ಪ್ರವಾಸಿಗರ ಸೋಗಿನಲ್ಲಿ ಖೋಟಾ ನೋಟು ಚಲಾವಣೆ! ಪೊಲೀಸರಿಂದ ತಂದೆ, ತಾಯಿ, ಮಗನ ಬಂಧನ
Team Udayavani, Nov 5, 2020, 2:18 PM IST
ಸಕಲೇಶಪುರ: ಪ್ರವಾಸಿಗರ ಸೋಗಿನಲ್ಲಿ ಬಂದು ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ತಂದೆ, ತಾಯಿ ಮತ್ತು ಮಗನನ್ನು ಸ್ಥಳೀಯ ಪೊಲೀಸರು ಬಂಧಿಸಿರುವ ಘಟನೆ ತಾಲೂಕಿನಲ್ಲಿ ನಡೆದಿದೆ.
ಬೆಂಗಳೂರು ಚಾಮರಾಜಪೇಟೆಯ ಅಜಯ್(54), ಜಿ.ಶಾಂತಕುಮಾರಿ (50), ಥಾಮಸ್(23) ಬಂಧಿತರು. ಕೆಎ 03, ಎಎಫ್ 1247 ಬಾಡಿಗೆ ಕಾರಿನಲ್ಲಿ ಬೆಂಗಳೂರಿನಿಂದ ತಾಲೂಕಿನ ಮಂಜ್ರಾಬಾದ್ ಕೋಟೆ ನೋಡಲು ಬಂದಿದ್ದ ಆರೋಪಿಗಳು, ಕೋಟೆ
ಸಮೀಪದ ಕ್ಯಾಂಟೀನ್ವೊಂದರಲ್ಲಿ ತಿಂಡಿ-ತಿನಿಸು ಖರೀದಿ ಮಾಡಿ, ಮಾಲಿಕನಿಗೆ ಖೋಟಾ ನೋಟು ನೀಡಿ, ಕೋಟೆ ನೋಡಲು ತೆರಳಿದ್ದಾರೆ. ಈ ಸಂದರ್ಭದಲ್ಲಿ ಅಂಗಡಿಯವರು ನೋಟಿನ ಬಗ್ಗೆ ಅನುಮಾನ ಬಂದು, ಹೈವೇ ಗಸ್ತು ತಿರುಗುವ ಪೊಲೀಸರಿಗೆ
ಮಾಹಿತಿ ನೀಡಿದ್ದಾರೆ.
ಈ ವೇಳೆ ಡಿವೈಎಸ್ಪಿ ಗೋಪಿ ನೇತೃತ್ವದಲ್ಲಿ ಸಿಬ್ಬಂದಿ ಸತೀಶ್, ಸುನೀಲ್, ಲೋಕೇಶ್, ಪೃಥ್ವಿ, ಮಹಿಳಾ ಸಿಬ್ಬಂದಿ ರಮ್ಯಾ ಮತ್ತು
ಚಾಲಕ ಅಶೋಕ್, ಕೋಟೆ ನೋಡಿಕೊಂಡು ಬಂದ ಜಿ.ಶಾಂತಕುಮಾರಿ ಪರ್ಷ್ ಅನ್ನು ಪರಿಶೀಲಿಸಿದ್ದಾರೆ. ಈ ವೇಳೆ 2000 ರೂ., 500 ರೂ., 200 ರೂ. ಮುಖ ಬೆಲೆಯ ಒಟ್ಟು 77 ಸಾವಿರ ರೂ. ಖೋಟಾ ನೋಟು, 90 ಸಾವಿರ ರೂ. ಅಸಲಿ ನೋಟುಗಳು ಕಂಡು ಬಂದಿದೆ. ಈ ವೇಳೆ ಆರೋಪಿಗಳು ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದು, ದೋಣಿಗಾಲ್ ಬಳಿ ಹಿಡಿದು, ಖೋಟಾ ನೋಟು, ಅಸಲಿ ನೋಟು, ಕಾರು ಸಮೇತ ವಶಕ್ಕೆ ಪಡೆದು ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ.
ಇದನ್ನೂ ಓದಿ:ಬಿಜೆಪಿ ನಾಯಕತ್ವ ತೀರ್ಮಾನ ಮಾಡಲು ನೀವ್ಯಾರು?: ಲಿಂಗಾಯತ ಸಮಿತಿಗೆ ರೇಣುಕಾಚಾರ್ಯ ಪ್ರಶ್ನೆ
ಆರೋಪಿಗಳ ಹಿನ್ನೆಲೆ: ಬಂಧಿತ ಆರೋಪಿ ಅಜಯ್, ಲಾಕ್ಡೌನ್ ಅವಧಿಯಲ್ಲಿ ಪ್ರಿಂಟಿಂಗ್ ಪ್ರಸ್ನಲ್ಲಿ ಕೆಲಸ ಮಾಡುತ್ತಿದ್ದ.
ಈ ವೇಳೆ ಸ್ಕ್ರೀನ್ ಪ್ರಿಂಟಿಂಗ್ ಮಾಡುವುದನ್ನು ಕಲಿತು ಬೆಂಗಳೂರಿನ ತಮ್ಮ ಮನೆಯಲ್ಲಿ ಕಂಪ್ಯೂಟರ್, ಸ್ಕ್ಯಾನರ್, ಪ್ರಿಂಟರ್ ಹಾಗೂ ಖೋಟಾನೋಟು ಮುದ್ರಣಕ್ಕೆ ಬೇಕಾದ ಪೇಪರ್, ಸ್ಪೀಕರ್ ಮುಂತಾದ ಉಪಕರಣಗಳನ್ನು ಇಟ್ಟುಕೊಂಡು
ಖೋಟಾನೋಟು ಮುದ್ರಿಸಿ ಬೆಂಗಳೂರಿನಲ್ಲಿ ಬಾಡಿಗೆ ಕಾರು ಪಡೆದು, ಹೊರ ಜಿಲ್ಲೆಗಳಲ್ಲಿ ಪ್ರಯಾಣಿಸುತ್ತಾ, ವಿವಿಧ ಅಂಗಡಿಗಳಲ್ಲಿ ಸಾಮಾನು ಖರೀದಿಸಿ, ಖೋಟಾನೋಟುಗಳನ್ನು ಚಲಾವಣೆ ಮಾಡುತ್ತಿದ್ದ, ಚಿಲ್ಲರೆಯಾಗಿ ಅಸಲಿ ನೋಟುಗಳನ್ನು ಪಡೆಯುತ್ತಿದ್ದರು ಎಂದು ಪೊಲೀಸ್ ವಿಚಾರಣೆಯಿಂದ ತಿಳಿದುಬಂದಿದೆ.
ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದ ಡಿವೈಎಸ್ಪಿ ಗೋಪಿ, ವೃತ್ತ ನಿರೀಕ್ಷಕ ಗಿರೀಶ್, ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯವನ್ನು ಶ್ಲಾಘಿಸಿರುವ ಜಿಲ್ಲಾ ವರಿಷ್ಠಾಧಿಕಾರಿಯವರು ವಿಶೇಷ ಬಹುಮಾನ ಘೋಷಿಸಿದ್ದಾರೆ.