ಕೋಟ್ಯಂತರ ರೂ. ಆದಾಯದ ದೇಗುಲ: ಅಂಜನಾದ್ರಿ ವಶಕ್ಕೆ ರಾಜವಂಶಸ್ಥರ-ಬಾಬಾ ಸಿದ್ಧತೆ!
ಸರ್ಕಾರ ದೇಗುಲಗಳನ್ನು ಖಾಸಗಿಯವರಿಗೆ ಕೊಡುವ ಹೇಳಿಕೆ ಮತ್ತಷ್ಟು ಮಹತ್ವ ಪಡೆದಿದೆ.
Team Udayavani, Jan 7, 2022, 3:48 PM IST
ಗಂಗಾವತಿ: ತಾಲೂಕಿನ ಇತಿಹಾಸ ಪ್ರಸಿದ್ಧ ಕಿಷ್ಕಿಂದಾ ಅಂಜನಾದ್ರಿ ಬೆಟ್ಟದ ಶ್ರೀ ಆಂಜನೇಯ ದೇಗುಲ ವಶಕ್ಕೆ ಪಡೆಯಲು ಆನೆಗೊಂದಿ ರಾಜವಂಶಸ್ಥರು ಹಾಗೂ ಅರ್ಚಕ ಮಹಾಂತ ವಿದ್ಯಾದಾಸ ಬಾಬಾ ಸಿದ್ಧತೆ ನಡೆಸಿದ್ದು, ಅಗತ್ಯ ದಾಖಲೆಗಳೊಂದಿಗೆ ಸರ್ಕಾರದ ಮುಂದೆ ಹಕ್ಕು ಮಂಡನೆಗೆ ಸಿದ್ಧರಾಗಿದ್ದಾರೆ.
ಸರ್ಕಾರಿ ವ್ಯಾಪ್ತಿಯಲ್ಲಿರುವ ದೇಗುಲಗಳನ್ನು ಖಾಸಗೀಕರಣ ಮಾಡಲು ಅಗತ್ಯ ತಯಾರಿ ನಡೆಸಲಾಗುತ್ತಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ ಬೆನ್ನಲ್ಲೇ ತಾಲೂಕಿನ ಕಿಷ್ಕಿಂದಾ ಅಂಜನಾದ್ರಿ ದೇಗುಲ ಸುಪರ್ದಿಗೆ ಪಡೆಯಲು ಆನೆಗೊಂದಿ ರಾಜರು ಮತ್ತು ಪ್ರಸ್ತುತ ಅರ್ಚಕ ವಿದ್ಯಾದಾಸ ಬಾಬಾ ಪೈಪೋಟಿಗೆ ಬಿದ್ದಂತೆ ಸಕಲ ಸಿದ್ಧತೆ ನಡೆಸಿದ್ದಾರೆ.
ಕಿಷ್ಕಿಂದಾ ಅಂಜನಾದ್ರಿ ದೇಗುಲವನ್ನು ಹಲವು ದಶಕಗಳ ಕಾಲ ಆನೆಗೊಂದಿ ರಾಜರು ನೋಡಿಕೊಳ್ಳುತ್ತಿದ್ದರು. ಪೂಜೆ ಇತರೆ ಧಾರ್ಮಿಕ ಕಾರ್ಯ ಮಾಡಲು ಅರ್ಚಕ ಮಹಾಂತ ವಿದ್ಯಾದಾಸಬಾಬಾ ಅವರನ್ನು ನೇಮಕ ಮಾಡಿದ ನಂತರ ಬಾಬಾ ಪ್ರತ್ಯೇಕ ಟ್ರಸ್ಟ್ ರಚನೆ ಮಾಡಿ ರಾಜವಂಶಸ್ಥರನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆಂದು ಬಾಬಾ ಅವರನ್ನು ಪದಚ್ಯುತಿ ಮಾಡಲಾಯಿತು.
ಬಾಬಾ ಭಕ್ತರು ಮತ್ತು ರಾಜರ ನೇತೃತ್ವದ ಟ್ರಸ್ಟ್ ನಡುವೆ ಸಂಘರ್ಷ ಏರ್ಪಟ್ಟಿದ್ದರಿಂದ ಅಂದಿನ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಪೊಲೀಸ್ ಹಾಗೂ ಕಂದಾಯ ಇಲಾಖೆ ವರದಿ ಆಧರಿಸಿ ದೇಗುಲವನ್ನು 2018, ಜು.23ರಂದು ಜಿಲ್ಲಾಡಳಿತದ ವಶಕ್ಕೆ ತೆಗೆದುಕೊಳ್ಳಲಾಯಿತು. ಸರ್ಕಾರದ ವಶಕ್ಕೆ ದೇಗುಲ ಬಂದ ನಂತರ ಭಕ್ತರ ಕಾಣಿಕೆ ಹುಂಡಿ ಹಾಗೂ ವಾಹನಗಳ ಪಾರ್ಕಿಂಗ್, ಇತರೆ ಆದಾಯ ಸೇರಿ ಇದುವರೆಗೂ ಸುಮಾರು 4 ಕೋಟಿ ರೂ. ದೇಗುಲ ಕಮಿಟಿಯ
ಬ್ಯಾಂಕ್ ಖಾತೆಯಲ್ಲಿದೆ. ಪ್ರತಿ 2-3 ತಿಂಗಳು, ಕೆಲವೊಮ್ಮೆ ಒಂದೇ ತಿಂಗಳಿನಲ್ಲಿ ಹುಂಡಿ ಎಣಿಕೆ ಮಾಡಲಾಗುತ್ತಿದ್ದು, ಕನಿಷ್ಟ 10 ಲಕ್ಷ ರೂ. ಸಂಗ್ರಹವಾಗುತ್ತಿದೆ. ಇಷ್ಟು ಆದಾಯ ಬರುವ ಅಂಜನಾದ್ರಿಯನ್ನು ತಮ್ಮ ವಶಕ್ಕೆ ಪಡೆಯಲು ಆನೆಗೊಂದಿ ರಾಜರು, ವಿದ್ಯಾದಾಸಬಾಬಾ, ಇತರೆ ಸಂಘ-ಸಂಸ್ಥೆ ಹಾಗೂ ಟ್ರಸ್ಟ್ನವರು ಸರ್ಕಾರದ ಮೇಲೆ ಒತ್ತಡ ಹಾಕುವ ಯತ್ನ ನಡೆಸಿದ್ದಾರೆ.
ಅಂಜನಾದ್ರಿ ದೇಗುಲದ ಮಾಲೀಕತ್ವ ತಮ್ಮದೆಂದು ಮೂರು ವರ್ಷಗಳ ಹಿಂದೆ ಧಾರವಾಡ ಹೈಕೋರ್ಟ್ನಲ್ಲಿ ರಾಜಮನೆತನದ ನೇತೃತ್ವದ ಅಂಜಿನಿದೇವಿ ಚಾರಿಟೇಬಲ್ ಟ್ರಸ್ಟ್ ಮತ್ತು ವಿದ್ಯಾದಾಸ ಬಾಬಾ ನೇತೃತ್ವದ ಟ್ರಸ್ಟ್ ದಾವೆ ಹೂಡಿದ್ದು, ಇನ್ನೂ ನಿರ್ಣಯವಾಗಿಲ್ಲ. ಈ ಮಧ್ಯೆ ಸರ್ಕಾರ ದೇಗುಲಗಳನ್ನು ಖಾಸಗಿಯವರಿಗೆ ಕೊಡುವ ಹೇಳಿಕೆ ಮತ್ತಷ್ಟು ಮಹತ್ವ ಪಡೆದಿದೆ.
ನೂರಾರು ವರ್ಷಗಳಿಂದ ರಮಾನಂದ ಸಂಪ್ರದಾಯದಂತೆ ಉತ್ತರ ಭಾರತದ ಅರ್ಚಕರು ಅಂಜನಾದ್ರಿಯ ನೇತೃತ್ವ ವಹಿಸಿಕೊಂಡು ಪೂಜೆ, ಧಾರ್ಮಿಕ ಕಾರ್ಯ ಮಾಡುತ್ತಿದ್ದಾರೆ. ಅಂಜನಾದ್ರಿಯಲ್ಲಿ ಅರ್ಚಕ ನಾರಾಯಣ ಗುರು, ಲಕಡದಾಸಬಾಬಾ, ತುಳಸಿದಾಸ ಸೇರಿ ಹಲವರು ಅರ್ಚಕರಾಗಿದ್ದರು. ನಾನು ಸಹ ರಮಾನಂದ ಪರಂಪರೆಯಲ್ಲೇ ಅರ್ಚಕನಾಗಿ ನೇಮಕವಾಗಿದ್ದೇನೆ.
ದೇಶ, ವಿದೇಶದ ಭಕ್ತರು ಇಲ್ಲಿಗೆ ಬರುವಂತೆ ಪ್ರೇರಣೆ ನೀಡಿದ್ದು, ನಾವು ಇಲ್ಲಿಗೆ ಬಂದ ನಂತರ ಅಭಿವೃದ್ಧಿ ಕಾರ್ಯಗಳು ಜರುಗಿವೆ. ಉತ್ತರದಲ್ಲಿ ಭದ್ರಿನಾಥ, ಪಶುಪತಿನಾಥ, ಕೇದಾರ್ ದೇಗುಲಗಳಲ್ಲಿ ಕರ್ನಾಟಕದ ಅರ್ಚಕರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಗಳು ನಡೆಯುವಂತೆ ಅಂಜನಾದ್ರಿಯಲ್ಲಿ ಉತ್ತರದ ಸಾಧು ಸಂತರು ದೇಗುಲದ ಮುಖ್ಯಸ್ಥರಾಗಿದ್ದಾರೆ. ಇದರಲ್ಲಿ ಆನೆಗೊಂದಿ ರಾಜರ ಪಾತ್ರ ಏನೂ ಇಲ್ಲ. ಆದ್ದರಿಂದ ಸರ್ಕಾರ ತಮಗೆ ದೇಗುಲ ವಹಿಸಿಕೊಡುವ ಭರವಸೆ ಇದೆ.
*ಮಹಾಂತ ವಿದ್ಯಾದಾಸಬಾಬಾ, ಅರ್ಚಕ
ತಲೆ ತಲಾಂತರದಿಂದಲೂ ಆನೆಗೊಂದಿ ರಾಜಮನೆತನದವರು ಅಂಜನಾದ್ರಿ ಸೇರಿ ಈ ಭಾಗದ ಪ್ರಮುಖ ದೇಗುಲ ಮುಖ್ಯಸ್ಥರಾಗಿ ಧಾರ್ಮಿಕ ಕಾರ್ಯ ನಡೆಯಲು ನೆರವು ನೀಡಿದ್ದಾರೆ. ಈಗ ಬೇರೆಡೆಯಿಂದ ಆಗಮಿಸಿದವರು ದೇಗುಲದ ಮಾಲೀಕರಾಗಲು ಹೇಗೆ ಸಾಧ್ಯ. ಆದ್ದರಿಂದ ಅಂಜನಾದ್ರಿ, ಪಂಪಾ ಸರೋವರ, ಆದಿಶಕ್ತಿ, ಋಷಿಮುಖ ದೇಗುಲಗಳನ್ನು ಒಂದು ಟ್ರಸ್ಟ್ ಅಡಿಯಲ್ಲಿ ತಂದು ಸರ್ಕಾರ ರಾಜರ ನೇತೃತ್ವದ ಟ್ರಸ್ಟ್ಗೆ ವಹಿಸಬೇಕು. ಈಗಾಗಲೇ ಆನೆಗೊಂದಿ ಹಳೆಯ ಮಂಡಲ ಪ್ರಮುಖ ಸಭೆ ನಡೆಸಿದ್ದು ಸರ್ಕಾರಕ್ಕೆ ದೇಗುಲ ಮಾಲೀಕತ್ವ ನೀಡಬೇಕು. ಇಲ್ಲವೇ ಸರ್ಕಾರದ ಅಧಿಧೀನದಲ್ಲೇ ದೇಗುಲಗಳು ಮುಂದುವರಿಸುವಂತೆ ಮನವಿ ಮಾಡಲಾಗುತ್ತದೆ.
ಲಲಿತಾರಾಣಿ ಶ್ರೀರಂಗದೇವರಾಯಲು, ರಾಜವಂಶಸ್ಥರು
ಕೆ. ನಿಂಗಜ್ಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್ ಕಾಸ್ಟಿಂಗ್ ಜಾರಿಯಾಗಲಿ
Dr.G. Parameshwara ಅವರ ಜಾತಿ ನಿಂದನೆ; ಬೀದರ್ ವ್ಯಕ್ತಿ ವಿರುದ್ಧ ಕೇಸ್
Rain; ಬೀದರ್,ಕೊಪ್ಪಳದಲ್ಲಿ ಸಿಡಿಲಿನ ಆರ್ಭಟಕ್ಕೆ ಇಬ್ಬರು ಮೃತ್ಯು
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Gangavathi; ಪರಾರಿಯಾಯ್ತು ಮೇಕೆ ಹಿಡಿಯಲು ಬಂದು ಸೆರೆಯಾಗಿದ್ದ ಚಿರತೆ