ಕೊಳಚೆ ನೀರಿನ ದುರ್ವಾಸನೆ : ರೋಗದ ಭೀತಿ
Team Udayavani, Jan 17, 2022, 12:56 PM IST
ಚಳ್ಳಕೆರೆ: ನಗರದ 18ನೇ ವಾರ್ಡ್ಲ್ಲಿ ಅರಣ್ಯ ಇಲಾಖೆ ಹಳೇ ಕಚೇರಿ ಹಾಗೂ ವಿಶಾಲ ಮೈದಾನವಿದ್ದು ಇಲ್ಲಿ ನಿಂತ ಚರಂಡಿ ನೀರು ದುರ್ವಾಸನೆ ಬೀರುತ್ತಿದ್ದು, ಸುತ್ತಮುತ್ತಲ ನೂರಾರು
ಕುಟುಂಬಗಳಿಗೆ ಕಾಯಲೆ ಹರಡುವ ಭಯ ಉಂಟಾಗಿದೆ. ಕೆಲ ತಿಂಗಳ ಹಿಂದೆ ಶಾಸಕ ಟಿ.ರಘುಮೂರ್ತಿ ವಾರ್ಡ್ ಸದಸ್ಯ ಎಂ.ಜೆ. ರಾಘವೇಂದ್ರರ ಜೊತೆ ಇಲ್ಲಿಗೆ ಆಗಮಿಸಿದಾಗ ಅಲ್ಲಿನ
ನಿವಾಸಿಗಳು ಅವರ ಗಮನ ಸೆಳೆದಿದ್ದರು.
ಈ ಹಿನ್ನೆಲೆಯಲ್ಲಿ ಶಾಸಕ ಟಿ.ರಘುಮೂರ್ತಿ ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಎರಡು ಮೂರು ದಿನದಲ್ಲಿ ಮೈದಾನದಲ್ಲಿ ನಿಂತ ನೀರನ್ನು ಬೇರೆಡೆಗೆ ಸಾಗಿಸಿ ಕಟ್ಟಡವನ್ನು ಸಹ ಸ್ವತ್ಛಗೊಳಿಸಿ ಈ ಭಾಗದ ಜನರಿಗೆ ತೊಂದರೆಯಾಗದಂತೆ ಜಾಗ್ರತೆ ವಹಿಸುವಂತೆ ಸ್ಪಷ್ಟ ಸೂಚನೆ ನೀಡಿದ್ದರು. ಆದರೂ ಸಹ ಅಧಿಕಾರಿಗಳು ಈ ಬಗ್ಗೆ ಗಮನಹರಿಸದ ಹಿನ್ನೆಲೆಯಲ್ಲಿ ಅಲ್ಲಿನ ನಿವಾಸಿಗಳು ಅರಣ್ಯ ಇಲಾಖೆ ಅಧಿ ಕಾರಿಗಳ ನಿರ್ಲಕ್ಷಕ್ಕೆ ಬೇಸತ್ತು ಮತ್ತೂಮ್ಮೆ ಶಾಸಕರಿಗೆ ದೂರು ನೀಡಲು ನಿರ್ಧರಿಸಿದ್ದಾರೆ.
ಅಲ್ಲಿನ ನಿವಾಸಿಗಳಾದ ಮಲ್ಲಿಕಾರ್ಜುನ್, ಚಂದ್ರಣ್ಣ, ತಿಪ್ಪೇರುದ್ರಪ್ಪ ಪತ್ರಿಕೆಯೊಂದಿಗೆ ತಮ್ಮ ನೋವು ತೋಡಿಕೊಂಡು ಶಾಸಕರು ಈ ಭಾಗದ ನಗರಸಭಾ ಸದಸ್ಯ ಹಾಗೂ ಇಲ್ಲಿಗೆ ಭೇಟಿ ನೀಡಿ ಎಲ್ಲಾ ಅ ಕಾರಿಗಳಿಗೂ ಪರಿಪರಿಯಾಗಿ ಮನವಿ ಮಾಡಿಕೊಂಡಿದ್ದೇವೆ. ಈ ಭಾಗದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಒಂದು ದಿನ ವಾಸವಿದ್ದರೆ ಇಲ್ಲಿನ ನರಕ ಸ್ಥಿತಿಯ ಬಗ್ಗೆ ತಿಳಿಯುತ್ತದೆ. ಆದ್ದರಿಂದ ಕೂಡಲೇ ಇಲ್ಲಿನ ಎಲ್ಲಾ ನಿವಾಸಿಗಳ ಹಿತದೃಷ್ಠಿಯಿಂದ ಜಾಗವನ್ನು ಸ್ವತ್ಛಗೊಳಿಸದೆ ಇದ್ದಲ್ಲಿ ಅರಣ್ಯ ಇಲಾಖೆ ವಿರುದ್ಧ ಬೀದಿಗಿಳಿದು ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ.