ಉ.ಪ್ರ.ದಲ್ಲಿ ಸಿದ್ಧಗೊಂಡಿದೆ ಮತಾಂತರ ನಿಷೇಧ ಕರಡು
Team Udayavani, Nov 22, 2019, 10:59 PM IST
ಲಕ್ನೋ: ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರ ಮತಾಂತರ ನಿಷೇಧಕ್ಕೆ ಕಾನೂನು ರೂಪಿಸಲು ಕರಡು ಸಿದ್ಧಪಡಿಸಿದ್ದು, ಘರ್ ವಾಪ್ಸಿ (ತನ್ನ ಧರ್ಮಕ್ಕೆ ಮರಳುವುದು) ಅಪರಾಧವಲ್ಲ ಎಂದು ತಿಳಿಸಿದೆ. ರಾಜ್ಯ ಕಾನೂನು ಆಯೋಗವು ಈ ಕರಡು ತಯಾರಿಸಿದ್ದು, ಇದಕ್ಕೆ ಅನುಮೋದನೆ ನೀಡಿದರೆ ಉತ್ತರ ಪ್ರದೇಶವು, ದೇಶದಲ್ಲಿ ಮತಾಂತರ ಸಂಬಂಧ ಕಾಯ್ದೆ ರೂಪಿಸಿದ 11ನೇ ರಾಜ್ಯವಾಗಲಿದೆ.
ಮತಾಂತರಿಸಿದರೆ 1ರಿಂದ 5 ವರ್ಷದವರೆಗೆ ಶಿಕ್ಷೆ ಹಾಗೂ ಪರಿಶಿಷ್ಟ ಜಾತಿ, ಪಂಗಡದವರನ್ನು ಮತಾಂತರ ಮಾಡಿದರೆ 2 ರಿಂದ 7 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸುವ ಶಿಫಾರಸು ಸಲ್ಲಿಸಿದೆ. ವಿವಾಹಕ್ಕಾಗಿ ಮತಾಂತರ ಮಾಡಿ, ಅದನ್ನು ಅವರ ಕಡೆಯುವರು ಪ್ರಶ್ನಿಸಿದರೆ ಮತಾಂತರ ಅಸಿಂಧು ಆಗಲಿದೆ.
ಮತಾಂತರಕ್ಕೆ ಇಚ್ಛಿಸುವ ವ್ಯಕ್ತಿ ಹಾಗೂ ಮತಾಂತರ ಮಾಡುವವರು ಒಂದು ತಿಂಗಳು ಮುಂಚೆ ಸರ್ಕಾರಕ್ಕೆ ಮಾಹಿತಿ ನೀಡಬೇಕಾಗಿದೆ.
ಬಲವಂತವಾಗಿ ಮತಾಂತರ ಮಾಡುವ ಸಂಸ್ಥೆಗಳಿಗೆ ಸರ್ಕಾರದಿಂದ ಯಾವುದೇ ನೆರವು ನೀಡದಿರಲು ಕರಡುನಲ್ಲಿ ಪ್ರಸ್ತಾಪಿಸಲಾಗಿದೆ.