ತ.ನಾಡು- ಕರ್ನಾಟಕ ಗಡಿಭಾಗದಲ್ಲಿ ಬೀಡು ಬಿಟ್ಟ ಕಾಡಾನೆಗಳು : ಕಾಡಿಗಟ್ಟಲು ಅಧಿಕಾರಿಗಳ ಹರಸಾಹಸ
Team Udayavani, Jan 5, 2022, 12:03 PM IST
ಆನೇಕಲ್: ತಮಿಳುನಾಡು- ಕರ್ನಾಟಕ ಗಡಿಭಾಗದ ಹಳ್ಳಿಯೊಂದರ ಹೊರವಲಯದ ನೀಲಗಿರಿ ತೋಪಿನಲ್ಲಿ ಬೀಡು ಬಿಟ್ಟ ಕಾಡಾನೆಗಳ ಹಿಂಡು ಇಡೀ ದಿನ ಸ್ಥಳೀಯರ ಆಕರ್ಷಣೆ ಮತ್ತು
ಕುತೂಹಲದ ಕೇಂದ್ರವಾಗಿತ್ತು. ಕಾಡಿನ ಹಾದಿ ತಪ್ಪಿ ಬಂದಿದ್ದ ಕಾಡಾನೆಗಳ ಹಿಂಡನ್ನು ಕಾಡಿಗಟ್ಟಲು ಎರಡು ರಾಜ್ಯಗಳ ಅರಣ್ಯ ಇಲಾಖೆ ಹಾಗೂ ಪೊಲೀಸರು ಹರಸಾಹಸ ಪಟ್ಟು
ಅಂತಿಮವಾಗಿ ಸಂಜೆ ವೇಳೆಗೆ ಕಾಡಿಗೆ ಸೇರಿಸಲಾಯಿತು.
ಸಹಜವಾಗಿ ವರ್ಷದ ಕೊನೆ ಮತ್ತು ಆರಂಭದ ದಿನಗಳಲ್ಲಿ ಮೇವು ಹರಸಿ ರಾತ್ರಿ ವೇಳೆ ಕಾಡಿನಿಂದ ಹಳ್ಳಿಗಳಿಗೆ ಕಾಡಾನೆಗಳು ಬರುವುದು ಸಾಮಾನ್ಯ. ಅಂತೆಯೇ ಸೋಮವಾರ ರಾತ್ರಿ ತಮಿಳುನಾಡಿನ ಗುಮ್ಮಳಾಪುರ ಕೆರೆ ಮೂಲಕ ರಾಜ್ಯದ ಗಡಿ ಭಾಗದ ಸೋಲೂರು ಬಳಿ ರಸ್ತೆ ದಾಟಿ ಮೆಣಸಿಗನಹಳ್ಳಿಯ ನೀಲಗಿರಿ ತೋಪಿನಲ್ಲಿ ಸುಮಾರು 25 ರಿಂದ 30 ಆನೆಗಳ ಹಿಂಡು
ಬೀಡು ಬಿಟ್ಟಿದ್ದವು.
ಮುಂಜಾನೆ 7 ಗಂಟೆ ಸುಮಾರಿನಲ್ಲಿ ಸುದ್ದಿ ತಿಳಿಯುತ್ತಿದ್ದಂತೆ ಆನೆಗಳನ್ನು ನೋಡಲು ನೀಲಗಿರಿ ತೋಪಿನ ಸುತ್ತಲೂ ಜನ ಸುತ್ತುವರೆದರು. ಇದರಿಂದ ಆನೆಗಳು ದಿಕ್ಕಾಪಾಲಾಗಿ ಓಡಾಡಿ
ನೀಲಗಿರಿ ತೋಪು ಬಹುತೇಕ ಹಾನಿಗೊಳಗಾಯಿತು. ಮಧ್ಯಾಹ್ನ ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಪಟಾಕಿ ಹಾಕಿ ಸಿಡಿಸಿ ಆನೆಗಳನ್ನು ಕಾಡಿನ ದಾರಿಗೆ ಓಡಿಸಲು ಮುಂದಾದರು. ಆಗ ಜನರ
ಕಿರಿಕಿರಿ ಇಲ್ಲದ ದಾರಿ ಹುಡುಕಿಕೊಂಡು ಕಾಡಿನ ಹಾದಿ ಹಿಡಿದವು. ಈ ಸಮಯದಲ್ಲೂ ಜನ ಆನೆಗಳನ್ನು ಹಿಂಬಾಲಿಸಿ ಕಿರುಚುತ್ತ ಮತ್ತಷ್ಟು ಕಿರಿಕಿರಿ ಮಾಡಿದ್ದರಿಂದ ಕೆಲಸ ಬಾರಿ ಹೆಣ್ಣಾನೆ ಸಾರ್ವಜನಿಕರ ಮೇಲೆ ದಾಳಿ ಮಾಡಿತ್ತಾದರೂ ಜನ ಚೆಲ್ಲಾಪಿಲ್ಲಿಯಾಗಿ ಓಡಿ ಆನೆ ದಾಳಿಯಿಂದ ಪಾರಾದರು.
ಅಂತಿಮವಾಗಿ ಸೋಲೂರು ಬಳಿ ರಸ್ತೆ ದಾಟಿ ತಮಿಳುನಾಡಿನ ತಮ್ಮಾಪುರ ಗ್ರಾಮದ ಮೂಲಕ ಕರ್ನಾಟಕ ಅರಣ್ಯ ಪ್ರದೇಶ ಸೇರಿಕೊಂಡವು.