ರುದ್ರಭೂಮಿ ಕಾರ್ಮಿಕನಿಂದ ಪಿಎಂ ನಿಧಿಗೆ ದೇಣಿಗೆ!
Team Udayavani, Apr 10, 2020, 5:58 AM IST
ಕೆ.ಆರ್.ಪುರ: ರುದ್ರಭೂಮಿಯಲ್ಲಿ ಶವಗಳನ್ನು ಸುಡುವ ಕಾಯಕಯೋಗಿ ಕೋವಿಡ್ 19 ಭೀತಿ ಹಿನ್ನೆಲೆಯಲ್ಲಿ ತಮ್ಮ ಮಕ್ಕಳ ಮುಂದಿನ ವಿದ್ಯಾಭ್ಯಾಸಕ್ಕೆ ಕೂಡಿಟ್ಟ 60 ಸಾವಿರ ರೂ.ಗಳನ್ನು ಪ್ರಧಾನಮಂತ್ರಿ ಪರಿಹಾರ ನಿಧಿಗೆ ನೀಡಿದ್ದಾರೆ.
ಕೆ.ಆರ್.ಪುರ ಬಳಿ ಕಲ್ಪಳ್ಳಿಯ ಶ್ಮಶಾನದಲ್ಲಿ 32 ವರ್ಷಗಳಿಂದ ಶವಗಳನ್ನು ಸುಡುವ ಕಾಯಕ ಮಾಡುವ ಅಂತೋನಿ ಸ್ವಾಮಿ, ನಾಲ್ವರು ಮಕ್ಕಳು, ಪತ್ನಿ ಮತ್ತು ತಾಯಿಯೊಂದಿಗೆ ಜೀವನ ಸಾಗಿಸುತ್ತಿದ್ದಾರೆ. ಇಬ್ಬರು ಹೆಣ್ಣು ಮಕ್ಕಳು ಪಿಯುಸಿ, ಮತ್ತೂಬ್ಬ ಹೆಣ್ಣು ಮಗಳು 9ನೇ ತರಗತಿ ಮತ್ತು ಪುತ್ರ ಹತ್ತನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮುಂದಿನ ಶೈಕ್ಷಣಿಕ ವರ್ಷದ ವೆಚ್ಚಕ್ಕಾಗಿ ಶುಲ್ಕ ಭರಿಸಲು ಕೂಡಿಟ್ಟಿದ್ದ ಹಣವನ್ನು ಕೋವಿಡ್ 19 ವೈರಸ್ನಿಂದ ತತ್ತರಿಸುತ್ತಿರುವ ಜನರಿಗೆ ಸಹಾಯ ಮಾಡಲು ಪ್ರಧಾನಿ ಮಂತ್ರಿ ಪರಿಹಾರ ನಿ ಧಿಗೆ 60 ಸಾವಿರ ರೂ. ನೆರವು ನೀಡಿದ್ದಾರೆ. ಸರಕಾರದಿಂದ ತಮಗೆ ಬರುವ 10,000 ರೂ. ಗೌರವ ಧನದಲ್ಲಿ ಕುಟುಂಬ ನಿರ್ವಹಣೆ ನಡೆಸುತ್ತಿದ್ದು, ಕೋವಿಡ್ 19 ರೋಗಿಗಳಿಗಾಗಿ ಸಹಾಯ ಮಾಡಬೇಕೆಂದು ಮಕ್ಕಳು ಆಸೆ ವ್ಯಕ್ತಪಡಿಸಿ ಸಹಾಯ ಹಸ್ತ ಚಾಚೋಣ ಎಂದು ಹೇಳಿದ್ದರಿಂದ ದೇಣಿಗೆ ನೀಡಿದ್ದೇವೆ ಎಂದು ಹೇಳಿದರು.