ಹುಣಸೂರು: ಚಿಲ್ಕುಂದದಲ್ಲಿ ಕೊಳೆರೋಗ, ಹುಳುಬಾಧೆ ಉಪಕ್ರಮಗಳ ಕುರಿತು ಪ್ರಾತ್ಯಕ್ಷಿಕೆ
Team Udayavani, Jun 30, 2022, 12:29 PM IST
ಹುಣಸೂರು: ಪಾಲ್ ಸೈನಿಕ ಹುಳು ಬಾಧೆಯಿಂದ ಹೈರಾಣಾಗಿರುವ ತಾಲೂಕಿನ ವಿವಿಧ ತಾಲೂಕುಗಳಿಗೆ ಮಂಡ್ಯದ ವಿ.ಸಿ. ಫಾರಂ ವಿಜ್ಞಾನಿಗಳು ಭೇಟಿ ನೀಡಿ ಹುಳುಬಾಧೆಗೆ ಒಳಗಾಗಿರುವ ಬೆಳೆಗಳಿಗೆ ಔಷದೋಪಚಾರ ಮಾಡುವ ಕುರಿತು ಪ್ರಾತ್ಯಕ್ಷಿಕೆ ಮೂಲಕ ತಿಳಿಸಿಕೊಟ್ಟರು.
ಹುಣಸೂರು ತಾಲೂಕಿನ ವಿಷಕಂಠ ಮೂರ್ತಿಯವರ ಜಮೀನಿನಲ್ಲಿ ಹುಣಸೂರು ಕೃಷಿ ಸಹಾಯಕ ನಿರ್ದೇಶಕರ ಕಚೇರಿ ವತಿಯಿಂದ ರೋಗಭಾದೆ ನಿಯಂತ್ರಣ ಕುರಿತ ಪ್ರಾತ್ಯಕ್ಷಿಕೆ ಆಯೋಜಿಸಿದ್ದರು.
ಈ ಸಂದರ್ಭದಲ್ಲಿ ಕೃಷಿ ಸಹಾಯಕ ನಿರ್ದೇಶಕ ವೆಂಕಟೇಶ್ ಮಾತನಾಡಿ, ಹವಾಮಾನ ವೈಪರಿತ್ಯ, ಅತಿಯಾದ ಮಳೆ, ಒಣ ಹವೆ, ಹೆಚ್ಚಿನ ರಾಸಾಯನಿಕ ಬಳಕೆ ಸೇರಿದಂತೆ ಹಲವಾರು ಕಾರಣಗಳಿಂದಾಗಿ ಹುಳುಬಾದೆ, ಕೊಳೆರೋಗ ಕಾಣಿಸಿಕೊಳ್ಳುತ್ತಿದ್ದು, ಅನಾವಶ್ಯಕವಾಗಿ ಕ್ರಿಮಿನಾಶಕ ಬಳಕೆ ಮಾಡದಂತೆ ಸೂಚಿಸಿದ ಅವರು ಸಕಾಲದಲ್ಲಿ ಕೃಷಿ ಇಲಾಖೆ, ಅಥವಾ ವಿಜ್ಞಾನಿಗಳ ಸಲಹೆ ಪಡೆದು ರೋಗ ನಿಯಂತ್ರಣಕ್ಕೆ ಮುಂದಾಗಬೇಕೆಂದು ಸಲಹೆ ನೀಡಿದರು.
ವಿಜ್ಞಾನಿಗಳಾದ ಡಾ. ರಘುಪತಿ, ಡಾ. ಗೋವಿಂದರಾಜು, ಡಾ. ಉಮೇಶ್ ನೇತೃತ್ವದ ತಂಡ ಸೈನಿಕ ಹುಳು ಭಾದೆಗೆ ಔಷದೋಪಚಾರ ಮಾಡುವ ಕುರಿತು ಸಮಗ್ರ ಮಾಹಿತಿ ನೀಡಿದರು.
ಮುಸುಕಿನ ಜೋಳಕ್ಕೆ ಪಾಲ್ ಸೈನಿಕ ಹುಳು ಬಾಧೆ: ಮುಸುಕಿನ ಜೋಳದ ಜಮೀನಿನಲ್ಲಿ ಸೈನಿಕ ಹುಳು ಬಾಧೆ ಹತೋಟಿಗೆ ಪ್ರತಿ ಒಂದು ಲೀ. ನೀರಿನೊಂದಿಗೆ ಇಮಾಮೆಕೈನ್ ಬೆಂಜೋಯಿಟ್ 0.4 ಗ್ರಾಂ ಅಥವಾ ಕರೋಜನ್ 0.5 ಎಂ.ಎಲ್. ಬೆರೆಸಿ ಸಿಂಪಡಿಸಬೇಕು.
ಶುಂಠಿ ಕೊಳೆ ರೋಗಕ್ಕೆ: ರಿಡೋಮಿಲ್ ಒಂದು ಲೀ ನೀರಿಗೆ 2 ಗ್ರಾಂ ಅಥವಾ ಕಾಫರ್ ಆಕ್ಸಿಕ್ಲೋರೈಡ್ 2 ಗ್ರಾಂ ಮತ್ತು ಸೈಪ್ರೋಮೈಸಿನ್ ಸಲ್ಫೇಟ್ 1 ಗ್ರಾ ಪ್ರತಿ ಲೀ. ನೀರಿನೊಂದಿಗೆ ಮಿಶ್ರಣ ಮಾಡಿ ಸಿಂಪಡಿಸಬೇಕು ಹಾಗೂ ಕೊಳೆ ರೋಗ ಇದ್ದಲ್ಲಿ ಶುಂಠಿ ಬುಡದ ಸುತ್ತಲೂ ಸುರಿಯಬೇಕು.
ಅಡಿಕೆ ಸುಳಿಕೊಳೆ: ಅಡಿಕೆ ಬೆಳೆಯಲ್ಲಿ ಕಾಯಿ ಕೊಳೆ ಹತೋಟಿಗಾಗಿ 100 ಲೀಟರ್ ನೀರಿನೊಂದಿಗೆ 1 ಕೆ.ಜಿ. ಸುಣ್ಣ, ಬೋರ್ಡೋ ದ್ರಾವಣ ತಯಾರಿಸಿ 1 ಕೆ.ಜಿ.ಮೈಲು ತುತ್ತ ಮಿಶ್ರಣ ಮಾಡಿ ಸಿಂಪಡಿಸಬೇಕೆಂದು ಸಲಹೆ ನೀಡಿದರು.
ಈ ವೇಳೆ ಸಹಾಯಕ ಕೃಷಿ ನಿರ್ದೇಶಕ ವೆಂಕಟೇಶ್, ಕೃಷಿಕ ಸಮಾಜದ ಅಧ್ಯಕ್ಷ ಅರುಣ್ ಕುಮಾರ್, ಸಿ.ಬಿ.ಟಿ.ಕಾಲೋನಿಯ ಆರ್.ಮಹದೇವ್, ಚಿಲ್ಕುಂದದ ಪುಟ್ಟರಾಜು, ಮಹದೇವಶೆಟ್ಟಿ, ಮಹಿಳಾ ಸ್ವಸಹಾಯ ಸಂಘದ ಮಹದೇವಮ್ಮ, ಕೃಷಿ ಅಧಿಕಾರಿಗಳಾದ ವಿನಯ್ ಕುಮಾರ್, ಆತ್ಮ ಯೋಜನೆಯ ಶಶಿಕುಮಾರ್ ಸೇರಿದಂತೆ ಕೃಷಿಕರು ಭಾಗವಹಿಸಿದ್ದರು.