ಆನ್ಲೈನ್ನಲ್ಲಿ 5.5 ಲಕ್ಷ ಜನರಿಂದ ದಸರಾ ವೀಕ್ಷಣೆ
Team Udayavani, Oct 17, 2021, 5:25 PM IST
ಮೈಸೂರು: ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಸರಳ ದಸರಾ ಆಚರಿಸಿದರೂ ವೀಕ್ಷಣೆ ಮಾಡಿದವರ ಸಂಖ್ಯೆ 5.50 ಲಕ್ಷ ರೂ. ದಾಟಿದೆ. ದಸರಾದಲ್ಲಿ ಹೆಚ್ಚು ಜನ ಸೇರುವುದರಿಂದ ಕೊರೊನಾ ಸೋಂಕು ಹರಡುತ್ತದೆ ಎನ್ನುವ ಉದ್ದೇಶದಿಂದ ಸರ್ಕಾರ ದಸರಾವನ್ನು ಸರಳವಾಗಿ ಆಚರಿಸಿತು. ಸಾಂಸ್ಕೃತಿಕ ಕಾರ್ಯ ಕ್ರಮವನ್ನು ಕಡಿತಗೊಳಿಸಿತು.
ಆದರೆ ವರ್ಚುಯಲ್ ಮೂಲಕ ಹೆಚ್ಚು ಜನರನ್ನು ತಲುಪಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು. ಅರಮನೆಯಲ್ಲಿ ಕುಳಿತು ಖುದ್ದು ಜಂಬೂ ಸವಾರಿ ವೀಕ್ಷಿಸಲು 500 ಜನರಿಗೆ ಸೀಮಿತಗೊಳಿ ಸಲಾಗಿದ್ದರೂ, ಸಾಮಾಜಿಕ ಜಾಲತಾಣದ ಮೂಲಕ ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಜಂಬೂಸವಾರಿ ಕಾರ್ಯಕ್ರಮವನ್ನು ದಸರಾದ ಅಧಿಕೃತ ಫೇಸ್ಬುಕ್ನಲ್ಲಿ 1.85 ಲಕ್ಷ ಜನ, ಯೂ ಟೂನ್ನಲ್ಲಿ 32,500 ಹಾಗೂ ವೆಬ್ ಸೈಟ್ನಲ್ಲಿ 5300 ವೀಕ್ಷಣೆ ಮಾಡಿದ್ದಾರೆ ಎಂದರು. ದಸರಾ ಉದ್ಘಾಟನೆಯಿಂದ ಜಂಬೂ ಸವಾರಿ ವರೆಗೆ ಫೇಸ್ಬುಕ್ನಲ್ಲಿ ಒಟ್ಟು 5.12 ಲಕ್ಷ, ಯೂ ಟೂಬ್ನಲ್ಲಿ 49,500 ಹಾಗೂ ವೆಬ್ಸೈಟ್ನಲ್ಲಿ 23,150 ವೀಕ್ಷಣೆ ಆಗಿದೆ ಎಂದು ಹೇಳಿದರು.
ಇದನ್ನೂ ಓದಿ;- ರಿಲ್ಯಾಕ್ಸ್ ಮೂಡ್ನಲ್ಲಿ ದಸರಾ ಗಜಪಡೆ
10 ದಿನಗಳಲ್ಲಿ 80 ಲಕ್ಷ ಪ್ರವಾಸಿಗರು ಭೇಟಿ ಮೈಸೂರು: ಕೊರೊನಾ ಸೋಂಕು, ಲಾಕ್ಡೌನ್ನಿಂದಾಗಿ ಕಳೆದೊಂದು ವರ್ಷದಿಂದ ಸೊರಗಿದ್ದ ಮೈಸೂರು ಪ್ರವಾಸೋದ್ಯಮ ದಸರಾ ಉತ್ಸವದಿಂದ ಚೇತರಿಕೆ ಕಂಡಿದ್ದು, ಮೈಸೂರಿಗೆ ಪ್ರವಾಸಿಗರ ದಂಡೆ ಹರಿದುಬರುತ್ತಿದೆ. ಅ.7ರಿಂದ 16ರವರೆಗೆ ಒಟ್ಟು 80 ಲಕ್ಷ ಮಂದಿ ಮೈಸೂರಿನ ವಿವಿಧ ಪ್ರವಾಸಿ ಕೇಂದ್ರಗಳಿಗೆ ಭೇಟಿ ನೀಡಿರುವುದು ವಿಶೇಷ.
ಶನಿವಾರ ಒಂದೇ ದಿನ ಮೈಸೂರಿಗೆ 50 ಸಾವಿರ ಮಂದಿ ಭೇಟಿ ನೀಡಿದ್ದು, ನಗರದಲ್ಲಿರುವ ಮೃಗಾಲಯ, ಕಾರಂಜಿಕೆರೆ, ಅರಮನೆ, ಚಾಮುಂಡಿಬೆಟ್ಟ, ರೈಲ್ವೆ ಮ್ಯೂಸಿಯಂ, ಸ್ಯಾಂಡ್ ಮ್ಯೂಸಿಂ ಸೇರಿದಂತೆ ಹಲವು ಸ್ಥಳಗಳಿಗೆ ಭಾರಿ ಪ್ರಮಾಣದಲ್ಲಿ ಪ್ರವಾಸಿಗರು ಭೇಟಿ ನೀಡಿದರು. ಮೃಗಾಲಯಕ್ಕೆ 24 ಸಾವಿರ ಮಂದಿ, ಕಾರಂಜಿಕೆರೆಗೆ 25 ಸಾವಿರ, ಚಾಮುಂಡಿ ಬೆಟ್ಟಕ್ಕೆ 20 ಸಾವಿರ, ಅಂಬಾವಿಲಾಸ ಅರಮನೆಗೆ 30 ಸಾವಿರ, ಸ್ಯಾಂಡ್ ಮ್ಯೂಸಿಯಂಗಳಿಗೆ 10, ರೈಲ್ವೆ ಮ್ಯೂಸಿಯಂಗಳಿಗೆ 6 ಸಾವಿರ ಪ್ರವಾಸಿಗರು ಮಂದಿ ಭೇಟಿ ನೀಡಿದ್ದಾರೆ.
ಕಳೆದೊಂದು ವರ್ಷದಿಂದ ಸಂಪೂರ್ಣವಾಗಿ ನೆಲಕಚ್ಚಿದ್ದ ಮೈಸೂರು ಪ್ರವಾಸೋದ್ಯಮ ದಸರಾದಿಂದ ಚೇತರಿಸಿಕೊಂಡಿದ್ದು, ಬೆಳಗ್ಗೆಯಿಂದ ರಾತ್ರಿ 10ರವರೆಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಕಂಡು ಬರುತ್ತಿರುವುದು ಒಂದೆಡೆಯಾದರೆ, ಪ್ರವಾಸಿ ಕೇಂದ್ರಗಳಲ್ಲಿ ಪ್ರವಾಸಿಗರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ.
ಈ ಬಾರಿಯ ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾಗಿದ್ದ ದೀಪಾಲಂಕಾರವನ್ನು ನೋಡಿ ಕಣ್ತುಂಬಿಕೊಳ್ಳುವ ಸಲುವಾಗಿ ಗ್ರಾಮೀಣ ಪ್ರದೇಶದಿಂದಲ್ಲದೇ, ಹೊರ ಜಿಲ್ಲೆಯಿಂದ ನಿತ್ಯ 20ರಿಂದ 30 ಸಾವಿರ ಮಂದಿ ಮೈಸೂರಿಗೆ ಭೇಟಿ ನೀಡಿದ್ದಾರೆ. ಶನಿವಾರವೂ ಹೆಚ್ಚಳ: ದಸರಾ ದೀಪಾಲಂಕಾರ ವಿಸ್ತರಣೆ ಹಾಗೂ ವಾರಾಂತ್ಯ ರಜೆ ಹಿನ್ನೆಲೆ ಮೈಸೂರಿನತ್ತ ಭಾರಿ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ ಹಿನ್ನೆಲೆ ನಗರದೆಲ್ಲೆಡೆ ಸಂಚಾರ ದಟ್ಟಣೆ ಹಾಗೂ ಪ್ರವಾಸಿ ಕೇಂದ್ರಗಳು ತುಂಬಿ ತುಳಿಕಿದವು. ಮೈಸೂರಿಗೆ ಕೊರೊನಾ ಪೂರ್ವ ಕಳೆ ಬಂದಿದ್ದು, ಪ್ರವಾಸೋದ್ಯಮ, ಹೋಟೆಲ್, ಲಾಡ್ಜಿಂಗ್, ಬೀದಿಬದಿ ವ್ಯಾಪಾರ ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ವ್ಯಾಪಾರ-ವಹಿವಾಟು ನಡೆದಿದೆ.