ರೈತರಿಗೆ ನೆರವು ಪ್ರಧಾನಿಗೆ ದೇವೇಗೌಡ ಪತ್ರ
Team Udayavani, Apr 14, 2020, 6:30 AM IST
ಬೆಂಗಳೂರು: ಕೋವಿಡ್ 19 ಲಾಕ್ಡೌನ್ ಹಿನ್ನೆಲೆಯಲ್ಲಿ ಕೃಷಿಕರು, ಕೃಷಿ ಕಾರ್ಮಿಕರು, ದಿನಗೂಲಿ ನೌಕರರು ಸಹಿತ ಶ್ರಮಿಕ ವರ್ಗ ಬೀದಿಗೆ ಬಿದ್ದಿದ್ದು, ಕೇಂದ್ರ ಸರಕಾರ ನೆರವಿಗೆ ಬರಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಮನವಿ ಮಾಡಿದ್ದಾರೆ.
ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಅವರು, ಕರ್ನಾಟಕದಲ್ಲಿ ರೈತರು ಬೆಳೆದಿರುವ ಲಕ್ಷಾಂತರ ಟನ್ ತರಕಾರಿ, ಹೂವು, ಹಣ್ಣು ಮಾರಾಟವಾಗದೆ ರಸ್ತೆಗೆ ಚೆಲ್ಲುವಂತಾಗಿದೆ. ಲಕ್ಷಾಂತರ ಕೂಲಿ ಕಾರ್ಮಿಕರಿಗೆ ದುಡಿಮೆ ಇಲ್ಲದಂತಾಗಿದೆ. ಸರಕಾರವೇ ರೈತರ ಉತ್ಪನ್ನ ಖರೀದಿಸಬೇಕು ಹಾಗೂ ಉಚಿತವಾಗಿ ಸಾಗಾಟ ವ್ಯವಸ್ಥೆ ಮಾಡಬೇಕು. ನರೇಗಾ ಯೋಜನೆಯಡಿ ಕೆಲಸದ ಅಗತ್ಯವಿರುವ ಎಲ್ಲರಿಗೂ ಕೆಲಸ ನೀಡಬೇಕು. ಕೃಷಿ ಹಾಗೂ ತೋಟಗಾರಿಕೆ ವಲಯಕ್ಕೆ ನರೇಗಾ ಯೋಜನೆ ವಿಸ್ತರಿಸಬೇಕು. ರಾಜ್ಯದ ಹಣ್ಣು, ತರಕಾರಿ, ಹೂವು, ಹಾಲು ಹೊರ ರಾಜ್ಯಗಳಿಗೆ ಸಾಗಾಟ ಮಾಡಲು ಅವಕಾಶ ಕಲ್ಪಿಸಬೇಕು. ಜಿಲ್ಲಾಧಿಕಾರಿ ಹಾಗೂ ಕೃಷಿ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಸಮಿತಿ ರಚಿಸಿ ರೈತರ ಬೆಳೆ ನಷ್ಟದ ಬಗ್ಗೆ ಮಾಹಿತಿ ಸಂಗ್ರಹಿಸಿ ಪರಿಹಾರ ನೀಡಬೇಕು. ಆಹಾರ ಮತ್ತು ಸಂಸ್ಕರಣೆಗೆ ಸಂಬಂಧಪಟ್ಟ, ಕೃಷಿ ತೋಟಗಾರಿಕೆ, ಹೈನುಗಾರಿಕೆ ಸಂಬಂಧಿತ ಎಲ್ಲ ಉದ್ಯಮಗಳಿಗೆ ಲಾಕ್ಡೌನ್ನಿಂದ ವಿನಾಯಿತಿ, ತೆರಿಗೆ ವಿನಾಯಿತಿಯನ್ನೂ ನೀಡಬೇಕು ಎಂದು ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.