಪಿಯ ಸೆರೆ
Team Udayavani, Dec 30, 2021, 2:00 PM IST
ಬೆಂಗಳೂರು : ಜ್ಯುವೆಲ್ಲರಿ ಮಾಲೀಕರಿಗೆ ಚಿನ್ನಾಭರಣ ಮಾಡಿಕೊಡುವುದಾಗಿ ನಂಬಿಸಿ ಚಿನ್ನದ ಗಟ್ಟಿ ಮತ್ತು ಆಭರಣ ಪಡೆದುಕೊಂಡು ವಂಚಿಸಿದ್ದ ಪಶ್ಚಿಮ ಬಂಗಾಳ ಮೂಲದ ಆರೋಪಿಯನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳ ಮೂಲದ ಸುನೀಲ್ ಕುಮಾರ್ ಬೌಲ್ (63) ಬಂಧಿತ. ಆರೋಪಿಯಿಂದ 55 ಲಕ್ಷ ರೂ. ಮೌಲ್ಯದ 947 ಗ್ರಾಂ ತೂಕದ ವಿವಿಧ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೆ, ಆರೋಪಿ ಯಿಂದ ಜಯನಗರ ಠಾಣೆಯಲ್ಲಿ ದಾಖಲಾಗಿದ್ದ ಎರಡು, ಕಬ್ಬನ್ ಪಾರ್ಕ್ ಠಾಣೆಯ 1 ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದರು.
ಆರೋಪಿ ಜಯನಗರ 5ನೇ ಬ್ಲಾಕ್ ನಲ್ಲಿರುವ ಜ್ವಾಲಮಾಲ ಎಂಬ ಜ್ಯುವೆಲ್ಲರ್ಸ್ ಮಾಲೀಕರಾದ ರಾಕೇಶ್ ಬೆಳ್ಳೂರು ಅವ ರಿಗೆ 271 ಗ್ರಾಂ ಚಿನ್ನದ ಆಭರಣಗಳು ಹಾಗೂ ಚಿನ್ನದ ಗಟ್ಟಿ ಪಡೆದುಕೊಂಡಿದ್ದ. ಅಲಂಕೃತಿ ಜ್ಯುವೆಲ್ಲರಿ ಅಂಗಡಿಯ ರಾಕೇಶ್ ಅವರಿಂದ116 ಗ್ರಾಂ ಚಿನ್ನಾಭರಣ, ಗಟ್ಟಿ ಪಡೆದು ತಲೆಮರೆಸಿಕೊಂಡಿದ್ದನು. ಈ ಬಗ್ಗೆ ಜಯನಗರ ಠಾಣೆಯಲ್ಲಿ
ದೂರು ದಾಖಲಾಗಿತ್ತು. ಅಲ್ಲದೆ, ಕಬ್ಬನ್ ಪಾರ್ಕ್ ಠಾಣೆ ವ್ಯಾಪ್ತಿಯ ನವರತನ್ ಜ್ಯುವೆಲ್ಲರ್ಸ್ ಅವರಿಂದ 717 ಗ್ರಾಂ ಚಿನ್ನಾಭರಣ ಪಡೆದುಕೊಂಡು ವಂಚಿಸಿದ್ದ ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಆರೋಪಿಯ ವಿಚಾರಣೆಯಲ್ಲಿ ಅವೆನ್ಯೂ ರಸ್ತೆಯಲ್ಲಿರುವ ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಅಡಮಾನ ಇಟ್ಟಿದ್ದ. ಈ ಎಲ್ಲ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.
ಇದನ್ನೂ ಓದಿ : ವಿಜಯಪುರ: ಕಾಂಗ್ರೆಸ್ ಮೇಲುಗೈ, ಖಾತೆ ತೆರೆದ ಓವೈಸಿಯ ಎಂಐಎಂ
ಕೋರ್ಟ್ಗೆ ಶರಣಾಗಿದ್ದ ಆರೋಪಿ!
ಆರೋಪಿ 3 ವರ್ಷಗಳ ಹಿಂದೆ ಕೃತ್ಯ ಎಸಗಿ ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ. ಇತ್ತೀಚೆಗೆ ಜಯನಗರ ಪೊಲೀಸರು ಆರೋಪಿಯ ಬಂಧನಕ್ಕೆ ತೆರಳಿದಾಗ, ಆತನ ಈ ಮಾಹಿತಿ ತಿಳಿದುಕೊಂಡು ನೇರವಾಗಿ ಬೆಂಗಳೂರಿನ ಕೋರ್ಟ್ಗೆ ಶರಣಾಗಿದ್ದ. ಬಳಿಕ ಆತನನ್ನು ವಶಕ್ಕೆ ಪಡೆದುಕೊಂಡು, ಅಡಮಾನ ಇಟ್ಟಿದ್ದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.