ಅಪಘಾತದಲ್ಲಿ ಸಾವನ್ನಪ್ಪಿದ ಯುವಕನ ನೇತ್ರದಾನ ಮಾಡಿದ ಕುಟುಂಬ
Team Udayavani, Jan 13, 2022, 3:03 PM IST
ನೆಲಮಂಗಲ : ಮನೆಯಿಂದ ಕಾಲೇಜಿಗೆ ಮೊದಲ ಬಾರಿ ಬೈಕ್ ತೆಗೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿಗೆ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಬೈಕ್ ಹಾಗೂ ಜೀಪಿನ ನಡುವೆ ಅಪಘಾತವಾಗಿ ಯುವಕ ಮೃತನಾಗಿದ್ದು, ಯುವಕನ ಕಣ್ಣು ದಾನ ಮಾಡುವ ಮೂಲಕ ಕುಟುಂಬ ಸಾರ್ಥಕ ಮೆರೆದಿದ್ದಾರೆ.
ಅಭಿಷೇಕ್(19)ಮೃತ ವಿದ್ಯಾರ್ಥಿ. ಈತ ಕುಲುವನಹಳ್ಳಿ ನಿವಾಸಿಯಾಗಿದ್ದು, ಸಿದ್ಧಗಂಗಾ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದನು. ಬುಧವಾರ ಬೆಳಗ್ಗೆ ಕುಲುವನ ಹಳ್ಳಿಯಿಂದ ನೆಲಮಂಗಲ ನಗರದಲ್ಲಿರುವ ಕಾಲೇಜಿಗೆ ಹೊರಟ ಅಭಿಷೇಕ್ ಹೆದ್ದಾರಿ ಮಾರ್ಗ ಮಧ್ಯೆ ಬೂದಿಹಾಳ್ ಬಳಿ ಜೀಪು ಅಡ್ಡಲಾಗಿ ಬಂದ ಪರಿಣಾಮ ಡಿಕ್ಕಿಯಾಗಿ ಅಭಿಷೇಕ್ ಸಾವನ್ನಪ್ಪಿದ್ದಾನೆ. ನಂತರ ಅಭಿಷೇಕ್ ತಂದೆ ರಮೇಶ್ ಹಾಗೂ ಕುಟುಂಬದವರ ಒಪ್ಪಿಗೆ ಪಡೆದು ಬೆಂಗಳೂರಿನ ನಾರಾಯಣ ನೇತ್ರಾಲಯಕ್ಕೆ ತಿಳಿಸಿ ಮೃತನ ನೇತ್ರದಾನ ಮಾಡಿ ಸಾವಿನಲ್ಲೂ ಸಾರ್ಥ ಕತೆಯನ್ನೂ ಕುಟುಂಬ ಮೆರೆದಿದೆ.
ಇಳಿಜಾರು ಅತೀಯಾಗಿ ಹಾಗೂ ರಾಷ್ಟ್ರೀಯ ಹೆದ್ದಾರಿ 48ರ ಬೂದಿಹಾಳ್ ಬಳಿ ಪದೇ ಪದೆ ಅಪಘಾತವಾಗಿ ಸಾವು-ನೋವು ಸಂಭವಿಸತ್ತಲೇ ಇದೆ. ರಸ್ತೆ ಅಡ್ಡಲಾಗಿ ಅಂಡರ್ ಪಾಸ್ ನಿರ್ಮಾಣ ಮಾಡಬೇಕು ಮತ್ತು ಹೆದ್ದಾರಿಯನ್ನು ಕೂಡಲೇ ಅಗಲೀಕರಣ ಮಾಡಬೇಕು ಎಂದು ಸ್ಥಳೀಯರು ಮತ್ತು ಕುಟುಂಬದವರು ಆಗ್ರಹಿಸಿದ್ದಾರೆ.