ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ ಸಂಘಕ್ಕೆ ಚುನಾವಣೆ- 46 ಅಭ್ಯೃಥಿಗಳ ಭವಿಷ್ಯ ಇಂದು ನಿರ್ಧಾರ
Team Udayavani, Dec 15, 2021, 10:35 AM IST
ದಾಂಡೇಲಿ: ನಗರದ ಪ್ರತಿಷ್ಟಿತ ಸಹಕಾರಿ ಸಂಘಗಳಲ್ಲಿ ಒಂದಾಗಿರುವ ಬಂಗೂರನಗರದಲ್ಲಿರುವ ವೆಸ್ಟ್ ಕೊಸ್ಟ್ ಪೇಪರ್ ಮಿಲ್ ಎಂಪ್ಲಾಯಿಸ್ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಇಂದು ಬೆಳಿಗ್ಗೆ ಬಂಗೂರನಗರದ ಡಿಲಕ್ಸ್ ಸಭಾಭವನದಲ್ಲಿ ಮತದಾನ ನಡೆಯಲಿದೆ. ಮತದಾನಕ್ಕೆ ಸಂಬಂಧಪಟ್ಟಂತೆ ಸರ್ವ ಸಿದ್ದತೆಗಳನ್ನು ನಡೆಸಲಾಗಿದೆ.
13 ಸ್ಥಾನಗಳಿರುವ ಈ ಸಹಕಾರಿ ಸಂಘದಲ್ಲಿ ಈಗಾಗಲೆ ಮೂವರು ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದಂತೆ 10 ಸ್ಥಾನಗಳಿಗೆ 46 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಹಿಂದುಳಿದ ಎ ಒಂದು ಸ್ಥಾನಕ್ಕೆ 4 ಅಭ್ಯರ್ಥಿಗಳು, ಹಿಂದುಳಿದ ಬಿ ಮೀಸಲು ಒಂದು ಸ್ಥಾನಕ್ಕೆ 4, ಪರಿಶಿಷ್ಟ ಜಾತಿಯ 1 ಸ್ಥಾನಕ್ಕೆ 7 ಅಭ್ಯರ್ಥಿಗಳು, ಪರಿಶಿಷ್ಟ ಪಂಗಡದ 1 ಸ್ಥಾನಕ್ಕೆ 4 ಸ್ಪರ್ಧಿಗಳು ಕಣದಲ್ಲಿದ್ದಾರೆ. 6 ಸಾಮಾನ್ಯ ಬಿ ಸ್ಥಾನಕ್ಕೆ ಬರೋಬ್ಬರಿ 27 ಅಭ್ಯರ್ಥಿಗಳು ಸ್ಪರ್ಧಿಸುವುದರ ಮೂಲಕ ಸಹಕಾರಿ ಸಂಘದ ಚುನಾವಣೆಯಲ್ಲಿಯೆ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ನಿನ್ನೆಯವರೆಗೆ ಗೆಲುವಿಗಾಗಿ ನಾನಾ ಕಸರತ್ತುಗಳನ್ನು ನಡೆಸಿದ ಅಭ್ಯರ್ಥಿಗಳಿಗೆ ಮತದಾರರ ಉತ್ತರ ಇಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆಯಲಿರುವ ಮತದಾನದ ಗೌಪ್ಯ ಪೆಟ್ಟಿಗೆಯೊಳಗೆ ಸೇರಲಿದೆ. ಮತದಾನ ಮುಗಿದ ಬಳಿಕ ಏಣಿಕೆ ಕಾರ್ಯ ನಡೆದು ವಿಜೇತ ಅಭ್ಯರ್ಥಿಗಳ ಘೋಷಣೆಯಾಗಲಿದೆ.
ಏನೇ ಇರಲಿ ಈ ಬಾರಿಯಂತು ವೆಸ್ಟ್ ಕೊಸ್ಟ್ ಪೇಪರ್ ಮಿಲ್ ಎಂಪ್ಲಾಯಿಸ್ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಚುನಾವಣೆ ಹೋಳಿ ಹುಣ್ಣಿಮೆಯನ್ನು ಸ್ಮರಿಸದೇ ಇರಲಾರದು ಎನ್ನುವುದು ವಾಸ್ತವ ಸತ್ಯ.