ದಾಂಡೇಲಿ : ಮಾಸ್ಕ್ ಧರಿಸದವರ ಮೇಲೆ ದಂಡ ಅಸ್ತ್ರ : ಅಲ್ಲಲ್ಲಿ ಗಂಟಲು ದ್ರವ ಪರೀಕ್ಷೆಗೆ ಕ್ರಮ
Team Udayavani, Aug 1, 2021, 4:53 PM IST
ದಾಂಡೇಲಿ : ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಕೊರೊನಾ 3ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ನಗರದಲ್ಲಿಯೂ ತಾಲೂಕಾಡಳಿತ, ನಗರಾಡಳಿತ, ಸಾರ್ವಜನಿಕ ಆರೋಗ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಲು ಮುಂದಾಗಿದೆ.
ಈ ನಿಟ್ಟಿನಲ್ಲಿ ಭಾನುವಾರ ಬೆಳಗ್ಗಿನಿಂದ ನಗರದಲ್ಲಿ ಮಾಸ್ಕ್ ಧರಿಸದೇ ಅಡ್ಡಾಡುವವರನ್ನು ಹಾಗೂ ನಗರಕ್ಕೆ ಬರುವವರಲ್ಲಿ ಮಾಸ್ಕ್ ಧರಿಸದೇ ಬರುತ್ತಿರುವವರನ್ನು ಗುರುತಿಸಿ ದಂಡ ಆಕರಣೆ ಮಾಡಿರುವುದರ ಜೊತೆಯಲ್ಲಿ ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಲಾಯ್ತು. ನಗರದ ಸೋಮಾನಿ ವೃತ್ತದ ಹತ್ತಿರ, ಸಂಡೆ ಮಾರ್ಕೆಟ್, ಬಸ್ ನಿಲ್ದಾಣ ಮತ್ತು ಕೆಸಿ ವೃತ್ತದಲ್ಲಿ ತಹಶೀಲ್ದಾರ್ ಶೈಲೇಶ ಪರಮಾನಂದ, ಪೌರಾಯುಕ್ತರಾದ ಆರ್.ಎಸ್.ಪವಾರ್, ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ:ರಾಜೇಶ ಪ್ರಸಾದ, ಪಿಎಸೈ ಯಲ್ಲಪ್ಪ.ಎಸ್ ಅವರ ನೇತೃತ್ವದಲ್ಲಿ ತಹಶೀಲ್ದಾರ್ ಕಚೇರಿ, ನಗರ ಸಭೆ ಹಾಗೂ ಸಾರ್ವಜನಿಕ ಆಸ್ಪತ್ರೆ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ತಂಡ ಕಾರ್ಯಾಚರಣೆಗಿಳಿದಿತ್ತು.
ಇದನ್ನೂ ಓದಿ :ಕಾರ್ಮಿಕರ ಕೊರತೆಯಿಂದಾಗಿ ಮೀನುಗಾರಿಕೆಗೆ ಸಮಸ್ಯೆ : ಮೇಧಾ ಕೇರಕರ್
ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ನಗರಕ್ಕೆ ಬರುವ ಪ್ರವಾಸಿಗರ ವಾಹನಗಳನ್ನು ಕೆ.ಸಿ.ವೃತ್ತದಲ್ಲಿ ತಪಾಸಣೆ ಮಾಡಲಾಯ್ತು. ಮಾಸ್ಕ್ ಧರಿಸದವರಿಗೆ ದಂಡ ಆಕರಿಸಿ, ಕೆ.ಸಿ ವೃತ್ತದಲ್ಲೆ ಸಾರ್ವಜನಿಕ ಆಸ್ಪತ್ರೆಯ ಆಶ್ರಯದಡಿ ಗಂಟಲು ದ್ರವ ಪರೀಕ್ಷೆಯನ್ನು ಮಾಡಿಸಲಾಯ್ತು. ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ: ರಾಜೇಶಪ್ರಸಾದ ಅವರು ನಗರದ ಕೆ.ಸಿ ವೃತ್ತದಲ್ಲಿ ಮಾಸ್ಕ್ ಧರಿಸದೇ ಸಾರಿಗೆ ಬಸ್ ಚಲಾಯಿಸುತ್ತಿದ್ದ ಚಾಲಕನನ್ನು ತರಾಟೆಗೆ ತೆಗೆದುಕೊಂಡು ದಂಡ ಕಟ್ಟಿಸುವಲ್ಲಿ ಯಶಸ್ವಿಯಾದರಲ್ಲದೇ ಮಾಸ್ಕ್ ಧರಿಸುವಿಕೆಯ ಅನಿವಾರ್ಯತೆಯನ್ನು ತಿಳಿ ಹೇಳಿ ಜಾಗೃತಿ ಮೂಡಿಸಿದರು.
ನಗರದ ಸಮೀಪದ ಬರ್ಚಿ ಚೆಕ್ ಪೊಸ್ಟ್ ಬಳಿಯೂ ವಿಶೇಷ ತಂಡವನ್ನು ರಚಿಸಿ, ನಿಯೋಜಿಸಲಾಗಿದ್ದು ಅಲ್ಲಿಯೂ ಗಂಟಲು ದ್ರವ ಪರೀಕ್ಷೆಗೆ ಅಗತ್ಯ ಕ್ರಮವನ್ನು ಕೈಗೊಳ್ಳಲಾಗಿದೆ. ಇನ್ನೊಂದು ತಂಡ ನಗರ ಹಾಗೂ ನಗರದ ಸುತ್ತಮುತ್ತಲ ಹೋಂ ಸ್ಟೇ, ರೆಸಾರ್ಟಿಗೆ ತೆರಳಿ ಪ್ರವಾಸಿಗರ ಗಂಟಲು ದ್ರವ ಪರೀಕ್ಷೆಯನ್ನು ಮಾಡುತ್ತಿದೆ.