ಸೈಬರ್ ಕ್ರೈಂ; ಪತ್ತೆ ಇಲ್ಲ, ಶಿಕ್ಷೆಯೂ ಇಲ್ಲ!
ಸೈಬರ್ ವಂಚಕರಿಗೆ ವಿದ್ಯಾವಂತರೇ ಹೆಚ್ಚು ಬಲಿ
Team Udayavani, Apr 20, 2022, 9:14 AM IST
ಬೆಂಗಳೂರು: ವರ್ಷಗಳು ಉರುಳಿದಂತೆ ಸೈಬರ್ ಅಪರಾಧಗಳ ಸಂಖ್ಯೆ ಬೆಟ್ಟದಷ್ಟಾಗುತ್ತಿದ್ದರೂ, ಶಿಕ್ಷೆಗೊಳಗಾದವರ ಸಂಖ್ಯೆ ಮಾತ್ರ ಎರಡಂಕಿಯೂ ದಾಟುತ್ತಿಲ್ಲ! ವಂಚಕರು ಲಕ್ಷ ಲಕ್ಷ ದೋಚುತ್ತಲೇ ಇದ್ದರೂ, ಕಾನೂನಿನ ಕೈಗೆ ಮಾತ್ರ ಅವರು ಸಿಕ್ಕಿಬೀಳುತ್ತಲೇ ಇಲ್ಲ!
ಹೌದು. ಸೈಬರ್ ಅಪರಾಧಗಳನ್ನು ಮಟ್ಟ ಹಾಕಲು ಎಷ್ಟೇ ಕಠಿಣ ಕಾನೂನುಗಳು ಜಾರಿಗೆ ತಂದರೂ, ಏನೇ ಆಧುನಿಕ ತಂತ್ರಜ್ಞಾನ ಬಳಸಿದರೂ ಅದಕ್ಕೆ ಸವಾಲು ಎಂಬಂತೆ ರಾಜ್ಯ ದಲ್ಲಿ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚುತ್ತಲೇ ಇವೆ. ವಂಚಕರ ಪತ್ತೆ ಪೊಲೀಸರಿಗೆ ಕಬ್ಬಿಣದ ಕಡಲೆಯಾಗಿದೆ. ದಾಖಲಾದ ಪ್ರಕರಣಗಳ ಪೈಕಿ ಪತ್ತೆಯಾಗದ ಪ್ರಕರಣಗಳದ್ದೇ ಸಿಂಹಪಾಲು.
ವಿಶೇಷವೆಂದರೆ, ಸೈಬರ್ ವಂಚಕರ ಜಾಲಕ್ಕೆ ಬಲಿಯಾಗುತ್ತಿರುವವರಲ್ಲಿ ವಿದ್ಯಾವಂತರೇ ಹೆಚ್ಚಿದ್ದಾರೆ. ಅಷ್ಟೇ ಅಲ್ಲ, ವಂಚಕರಿಂದಾಗಿ ಜನರು ಕಳೆದುಕೊಂಡ ಹಣದ ಪೈಕಿ ಈವರೆಗೆ ಜಪ್ತಿ ಮಾಡಲು ಸಾಧ್ಯವಾಗಿದ್ದು ಕೇವಲ ಶೇ.20ರಿಂದ 21ರಷ್ಟು ಮಾತ್ರ.
ಕೊರೊನಾ ಕಾಲದಲ್ಲೂ ವಂಚನೆ: ಕಳೆದ 4 ವರ್ಷಗಳ ಅಂಕಿ-ಅಂಶಗಳ ಪ್ರಕಾರ, 2019ರಲ್ಲಿ ಇಂಥ ವಂಚನೆ ಪ್ರಕರಣಗಳ ಸಂಖ್ಯೆ 11 ಸಾವಿರದ ಗಡಿ ದಾಟಿದೆ. 2020 ಮತ್ತು 2021ರ ಕೊರೊನಾದಿಂದ ಜನ ತತ್ತರಿಸಿದ್ದಾಗಲೂ ಸೈಬರ್ ವಂಚಕರು ಕೈಚಳಕ ತೋರಿದ್ದಾರೆ. 2020ರಲ್ಲಿ 10 ಸಾವಿರ ಮತ್ತು 2021ರಲ್ಲಿ 8 ಸಾವಿರಕ್ಕೂ ಹೆಚ್ಚು ವಂಚನೆ ನಡೆದಿದೆ.
ಈ ವರ್ಷ ಮಾರ್ಚ್ ಅಂತ್ಯದವರೆಗೆ ಇದು 3 ಸಾವಿರ ಸಮೀಪಿಸಿದೆ. ಸೈಬರ್ ಕ್ರೈಂ ಪ್ರಕರಣಗಳಲ್ಲಿ “ಐಟಿ ಹಬ್’ ಬೆಂಗಳೂರು ಮೊದಲ ಸ್ಥಾನದಲ್ಲಿದ್ದರೆ, ಮೈಸೂರು, ಹುಬ್ಬಳ್ಳಿ, ತುಮಕೂರು, ರಾಮನಗರ, ಶಿವಮೊಗ್ಗ ನಂತರದ ಸ್ಥಾನಗಳನ್ನು ಪಡೆದುಕೊಂಡಿವೆ.
ಹೆಚ್ಚು: ದಾಖಲಾದ ಪ್ರಕರಣಗಳಿಗಿಂತ ಪತ್ತೆಯಾಗದ ಪ್ರಕರಣಗಳ ಸಂಖ್ಯೆಯೇ ಹೆಚ್ಚು. ಪೊಲೀಸರ ಅಂಕಿ-ಅಂಶಗಳ ಪ್ರಕಾರ, ಕಳೆದ 4 ವರ್ಷಗಳಲ್ಲಿ ಸುಮಾರು ಶೇ.22ರಷ್ಟು ಪ್ರಕರಣಗಳು ಮಾತ್ರ ಪತ್ತೆಯಾಗಿವೆ. ಬಾಕಿ ಪ್ರಕರಣಗಳ ಪತ್ತೆ ಕಾರ್ಯ ಇನ್ನೂ ನಡೆಯುತ್ತಿದೆ.
ಪತ್ತೆ ಕಬ್ಬಿಣದ ಕಡಲೆ: ಸೈಬರ್ ಕಳ್ಳರು ನೆರೆಯ ಒಡಿಶಾ, ಮಹಾರಾಷ್ಟ್ರ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಅಸ್ಸಾಂ, ಪಶ್ಚಿಮ ಬಂಗಾಳ ಹೀಗೆ ದೇಶ ವಿವಿಧ ರಾಜ್ಯಗಳು ಅಥವಾ ವಿದೇಶದಲ್ಲಿ ಕುಳಿತು ಕೇವಲ ಮೊಬೈಲ್ ನಂಬರ್, ಕ್ರೆಡಿಟ್, ಡೆಬಿಟ್ ಕಾರ್ಡ್ ಮಾಹಿತಿ ಪಡೆದು ಕ್ಷಣಾರ್ಧದಲ್ಲಿಯೇ ಖಾತೆಯನ್ನು ಬರಿದಾಗಿಸುತ್ತಿದ್ದಾರೆ. ಅಂತಹ ರಹಸ್ಯ ಸ್ಥಳದಲ್ಲಿ ಕುಳಿತು ಅಮಾಯಕ ಜನರ ಹಣ ದೋಚುವ ವಂಚಕರ ಪತ್ತೆ ಪೊಲೀಸರಿಗೆ ಕಬ್ಬಿಣ ಕಡಲೆಯಾಗಿದೆ. ಕೆಲವೊಮ್ಮೆ ಐಪಿ ವಿಳಾಸ ಸಿಕ್ಕರೆ, ಕೃತ್ಯ ಎಸಗಿದ ವ್ಯಕ್ತಿ ಸಿಗುವುದಿಲ್ಲ. ಆರೋಪಿ ಸಿಕ್ಕರೂ, ಆರೋಪ ಸಾಬೀತಿಗೆ ಬೇಕಾದ ಸಾಕ್ಷ್ಯ ದೊರೆಯುವುದಿಲ್ಲ. ಹೀಗಾಗಿ ಆರೋಪಿಗಳನ್ನು ಬಂಧಿಸಿದರೂ ಅವರಿಗೆ ಶಿಕ್ಷೆಯಾಗುವ ಪ್ರಮಾಣ ಕಡಿಮೆ ಎಂದು ಸೈಬರ್ ಕ್ರೈಂ ಮೂಲಗಳು ಹೇಳುತ್ತವೆ.
ಒಟಿಪಿ ವಂಚನೆ: ಪೊಲೀಸರ ಪ್ರಕಾರ ಸೈಬರ್ ವಂಚನೆಯಲ್ಲಿ ಒಟಿಪಿ ವಂಚನೆ ಪ್ರಕರಣಗಳೇ ಹೆಚ್ಚಾಗಿವೆ. ಹೆಚ್ಚು ವಿದ್ಯಾವಂತರೇ ಸೈಬರ್ ವಂಚಕರು ಕರೆ ಮಾಡಿದ ಕೂಡಲೇ ತಮ್ಮ ಮೊಬೈಲ್ಗೆ ಬರುವ ಒಟಿಪಿ ನೀಡಿ ಲಕ್ಷ-ಲಕ್ಷ ಕಳೆದುಕೊಳ್ಳುತ್ತಿದ್ದಾರೆ. 2019ರಲ್ಲಿ 4,254 ಪ್ರಕರಣಗಳಲ್ಲಿ 67 ಪ್ರಕರಣ ಪತ್ತೆಯಾಗಿದೆ. 2020ರಲ್ಲಿ 2,545 ಪ್ರಕರಣಗಳ ಪೈಕಿ 477 ಪತ್ತೆಯಾಗಿವೆ. 2021ರಲ್ಲಿ 2130ರ ಪೈಕಿ 472, 2022ರಲ್ಲಿ 450ರಲ್ಲಿ 37 ಪತ್ತೆಯಾಗಿವೆ. ಸೋಷಿಯಲ್ ಮಿಡಿಯಾ ವಂಚನೆಯಲ್ಲಿ 2019ರಲ್ಲಿ 421ರಲ್ಲಿ 57, 2020ರಲ್ಲಿ 2095 ಪೈಕಿ 796, 2021ರಲ್ಲಿ 1335 ಪೈಕಿ 352, 2022ರಲ್ಲಿ 249ರಲ್ಲಿ 6 ಪತ್ತೆಯಾಗಿವೆ. ಇನ್ನೂ ಆನ್ಲೈನ್ ಫಿಶಿಂಗ್ ಕೇಸ್ಗಳು, 2019ರಲ್ಲಿ 2737ರಲ್ಲಿ 116, 2020ರಲ್ಲಿ 3215ರಲ್ಲಿ 633, 2021ರಲ್ಲಿ 2692ರಲ್ಲಿ 521, 2022ರಲ್ಲಿ 520ರ ಪೈಕಿ 23 ಪ್ರಕರಣಗಳು ಸಿಕ್ಕಿವೆ.
ಹಣ ಜಪ್ತಿಯೂ ಕ್ಷೀಣ: ಕಳೆದ 4 ವರ್ಷಗಳಲ್ಲಿ ಪ್ರತಿ ವರ್ಷ ವಂಚನೆ ಹಣ ಕೋಟಿ ಲೆಕ್ಕದಲ್ಲಿ ಏರಿಕೆ ಯಾಗುತ್ತಿದೆ. ಆದರೆ, ಆರೋಪಿಗಳ ಬಂಧನದ ಜತೆ, ಅವರಿಂದ ಜಪ್ತಿ ಮಾಡಲಾದ ಹಣ ಪ್ರಮಾಣ ಶೇ.20ರಿಂದ 20ರಷ್ಟು ಮಾತ್ರ. ಕೆಲ ಸಂದರ್ಭದಲ್ಲಿ ವಂಚಕ ಎಲ್ಲ ಹಣವನ್ನು ದುರ್ಬಳಕೆ ಮಾಡಿ ಕೊಂಡಿರುತ್ತಾನೆ.
ಸೈಬರ್ ಕ್ರೈಂ ಬಗ್ಗೆ ಎಚ್ಚರಿಕೆ ವಹಿಸಿ:
ಸೈಬರ್ ಕ್ರೈಂ ಎಂದರೆ, ಒಟಿಪಿ, ಸಾಮಾಜಿಕ ಜಾಲ ತಾಣ ವಂಚನೆ, ಕ್ರೆಡಿಟ್, ಡೆಬಿಟ್ ಕಾರ್ಡ್ ವಂಚನೆ, ಆನ್ಲೈನ್ ಶಾಪಿಂಗ್ ಮಾತ್ರವಲ್ಲ. ಸೈಬರ್ ಅಶ್ಲೀಲತೆ, ಸೈಬರ್ ಮಾನಹಾನಿ, ಜೂಜು, ಆನ್ಲೈನ್ ಭಯೋತ್ಪಾದನೆ, ಆನ್ಲೈನ್ ಗೇಮಿಂಗ್, ಬ್ಲ್ಯಾಕ್ ಮೇಲ್. ಸಾಲ ಕೊಡುವ ಸೋಗಿನಲ್ಲಿ ಸುಸ್ತಿದಾರರ ಮಾನ ಹಾನಿ ಮಾಡುವಂತಹ ಪ್ರಕರಣಗಳು. ತೀರಾ ಇತ್ತೀಚೆಗೆ ಬ್ಯಾಂಕ್, ಕ್ರೆಡಿಟ್, ಡೆಬಿಟ್ ಕಾರ್ಡ್ಗಳ ಮಾಹಿತಿ ಕೊಡದೆಯೂ ಸೈಬರ್ ವಂಚಕರು ಹಣ ದೋಚುತ್ತಿದ್ದಾರೆ. ಗೂಗಲ್ ಸರ್ಜ್ ಎಂಜಿನ್ನಲ್ಲಿ ಸಿಗುವ ಮೊಬೈಲ್ ನಂಬರ್ಗಳಿಗೆ ಕರೆ ಮಾಡಿದರೂ ಹಣ ಕಡಿತವಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ ಮೊಬೈಲ್, ಕಂಪ್ಯೂಟರ್, ಲ್ಯಾಪ್ಟಾಪ್, ಫೇಸ್ಬುಕ್, ಇನ್ಸ್ಟಾಗ್ರಾಂ, ಟ್ವಿಟರ್ ಸೇರಿ ಎಲ್ಲ ಮಾದರಿಯ ಸಾಮಾಜಿಕ ಜಾಲತಾಣ ಬಳಕೆದಾರರು ಅಪರಿಚಿತರ ಸಂದೇಶ, ಕರೆಗಳ ಬಗ್ಗೆ ಜಾಗ್ರತೆ ವಹಿಸಬೇಕಿದೆ.
ಸೈಬರ್ ಕ್ರೈಂ ಪತ್ತೆಗೆ ಸಾಕಷ್ಟು ತಾಂತ್ರಿಕ ತನಿಖೆ ನಡೆಸಬೇಕಿರುತ್ತದೆ. ಹೀಗಾಗಿ ಪ್ರಕರಣಗಳ ಇತ್ಯರ್ಥ ನಿಧಾನವಾಗುತ್ತಿದೆ. ಆದರೂ ಪತ್ತೆ ಕಾರ್ಯ ನಿರಂತರವಾಗಿ ಸಾಗಿದೆ. ● ಕಮಲ್ ಪಂತ್, ನಗರ ಪೊಲೀಸ್ ಆಯುಕ್ತ
-ಮೋಹನ್ ಭದ್ರಾವತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ
MUST WATCH
ಹೊಸ ಸೇರ್ಪಡೆ
Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’
Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್ ಹೆಗ್ಡೆ
Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ
Subramanya ಏನೆಕಲ್ಲು: ಕಾರಿಗೆ ಗೂಡ್ಸ್ ಆಟೋ ಢಿಕ್ಕಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ