ಬೆಳೆ ವಿಮೆ ನೋಂದಣಿ: ದ.ಕ.ಕ್ಕೆ ಕಡಿಮೆ, ಉಡುಪಿಗೆ ಹೆಚ್ಚು ಪರಿಹಾರ ಮಿತಿ!
ನೋಂದಣಿ ಅವಧಿ ಜು. 10ರ ವರೆಗೆ ವಿಸ್ತರಣೆ
Team Udayavani, Jul 3, 2020, 5:59 AM IST
ಕುಂದಾಪುರ: ಕೇಂದ್ರ ಜಾರಿಗೆ ತಂದಿರುವ ಹವಾಮಾನ ಆಧಾರಿತ ಬೆಳೆ ವಿಮೆಗೆ ನೋಂದಾಯಿಸಿ ಪರಿಹಾರ ಪಡೆಯಲು ದ.ಕ. ಜಿಲ್ಲೆಗೆ ಒಂದು, ಉಡುಪಿಗೆ ಮತ್ತೂಂದು ಮಿತಿ! ಇದು ಪರಿಹಾರ ಮೊತ್ತದ ಮೇಲೆ ಪರಿಣಾಮ ಬೀರಲಿದೆ ಎಂಬ ಆತಂಕ ಮೂಡಿದೆ.
ಉಡುಪಿಗೆ ಹೆಚ್ಚು
ದ.ಕ., ಮಂಡ್ಯ, ರಾಯಚೂರು, ಶಿವಮೊಗ್ಗ, ಬಾಗಲಕೋಟೆಯನ್ನು ನೀರಾವರಿ ಜಿಲ್ಲೆಗಳೆಂದು ಗುರುತಿಸಲಾಗಿದ್ದು ಶೇ. 25, ಇತರ ಜಿಲ್ಲೆಗಳಿಗೆ ಶೇ. 30 ಪರಿಹಾರ ಮಿತಿ ನಿಗದಿಪಡಿಸಲಾಗಿದೆ. ಈ ಐದು ಜಿಲ್ಲೆಗಳಿಗೆ ಮೂರು ವರ್ಷಗಳ ಅವಧಿಗೆ ವಿಮಾ ಕಂಪೆನಿಗೆ ಟೆಂಡರ್ ಕೂಡಾ ನೀಡಲಾಗಿದೆ.
ಬೆಳೆ ನಷ್ಟದ ಪ್ರಮಾಣವನ್ನು ಈ ಮಿತಿಯಲ್ಲಿ ಇರುವುದನ್ನು ಹೆಚ್ಚು ಮಾಡಬೇಕೆಂದು ರೈತರು ಒತ್ತಾಯಿಸಿದ್ದಾರೆ. ರಿಸ್ಕ್ ಪ್ರಮಾಣ ಕಡಿಮೆ ಮಾಡಿದಷ್ಟು ರೈತರಿಗೆ ದೊರೆಯುವ ಪರಿಹಾರದ ಮೊತ್ತ ಕಡಿಮೆಯಾಗಲಿದೆ. ಹೆಕ್ಟೇರ್ಗೆ 6,400 ರೂ. ಪಾವತಿಸಿದರೆ ಶೇ. 30 ನಷ್ಟ ಪರಿಹಾರ ಎಂದರೆ 51,800 ರೂ. ದೊರೆಯುತ್ತದೆ. ನಷ್ಟದ ಮಿತಿ ಹೆಚ್ಚು ಮಾಡಿದರೆ ಪರಿಹಾರ ಮೊತ್ತ ಜಾಸ್ತಿ ದೊರೆಯಲಿದೆ. ಈ ಕುರಿತು ಸ್ಪಷ್ಟನೆ ಬಯಸಿದಾಗ, ರೈತರಿಗೆ ತೊಂದರೆಯಾಗುವುದಿಲ್ಲ. ಇದು ರಿಸ್ಕ್ ಪರ್ಸೆಂಟೇಜ್ನ ಕನಿಷ್ಠ ಪ್ರಮಾಣವಾಗಿದ್ದು ಹವಾ ಮಾನ ವೈಪರೀತ್ಯವಾದರೆ ಈ ಮೊತ್ತ ಹೆಚ್ಚಾಗಲೂ ಬಹುದು ಎಂದು ತೋಟಗಾರಿಕಾ ಸಹಾಯಕ ನಿರ್ದೇಶಕ ನಿಧೀಶ್ ಹೊಳ್ಳ ವಿವರಿಸಿದ್ದಾರೆ.
ಕೊನೆ ದಿನ
ತೋಟಗಾರಿಕಾ ಬೆಳೆಗಳಾದ ಅಡಿಕೆ, ಕರಿಮೆಣಸು, ವೀಳ್ಯದೆಲೆ, ದ್ರಾಕ್ಷಿ, ದಾಳಿಂಬೆ, ಲಿಂಬೆ, ಪರಂಗಿ, ಶುಂಠಿ, ಹೂಕೋಸು ಬೆಳೆಗಳನ್ನು ಜು. 10ರ ಒಳಗೆ ನೋಂದಾಯಿಸಬೇಕು. ಮಾವು ಬೆಳೆಯನ್ನು ಜು. 31ರ ಒಳಗೆ, ಹಿಂಗಾರು ಹಂಗಾಮಿನ ಬೆಳೆಗಳಾದ ದ್ರಾಕ್ಷಿ, ಮಾವು, ದಾಳಿಂಬೆ, ಮೆಣಸಿನಕಾಯಿ ಬೆಳೆಗಳನ್ನು ನ. 15ರ ಒಳಗೆ ನೋಂದಾಯಿಸಬೇಕು.
ಬೆಳೆ ಸಾಲ ಪಡೆದ ಹಾಗೂ ಬೆಳೆ ಸಾಲ ಪಡೆಯದ ರೈತರು ವಿಮೆ ಮಾಡಿಸಬಹುದು. ಬೆಳೆ ವಿಮೆ ನೋಂದಣಿಗೆ ಜೂ.30 ಕೊನೆ ದಿನವಾಗಿತ್ತು. ಜೂ. 25ರಂದು ಆದೇಶವಾಗಿ ಜೂ.26ರಂದು ಕಚೇರಿಗಳಿಗೆ ಬಂದಿದ್ದು ಜೂ. 27, 28 ಸರಕಾರಿ ರಜೆ ದಿನ. ಕೇವಲ ಎರಡು ದಿನಗಳ ಗಡುವು ನೀಡಿ ಸರಕಾರ ಆದೇಶ ನೀಡಿದ್ದು ರೈತರಲ್ಲಿ ಗೊಂದಲ ಮೂಡಿಸಿತ್ತು. ದ.ಕ., ಉಡುಪಿಯ ಪ್ರಧಾನ ಬೆಳೆ ಅಡಿಕೆ ಬೆಳೆಗಾರರಿಗೆ ಇದರಿಂದ ತೊಂದರೆಯಾಗಿತ್ತು. ಎಲ್ಲ ಜಿಲ್ಲೆಗಳಿಂದ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಸರಕಾರ ನೋಂದಣಿ ಅವಧಿಯನ್ನು 10 ದಿನ ವಿಸ್ತರಿಸಿದೆ.
ಕಡ್ಡಾಯ ಅಲ್ಲ
ಬೆಳೆ ಸಾಲ ಪಡೆದ ರೈತರಿಗೆ ಸಹಕಾರಿ ಸಂಸ್ಥೆಗಳು, ಬ್ಯಾಂಕುಗಳು ಕಡ್ಡಾಯ ಬೆಳೆವಿಮೆ ಮಾಡಿಸುತ್ತಿವೆೆ. ಆದರೆ ಸರಕಾರದ ಸುತ್ತೋಲೆಯಂತೆ ಬೆಳೆವಿಮೆ ಕಡ್ಡಾಯವಲ್ಲ. ಬೆಳೆ ಸಾಲ ಪಡೆದ ರೈತ ಬೆಳೆವಿಮೆ ನೋಂದಣಿಗಿಂತ 7 ದಿನಗಳ ಮುಂಚೆ ತನಗೆ ಬೆಳೆವಿಮೆ ಅಗತ್ಯವಿಲ್ಲ ಎಂದು ಅಫಿದವಿತ್ ನೀಡಿದರೆ ಅವರನ್ನು ವಿಮೆ ವ್ಯಾಪ್ತಿಯಿಂದ ಹೊರಗಿಡಲಾಗುವುದು. ಆದರೆ ಅಂತಹ ರೈತರಿಗೆ ಬೆಳೆ ನಷ್ಟವಾದಾಗ ಯಾವುದೇ ವಿಮಾ ಪರಿಹಾರ ದೊರೆಯುವುದಿಲ್ಲ.
ಬೆಳೆ ವಿಮೆಯಿಂದ ರೈತರು ದೂರ ಸರಿಯಲು ಕಾರಣ ವಿಮೆಯನ್ನು ಘಟಕವಾಗಿ ಪರಿಗಣಿಸಿರುವುದು. ಇಡೀ ಗ್ರಾಮದ ಬೆಳೆ ನಾಶವಾಗದ ಹೊರತು ಇದರಲ್ಲಿ ಒಬ್ಬರು, ಇಬ್ಬರು ರೈತರ ಬೆಳೆ ನಷ್ಟವಾದರೆ ವಿಮಾ ಪರಿಹಾರ ಪಡೆಯಲು ಅವಕಾಶ ಇಲ್ಲ. ಬೆಳೆ ನಾಶವಾಗಿ 72 ಗಂಟೆಗಳ ಒಳಗೆ ರೈತರು ವಿಮಾ ಸಂಸ್ಥೆಗೆ ಮಾಹಿತಿ ನೀಡಿ ಅವರು ಸರ್ವೆ ಮಾಡಿ ಪರಿಹಾರ ಮೊತ್ತವನ್ನು ನೇರ ರೈತರ ಖಾತೆಗೆ ಜಮೆ ಮಾಡುವುದು ಈ ವಿಮೆಯ ಆಶಯ. ಇದಕ್ಕಾಗಿ ಅವರು ಪಂಚಾಯತ್ನಲ್ಲಿ ದಾಖಲಾಗುವ ಮಳೆಮಾಪನದ ಅಂಕಿ ಅಂಶವನ್ನು ಅವಲಂಬಿಸುತ್ತಾರೆ.
ಇನ್ನೂ ನೋಂದಣಿಗೆ
ಅವಕಾಶ ಇದೆ
ಹವಾಮಾನ ಆಧಾರಿತ ಬೆಳೆವಿಮೆ ನೋಂದಣಿ ದಿನಾಂಕ ವಿಸ್ತರಣೆಗೆ ಬೇಡಿಕೆ ಸಲ್ಲಿಸಲಾಗಿತ್ತು. ಅದರಂತೆ ಜು.10ರ ವರೆಗೆ ನೋಂದಣಿ ಮಾಡಲು ಸರಕಾರದಿಂದ ಆದೇಶ ಬಂದಿದೆ.
-ಭುವನೇಶ್ವರಿ, ಜಿಲ್ಲಾ ಉಪ ನಿರ್ದೇಶಕಿ,
ತೋಟಗಾರಿಕೆ ಇಲಾಖೆ, ಉಡುಪಿ
ವಿಮೆ ಪರಿಹಾರ ಹೆಚ್ಚಿಸಲಿ
ವಿಮೆ ಮೊತ್ತದಲ್ಲಿ ಮಳೆಯಾಗುವ ಜಿಲ್ಲೆಗಳ ನಡುವೆ ತಾರತಮ್ಯ ಸಲ್ಲದು. ಸಾಮೂಹಿಕ ಬೆಳೆ ನಾಶವಾದರೆ ಮಾತ್ರ ಪರಿಹಾರ ದೊರೆಯುವ ಕಾರಣ ಪರಿಹಾರದ ಮೊತ್ತ ಮಿತಿ ಹೆಚ್ಚಿಸಿದಷ್ಟೂ ರೈತರಿಗೆ ಅನುಕೂಲ.
– ವಿಕಾಸ್ ಹೆಗ್ಡೆ ಕೆ.,
ಭಾರತೀಯ ಕಿಸಾನ್ ಸಂಘದ ಪ್ರಧಾನ ಕಾರ್ಯದರ್ಶಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕನ್ನಡಕುದ್ರು: ತೆಂಗಿನ ಮರಗಳಿಗೆ ಕೀಟ ಬಾಧೆ: ಕೃಷಿ ವಿಜ್ಞಾನಿಗಳ ತಂಡ ಭೇಟಿ; ಪರಿಶೀಲನೆ
“ಆಟ’ಕ್ಕೆ ಅಂತಾರಾಷ್ಟ್ರೀಯ ದಿನ ನಿಗದಿಗೆ ಹಕ್ಕೊತ್ತಾಯ
Pernankila Temple: ಪೆರ್ಣಂಕಿಲ ದೇಗುಲ: ಧಾರ್ಮಿಕ ಪ್ರಕ್ರಿಯೆ
Kaup ಸುಗ್ಗಿ ಮಾರಿಪೂಜೆ ಸಂಪನ್ನ: 2 ಲಕ್ಷಕ್ಕೂ ಅಧಿಕ ಭಕ್ತರಿಂದ ಕ್ಷೇತ್ರ ದರ್ಶನ
Vadabandeshwara Temple: ವಡಭಾಂಡೇಶ್ವರ ಬಲರಾಮ ದೇವಸ್ಥಾನ: ವೈಭವದ ಮಹಾ ರಥೋತ್ಸವ ಸಂಪನ್ನ