ಎಲೆಕ್ಟ್ರಾನಿಕ್ಸ್ , ಚಿನ್ನದಂಗಡಿ, ಬಟ್ಟೆ ಮಳಿಗೆ ತೆರೆಯಲು ಇಂದಿನಿಂದ ಅನುಮತಿ: ಡಿಸಿ
ಶೀಘ್ರ ಷರತ್ತುಬದ್ಧ ಯಾಂತ್ರಿಕ ಮೀನುಗಾರಿಕೆ; ಖರೀದಿ ಅವಧಿ ವಿಸ್ತರಣೆ
Team Udayavani, May 4, 2020, 5:45 AM IST
ಉಡುಪಿ: ಕೇಂದ್ರ ಸರಕಾರವು ಉಡುಪಿ ಜಿಲ್ಲೆಯನ್ನು ಹಸುರು ವಲಯವಾಗಿ ಘೋಷಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಲಾಕ್ಡೌನ್ನಿಂದ ಹಲವು ವಿನಾಯಿತಿಗಳನ್ನು ನೀಡಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.
ಎಲೆಕ್ಟ್ರಾನಿಕ್ಸ್, ಚಿನ್ನದಂಗಡಿ, ಬಟ್ಟೆ ಮಳಿಗೆಗಳಿಗೆ ಅವಕಾಶ
ಎಲೆಕ್ಟ್ರಾನಿಕ್ಸ್, ಚಿನ್ನದಂಗಡಿಗಳನ್ನು ತೆರೆಯಲು ಅವಕಾಶವಿದೆ. ಆದರೆ ಹವಾನಿಯಂತ್ರಿತ ವ್ಯವಸ್ಥೆ ಚಾಲುಗೊಳಿಸಿ ರಬಾರದು. 10 ನೌಕರರು ಕೆಲಸ ನಿರ್ವಹಿಸಿ ಹತ್ತು ಗ್ರಾಹಕರನ್ನು ಒಳಗೆ ಬಿಡಬೇಕು. ಬಟ್ಟೆ ಅಂಗಡಿಗಳಲ್ಲೂ 25 ನೌಕರರು ಕೆಲಸ ನಿರ್ವಹಿಸಿ 25 ಗ್ರಾಹಕರನ್ನು ಒಳಗೆ ಬಿಡಬೇಕು. ಒಳಗಿದ್ದ ಗ್ರಾಹಕರು ಹೊರ ಹೋದ ಬಳಿಕವೇ ಹೊರಗಿದ್ದವರನ್ನು ಒಳಗೆ ಕರೆಯಬೇಕು. ಹೊರಗೆ ವೇಟಿಂಗ್ ರೂಮ್ ವ್ಯವಸ್ಥೆ ಮಾಡಬೇಕು ಎಂದರು.
ಸರಕಾರಿ ಕಚೇರಿ: ಶೇ. 100 ಸಿಬಂದಿ
ಸೋಮವಾರದಿಂದ ಜಿಲ್ಲೆಯ ಎಲ್ಲ ಸರಕಾರಿ ಕಚೇರಿಗಳಲ್ಲಿ ಶೇ.100 ಸಿಬಂದಿ ಭಾಗವಹಿಸುವರು ಎಂದರು.
ಕಾರು, ಆಟೋರಿಕ್ಷಾ
ಕಾರಿನಲ್ಲಿ ಚಾಲಕ ಹೊರತುಪಡಿಸಿ ಇಬ್ಬರು, ಆಟೋ ರಿಕ್ಷಾದಲ್ಲಿ ಒಬ್ಬ ಪ್ರಯಾಣಿಕನನ್ನು ಕರೆದೊಯ್ಯಲು ಅವಕಾಶವಿದೆ.
ಖರೀದಿ ಅವಧಿ ವಿಸ್ತರಣೆ
ಜಿಲ್ಲೆಯಲ್ಲಿ ದಿನಬಳಕೆ ವಸ್ತುಗಳ ಖರೀದಿಗೆ ನೀಡಿರುವ ಸಮಯವನ್ನು ಬೆಳಗ್ಗೆ 7ರಿಂದ ಮಧ್ಯಾಹ್ನ 1ರ ವರೆಗೆ ವಿಸ್ತರಿಸಲಾಗಿದೆ. ಕಾರ್ಖಾನೆಗಳಲ್ಲಿ ಕೆಲಸ ಮಾಡುವ ನೌಕರರಿಗೆ ಸಂಜೆ 5ರಿಂದ 7ರ ವರೆಗೆ ಮನೆಗೆ ತೆರಳಲು ಅವಕಾಶ ನೀಡಲಾಗಿದೆ. ಸೆಲೂನ್, ಸ್ಪಾಗಳು ಇನ್ನೂ ಒಂದು ವಾರ ಮುಚ್ಚಿರಲಿವೆ ಎಂದರು.
ಬಸ್ ಸಂಚಾರ: ಸಮೀಕ್ಷೆ
ಹಸುರು ವಲಯದಲ್ಲಿ ಬಸ್ ಓಡಾಟಕ್ಕೆ ಸರಕಾರ ಅನುಮತಿ ನೀಡಿದೆ. ಈಗಾಗಲೇ ಕೆಎಸ್ಸಾರ್ಟಿಸಿ ಅಧಿಕಾರಿಗಳ ಜತೆಗೆ ಮಾತುಕತೆ ನಡೆಸಿ, ಯಾವ ರೂಟ್ಗಳಲ್ಲಿ ಬಸ್ ಅಗತ್ಯವಿದೆ ಎನ್ನುವುದರ ಕುರಿತು ಸರ್ವೇ ನಡೆಸಿ ವರದಿ ನೀಡುವಂತೆ ಆದೇಶಿಸಲಾಗಿದೆ. ಫ್ಯಾಕ್ಟರಿಗಳು, ಬಿಲ್ಡರ್ಗಳು ವಾಹನಗಳಲ್ಲಿ ಸಾಮರ್ಥ್ಯದ ಶೇ. 40ರಷ್ಟು ಪ್ರಯಾಣಿಕರನ್ನು ಮಾತ್ರ ಕರೆದೊಯ್ಯಲು ಅವಕಾಶ ನೀಡಲಾಗಿದೆ ಎಂದರು.
ಎಂಎಸ್ಐಎಲ್, ವೈನ್ಶಾಪ್
ರಾಜ್ಯದಲ್ಲಿ ಬೆಳಗ್ಗೆ 9ರಿಂದ ರಾತ್ರಿ 7ರ ವರೆಗೆ ವೈನ್ಶಾಪ್, ಎಂಎಸ್ಐಎಲ್ ಮಳಿಗೆ ತೆರೆಯಲು ಅವಕಾಶ ನೀಡಲಾಗಿದೆ. ಆದರೆ ಉಡುಪಿ ಜಿಲ್ಲೆಯಲ್ಲಿ ಬೆಳಗ್ಗೆ 7ರಿಂದ ಮಧ್ಯಾಹ್ನ 1 ಗಂಟೆಯ ವರೆಗೆ ಮಾತ್ರ ತೆರೆಯಲು ಸೂಚಿಸಿದ್ದೇವೆ. ಇಲ್ಲಿ ಪಾರ್ಸೆಲ್ ಕೊಂಡೊಯ್ಯಲು ಮಾತ್ರ ಅವಕಾಶವಿದೆ ಎಂದು ಡಿಸಿ ತಿಳಿಸಿದರು.
ಬಗೆಹರಿದ ವಲಯ ಗೊಂದಲ
ರವಿವಾರ ರಾಜ್ಯ ಸರಕಾರ ಕೂಡ ಕೇಂದ್ರ ಸರಕಾರ ಪ್ರಕಟಿಸಿದ ಮಾರ್ಗಸೂಚಿಯನ್ನೇ ಒಪ್ಪಿಕೊಂಡಿರುವುದರಿಂದ ಕೆಂಪು, ಕಿತ್ತಳೆ, ಹಸುರು ವಲಯ ಕುರಿತಾದ ಗೊಂದಲ ಬಗೆಹರಿದಂತಾಗಿದೆ.
ಯಾಂತ್ರಿಕ ಮೀನುಗಾರಿಕೆಗೆ ಅವಕಾಶ
ಎರಡು ದಿನಗಳಲ್ಲಿ ಮಲ್ಪೆಯಲ್ಲಿ ಯಾಂತ್ರಿಕ ಮೀನುಗಾರಿಕೆಗೆ ಅವಕಾಶ ಕಲ್ಪಿಸಲಾಗುತ್ತದೆ. ಆದರೆ ಜನರು ಗುಂಪುಗೂಡುವುದನ್ನು ತಡೆಯುವ ನಿಟ್ಟಿನಲ್ಲಿ ಪ್ರತೀ ದಿನ ಕೇವಲ 30 ಬೋಟ್ಗಳಿಗೆ ಮಾತ್ರ ಮೀನುಗಾರಿಕೆಗೆ ತೆರಳಲು ಅವಕಾಶ ಕಲ್ಪಿಸಲಾಗಿದೆ. ಒಂದು ಬಾರಿಗೆ 10 ಬೋಟ್ಗಳು ಮಾತ್ರ ಮೀನು ಆನ್ಲೋಡ್ ಮಾಡಿ ಲಾರಿ ಮೂಲಕ ಮಾರುಕಟ್ಟೆಗೆ ತಲುಪಿಸಬೇಕಾಗಿದೆ. ದಕ್ಕೆಯಲ್ಲಿ ಮಾರಾಟ, ಹರಾಜಿಗೆ ಅವಕಾಶವಿಲ್ಲ. ಈ ಬಗ್ಗೆ ಮೀನುಗಾರರ ಸಂಘದ ಪದಾಧಿಕಾರಿಗಳು, ಮೀನುಗಾರಿಕೆ ಇಲಾಖೆ ಜತೆಗೆ ಮಾತುಕತೆ ನಡೆಸಲಾಗಿದೆ ಎಂದು ಡಿಸಿ ಮಾಹಿತಿ ನೀಡಿದರು.
ನೋಂದಣಿ ಅಗತ್ಯ- ಕ್ವಾರಂಟೈನ್ ಕಡ್ಡಾಯ
ಬೇರೆ ರಾಜ್ಯದಿಂದ ಬರುವವರಿಗೆ ಅವಕಾಶ ನೀಡಲಾಗಿದೆ. ಆನ್ಲೈನ್ sevasindhu.karnataka.gov.in ನಲ್ಲಿ ನೋಂದಾಯಿಸಿಕೊಳ್ಳಲಾಗುತ್ತದೆ. ಕೆಂಪು ವಲಯದಿಂದ ಬಂದವರಿಗೆ ಸರಕಾರಿ ಕ್ವಾರೆಂಟೈನ್ ಮಾಡಲಾಗುತ್ತದೆ ಎಂದರು.
ಸಭೆ ಸಮಾರಂಭ ಇಲ್ಲ
ದೇವಸ್ಥಾನಗಳು, ಮಸೀದಿ, ಚರ್ಚ್ಗಳು ತೆರೆಯುವಂತಿಲ್ಲ. ಸಾಮಾಜಿಕ, ಧಾರ್ಮಿಕ, ರಾಜಕೀಯ ಸಭೆ ಸಮಾರಂಭಗಳು ನಡೆಯಲು ಅವಕಾಶವಿಲ್ಲ. ಸೆಕ್ಷನ್ 144 ಜಾರಿಯಲ್ಲಿದ್ದು, ನಾಲ್ವರಿಗಿಂತ ಹೆಚ್ಚು ಜನರು ಸೇರುವಂತಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಮಧ್ಯಾಹ್ನ 1 ಗಂಟೆಯ ವರೆಗೆ ಮಾತ್ರ ಏಕೆ?
ಕೇಂದ್ರ ಸರಕಾರ ಬೆಳಗ್ಗೆ 7ರಿಂದ ರಾತ್ರಿ 7 ಗಂಟೆಯ ವರೆಗೆ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಿದೆ. ಆದರೆ ಶನಿವಾರ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿಯವರೊಂದಿಗೆ ನಡೆದ ವೀಡಿಯೋ ಕಾನ್ಫರೆನ್ಸ್ ಸಭೆಯಲ್ಲಿದ್ದ ತಜ್ಞರು ವೈರಸ್ನ ಜೀವತಾವಧಿ 18 ಗಂಟೆ. ಮಧ್ಯಾಹ್ನ 1 ಗಂಟೆಯಿಂದ ಮರುದಿನ ಬೆಳಗ್ಗೆ 7 ಗಂಟೆವರೆಗೆ ಒಟ್ಟು 18 ಗಂಟೆ ಆಗುತ್ತದೆ. ಒಂದು ವೇಳೆ ವೈರಸ್ ಸಫೇಸ್ನಲ್ಲಿದ್ದರೂ 18 ಗಂಟೆಯಲ್ಲಿ ಅದು ಸಾಯುತ್ತದೆ ಎಂದು ಆರೋಗ್ಯ ಕ್ಷೇತ್ರದ ತಜ್ಞರು ಹೇಳಿದರು. ಹೀಗಾಗಿ ತಜ್ಞ ವೈದ್ಯರ ಸಲಹೆಯಂತೆ ಮಧ್ಯಾಹ್ನ 1ರ ವರೆಗೆ ಮಾತ್ರ ಅಂಗಡಿ ತೆರೆಯಲು ಸಭೆ ನಿರ್ಧರಿಸಿತು. ಒಂದು ವಾರದ ಬಳಿಕ ಮತ್ತೆ ಸಭೆ ಸೇರಿ ನಿಯಮ ಸಡಿಲಿಕೆ ಮಾಡಬಹುದು.
– ರಘುಪತಿ ಭಟ್, ಶಾಸಕರು, ಉಡುಪಿ
ಉಡುಪಿ ಜಿಲ್ಲೆಯನ್ನು ಹಸುರು ವಲಯವೆಂದು ಕೇಂದ್ರ ಸರಕಾರ ಅಧಿಸೂಚನೆ ಹೊರಡಿಸಿದೆ. ವಲಯವನ್ನು ಗುರುತಿಸುವ ಅಧಿಕಾರ ಕೇಂದ್ರ ಸರಕಾರಕ್ಕೆ ಮಾತ್ರ ಇದೆ.
– ಜಿ. ಜಗದೀಶ್, ಡಿಸಿ, ಉಡುಪಿ ಜಿಲ್ಲೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vijayapura; ವಿಕಸಿತ ಭಾರತದಲ್ಲಾಗಿರುವ ಅಭಿವೃದ್ಧಿ ಏನು: ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ
Pavagada: ಬೈಕ್ ಗೆ ಕಾಡು ಹಂದಿ ಡಿಕ್ಕಿಯಾಗಿ ಸವಾರ ಸಾವು
Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ
T20 World Cup; ರೋಹಿತ್, ವಿರಾಟ್ ಆರಂಭಿಕರು? ಅಚ್ಚರಿಯ ಮುಖಗಳಿಲ್ಲ?
The Very Best Payment Techniques for Online Casinos