ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಿ
Team Udayavani, Jan 27, 2020, 3:09 AM IST
ಬೆಂಗಳೂರು: “ಪ್ರಯೋಜನಕ್ಕೆ ಬಾರದ ಕಲ್ಪನೆಗಳು ಮತ್ತು ಮೂಢನಂಬಿಕೆಗಳನ್ನು ತ್ಯಜಿಸಿ, ವೈಜ್ಞಾನಿಕ ಮನೋಭಾವದಿಂದ ದೇಶದ ಪ್ರಗತಿಗೆ ಶ್ರಮಿಸಬೇಕು’ ಎಂದು ನಾಡಿನ ಜನತೆಗೆ ರಾಜ್ಯಪಾಲ ವಜುಭಾಯಿ ವಾಲಾ ಕರೆ ನೀಡಿದ್ದಾರೆ.
ರಾಜ್ಯದಲ್ಲಿ ಅನಿಷ್ಠ ಹಾಗೂ ಅಮಾನವೀಯ ಆಚರಣೆಗಳನ್ನು ನಿಷೇಧಿಸುವ ಸಂಬಂಧ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ತರಲಾಗಿದ್ದ “ಮೌಡ್ಯ ನಿಷೇಧ ಕಾಯ್ದೆ-2017’ನ್ನು ಈಗಿನ ಬಿಜೆಪಿ ಸರ್ಕಾರ ಇದೇ ತಿಂಗಳಲ್ಲಿ ಜಾರಿಗೊಳಿಸಿ ಅಧಿಸೂಚನೆ ಹೊರಡಿಸಿರುವ ಹಿನ್ನೆಲೆಯಲ್ಲಿ ರಾಜ್ಯಪಾಲರ ಈ ಮಾತು ಮಹತ್ವ ಪಡೆದುಕೊಂಡಿದೆ. ದೇಶದ 71ನೇ ಗಣರಾಜ್ಯೋತ್ಸವದ ಅಂಗವಾಗಿ ನಗರದ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ಬಳಿಕ ರಾಜ್ಯದ ಜನತೆಯನ್ನುದ್ದೇಶಿಸಿ ರಾಜ್ಯಪಾಲರು ಹೇಳಿದ್ದಿಷ್ಟು:
* ನಮ್ಮ ದೇಶಕ್ಕೆ ಅಪಾರ ಸಾಮರ್ಥಯವಿದೆ. ನಮ್ಮ ಪರಂಪರೆ, ಸಂಸ್ಕೃತಿ ಹಾಗೂ ಸಂಪ್ರದಾಯಗಳನ್ನು ಸಂರಕ್ಷಿಸುವುದರೊಂದಿಗೆ, ನಾವು ಪ್ರಯೋಜನಕ್ಕೆ ಬಾರದ ಕಲ್ಪನೆ ಹಾಗೂ ಮೂಢನಂಬಿಕೆಗಳನ್ನು ತ್ಯಜಿಸಬೇಕು. ಅದರ ಬದಲಿಗೆ ವೈಜ್ಞಾನಿಕ, ಏಕತಾ ಹಾಗೂ ಸಮರ್ಪಣಾ ಮನೋಭಾವದಿಂದ ದೇಶದ ಪ್ರಗತಿಗೆ ಶ್ರಮಿಸಬೇಕು.
* ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಸಂಬಂಧ ಪರಿಣಾಮಕಾರಿ ಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಅಪರಾಧಗಳನ್ನು ತಡೆಯುವ ಹಾಗೂ ಅವುಗಳ ತನಿಖೆಯನ್ನು ತುರ್ತಾಗಿ ಕೈಗೊಳ್ಳುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯನ್ನು ಅತ್ಯಾಧುನಿಕ ತಂತ್ರಜ್ಞಾನ, ಕಾರ್ಯ ಪದ್ಧತಿಗಳಿಂದ ಸುಸಜ್ಜಿತಗೊಳಿಸಲಾಗುತ್ತಿದೆ.
* ಕಳೆದ ವರ್ಷ ಉಂಟಾದ ಪ್ರವಾಹದ ಸಂದರ್ಭದಲ್ಲಿ ಸಂತ್ರಸ್ತರ ನೆರವಿಗೆ ಧಾವಿಸಿದ ರಾಜ್ಯ ಸರ್ಕಾರ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದೆ. ಕೇಂದ್ರದ ರಕ್ಷಣಾ ತಂಡಗಳ ನೆರವಿನಿಂದ ರಾಜ್ಯ ಸರ್ಕಾರವು 7 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದೆ. 2.07 ಲಕ್ಷ ಕುಟುಂಗಳಿಗೆ ತಲಾ 10 ಸಾವಿರ ರೂ. ಪರಿಹಾರ ನೀಡಲಾಗಿದೆ. ಹಾನಿಗೊಳಗಾದ ಮನೆಗಳಿಗೆ ನೀಡಲಾಗಿರುವ ಹಣಕಾಸಿನ ನೆರವು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯ ಮಾನದಂಡಗಳಿಗಿಂತ ಹೆಚ್ಚಾಗಿದ್ದು, ಹಣಕಾಸಿನ ಹೆಚ್ಚುವರಿ ಅಗತ್ಯತೆಯನ್ನು ಸ್ವತಃ ರಾಜ್ಯ ಸರ್ಕಾರವೇ ಭರಿಸಿದೆ. ನೆರೆ ಸಂತ್ರಸ್ತರಿಗೆ ನೆರವು ನೀಡಿದ ಸಂಘ-ಸಂಸ್ಥೆಗಳಿಗೆ ಧನ್ಯವಾದ ಅರ್ಪಿಸುತ್ತೇನೆ.
* “ಉತ್ತಮ ಆಡಳಿತ ನಿರ್ವಹಣಾ ಸೂಚ್ಯಂಕ’ದಲ್ಲಿ ಕರ್ನಾಟಕ 3ನೇ ಸ್ಥಾನ ಪಡೆದಿದೆ. ಭಾರತದ ರಾಜ್ಯ ಅರಣ್ಯ ವರದಿ-2019ರ ಪ್ರಕಾರ ಅರಣ್ಯ ಪ್ರದೇಶ ಹೆಚ್ಚಿಸಿರುವ ರಾಜ್ಯಗಳ ಪೈಕಿ ಕರ್ನಾಟಕ ಪ್ರಥಮ ಸ್ಥಾನದಲ್ಲಿದೆ. ಕರ್ನಾಟಕ ನಾವಿನ್ಯ ಪ್ರಾಧಿಕಾರ ಸ್ಥಾಪಿಸಲಾಗಿದೆ. ಪಾವಗಡದಲ್ಲಿ 2050 ಮೆ. ವ್ಯಾ. ಸಾಮರ್ಥಯದ “ಅಲ್ಟ್ರಾ ಮೆಗಾ ಸೋಲಾರ್ ಪಾರ್ಕ್’ ಕಾರ್ಯಾರಂಭ ಮಾಡಿದೆ. “ಏಕೀಕೃತ ರಾಜ್ಯ ವಿದ್ಯಾರ್ಥಿ ವೇತನ ಪೋರ್ಟಲ್’ ಮೂಲಕ ವಿದ್ಯಾರ್ಥಿ ವೇತನ ಒದಗಿಸಲಾಗುವುದು. 2019-20ನೇ ಸಾಲಿಗೆ ಎಸ್ಸಿಪಿ, ಟಿಎಸ್ಪಿ ಯೋಜನೆಯಡಿ ಎಸ್ಸಿ, ಎಸ್ಟಿ ಪಂಗಡಗಳ ಸಮಗ್ರ ಅಭಿವೃದ್ಧಿಗೆ 30,445 ಕೋಟಿ ರೂ.ಗಳ ಉಪ ಯೋಜನೆಗೆ ಅನುಮೋದನೆ ನೀಡಲಾಗಿದೆ. ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾರ್ಯಕ್ರಮದಡಿ ಮೊದಲ ಹಂತದ 3,692 ಕಿ.ಮೀ ರಸ್ತೆ ಕಾಮಗಾರಿ ಆರಂಭವಾಗಿದೆ.
* ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮತ್ತು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯನ್ನು ಸಮನ್ವಯಗೊಳಿಸಿ ಆಯ್ದ 100 ಬರ ಪೀಡಿತ ಹಾಗೂ ಕಡಿಮೆ ಅಂತರ್ಜಲ ಮಟ್ಟ ಹೊಂದಿರುವ ತಾಲೂಕುಗಳಲ್ಲಿ “ಬರವನ್ನು ತಡೆಯಲು ಜಲಾನಯನ ಅಭಿವೃದ್ಧಿ’ ಹೆಸರಲ್ಲಿ ಹೊಸ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಕೃಷ್ಣಾ ಮೇಲ್ದಂಡೆ ಯೋಜನೆ-3ರ ಕಾಮಗಾರಿ ತ್ವರಿತಗೊಳಿಸಲಾಗಿದೆ. 5,500 ಕೋಟಿ ರೂ. ವೆಚ್ಚದಲ್ಲಿ 12 ಕೆರೆ ತುಂಬಿಸುವ ಯೋಜನೆ ಸೇರಿ ಇತರ 20 ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
* ಚಿಕ್ಕಬಳ್ಳಾಪುರದಲ್ಲಿ ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಇದೇ ರೀತಿ ಚಿಕ್ಕಮಗಳೂರು, ಯಾದಗಿರಿ ಹಾಗೂ ಹಾವೇರಿಯಲ್ಲಿ ಹೊಸ ವೈದ್ಯಕೀಯ ಕಾಲೇಜುಗಳ ಸ್ಥಾಪನೆಗೆ ಸಂಬಂಧಿಸಿದ ಪ್ರಸ್ತಾವನೆಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅನುಮೋದನೆ ಸಿಕ್ಕಿದೆ. ಇದರಿಂದ ಹೆಚ್ಚುವರಿಯಾಗಿ ರಾಜ್ಯಕ್ಕೆ 600 ವೈದ್ಯಕೀಯ ಸೀಟುಗಳು ಲಭ್ಯವಾಗಲಿವೆ.
ಫೆಬ್ರವರಿಯಲ್ಲಿ ಹುಬ್ಬಳ್ಳಿಯಲ್ಲಿ ಹೂಡಿಕೆದಾರರ ಸಮಾವೇಶ: 2019ರಲ್ಲಿ 59,574 ಕೋಟಿ ರೂ. ಬಂಡವಾಳ ಹೂಡಿಕೆಯನ್ನು ಆಕರ್ಷಿಸುವ ಮೂಲಕ ರಾಜ್ಯವು ದೇಶದಲ್ಲಿಯೇ ಎರಡನೇ ಬಂಡವಾಳ ಹೂಡಿಕೆ ತಾಣವಾಗಿ ಗುರುತಿಸಿಕೊಂಡಿದೆ. ರಾಜ್ಯದಲ್ಲಿ ಸಮಗ್ರ ಕೈಗಾರಿಕಾ ಅಭಿವೃದ್ಧಿಗಾಗಿ ಮತ್ತು ಉತ್ತರ ಕರ್ನಾಟಕ ಭಾಗಕ್ಕೆ ಹೆಚ್ಚು ಬಂಡವಾಳ ಹೂಡಿಕೆಗಳನ್ನು ಆಕರ್ಷಿಸುವುದಕ್ಕಾಗಿ 2020ರ ಫೆಬ್ರವರಿಯಲ್ಲಿ ಹುಬ್ಬಳ್ಳಿಯಲ್ಲಿ “ಬಂಡವಾಳ ಹೂಡಿಕೆ ಸಮಾವೇಶ’ ಆಯೋಜಿಸಲಾಗುತ್ತಿದೆ ಎಂದು ರಾಜ್ಯಪಾಲರು ಭಾಷಣದಲ್ಲಿ ಪ್ರಸ್ತಾಪಿಸಿದರು.
ಕಲ್ಯಾಣ ಕರ್ನಾಟಕ ಮಂಡಳಿಗೆ ಹೆಚ್ಚುವರಿ ಅನುದಾನ: “ಹೈದರಾಬಾದ್-ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ’ಯನ್ನು ಈಗ “ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ’ ಎಂದು ಮರು ನಾಮಕರಣ ಮಾಡಲಾಗಿದೆ. ಈ ಮಂಡಳಿಗೆ 2019-20ರ ಅವಧಿಯಲ್ಲಿ 1,500 ಕೋಟಿ ರೂ. ಅನುದಾನ ನೀಡಲಾಗಿದೆ. ಹೆಚ್ಚುವರಿಯಾಗಿ ಸಾವಿರ ಕೋಟಿ ರೂ.ಗಳಿಗೆ ಅನುಮೋದನೆ ನೀಡಲಾಗಿದೆ. ಕರ್ನಾಟಕ ಕಲ್ಯಾಣ ಪ್ರದೇಶದ ಮೊದಲ ವಿಮಾನ ನಿಲ್ದಾಣವಾದ ಕಲಬುರಗಿ ವಿಮಾನ ನಿಲ್ದಾಣ ಕಾರ್ಯಾಚರಣೆಗೊಳಿಸಲಾಗಿದೆ. ರಾಯಚೂರಿನಲ್ಲಿ ಐಐಐಟಿ ಸ್ಥಾಪನೆಗೆ ಇದ್ದ ಬಹು ಕಾಲದ ಬೇಡಿಕೆ ಪೂರೈಸಲಾಗಿದೆ ಎಂದು ರಾಜ್ಯಪಾಲರು ತಿಳಿಸಿದರು.
ಮಾರ್ಚ್ಗೆ ರೈತರ ಸಾಲ ಮನ್ನಾ ಯೋಜನೆ ಮುಕ್ತಾಯ: 2019-20ನೇ ಸಾಲಿನಲ್ಲಿ ರೈತರಿಗಾಗಿ ಸರ್ಕಾರವು ಬೆಳೆ ಸಾಲ ಮನ್ನಾ ಯೋಜನೆ ಜಾರಿಗೊಳಿಸಿದ್ದು, ಸಹಕಾರಿ ಬ್ಯಾಂಕುಗಳಲ್ಲಿ ಸಾಲ ಪಡೆದ ರೈತರ ಪ್ರತಿ ಕುಟುಂಬಕ್ಕೆ 1 ಲಕ್ಷ ರೂ. ಹಾಗೂ ವಾಣಿಜ್ಯ ಬ್ಯಾಂಕುಗಳಲ್ಲಿ ಸಾಲ ಪಡೆದ ರೈತರ ಕುಟುಂಬಕ್ಕೆ 2 ಲಕ್ಷ ರೂ. ಸಾಲ ಬಾಕಿ ಮನ್ನಾ ಮಾಡಲಾಗುತ್ತಿದೆ. ಇದು 2020ರ ಮಾರ್ಚ್ ವೇಳೆಗೆ ಮುಕ್ತಾಯಗೊಳ್ಳುತ್ತದೆ. ಈ ಯೋಜನೆಯಿಂದ ಸುಮಾರು 21 ಲಕ್ಷ ರೈತರು ಪ್ರಯೋಜನ ಪಡೆದಿದ್ದಾರೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರಿಗೆ ರಾಜ್ಯ ಸರ್ಕಾರ ಹೆಚ್ಚುವರಿ ಹಣಕಾಸಿನ ನೆರವು ನೀಡುತ್ತಿದೆ ಎಂದು ರಾಜ್ಯಪಾಲರು ಭಾಷಣದಲ್ಲಿ ವಿವರಿಸಿದ್ದಾರೆ.
ಈ ದಿನ ದೇಶದ ಅಭಿವೃದ್ಧಿಗಾಗಿ ಕಠಿಣ ಪರಿಶ್ರಮ ಪಡುತ್ತೇವೆಂಬ ನಮ್ಮ ಬದ್ಧತೆಯನ್ನು ಪುನರ್ ದೃಢೀಕರಿಸುವ ಸುಸಂದರ್ಭ ವಾಗಿದೆ. ವಿಶೇಷವಾಗಿ ಮೂಲಭೂತ ಕರ್ತವ್ಯಗಳ ಆಂದೋಲನವನ್ನು ದೇಶಾದ್ಯಂತ ಆಯೋಜಿಸುತ್ತಿರುವ ಈ ಸಂದರ್ಭದಲ್ಲಿ ನಾಗರಿಕರಾಗಿ ನಮ್ಮ ಕರ್ತವ್ಯಗಳ ಬಗ್ಗೆ ಗಮನಹರಿಸುವುದಕ್ಕೆ ಇದು ಸೂಕ್ತ ಕಾಲವೂ ಆಗಿದೆ.
-ವಜುಭಾಯಿ ವಾಲಾ, ರಾಜ್ಯಪಾಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಯಾವುದಕ್ಕೂ ಕೊರತೆಯಾಗದಂತೆ ಬಜೆಟ್ ಮಂಡಿಸುತ್ತೇನೆ: ಸಿಎಂ ಯಡಿಯೂರಪ್ಪ
ಸಿದ್ದಾರಮಯ್ಯ ಜೊತೆ ದಿಲ್ಲಿಗೆ ಹೋಗಿ ಡಿಕೆಶಿ ವಿರುದ್ಧ ದೂರು ನೀಡುತ್ತೇನೆ: ಅಖಂಡ ಶ್ರೀನಿವಾಸ
ರಾಜ್ಯದಲ್ಲಿ ಸದ್ಯಕ್ಕೆ ಲಾಕ್ ಡೌನ್ ಸ್ಥಿತಿಯಿಲ್ಲ: ಸಚಿವ ಡಾ. ಕೆ.ಸುಧಾಕರ್
ಶಿವಮೊಗ್ಗದಲ್ಲಿ ಸಿಎಂ ಬಿಎಸ್ ವೈ ಟೆಂಪಲ್ ರನ್: ಬೆಂಗಳೂರು ಪ್ರಯಾಣ ರದ್ದು
ರಸ್ತೆ ಅಪಘಾತ: ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ ಚಿಟ್ಟಾಣಿಯವರಿಗೆ ಗಾಯ