ಜೈಲಿನಲ್ಲಿ ವಿನಯ ಕುಲಕರ್ಣಿ ಭೇಟಿಯಾದ ಕುಟುಂಬಸ್ಥರು
Team Udayavani, Jan 12, 2021, 3:20 PM IST
ಬೆಳಗಾವಿ: ಧಾರವಾಡ ಜಿಪಂ ಸದಸ್ಯ ಯೋಗೇಶಗೌಡ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿಯನ್ನು ಕೋರ್ಟ್ ಅನುಮತಿಯಂತೆ ಸೋಮವಾರ ಪತ್ನಿ ಶೀವಲೀಲಾ ಹಾಗೂ ಸಹೋದರ ವಿಜಯ ಕುಲಕರ್ಣಿ ಭೇಟಿಯಾದರು. ಧಾರವಾಡದಿಂದ ಕಾರಿನಲ್ಲಿ ವಿನಯ ಕುಲಕರ್ಣಿ ಪುತ್ರಿಯರಾದ ವೈಶಾಲಿ, ದೀಪಾಲಿ ಹಾಗೂ ಪುತ್ರ ಹೇಮಂತ ಆಗಮಿಸಿದ್ದರು.
ಆದರೆ ಕೋರ್ಟ್ ಕೇವಲ ಇಬ್ಬರಿಗೆ ಮಾತ್ರ ಅನುಮತಿ ನೀಡಿದ್ದರಿಂದ ಪುತ್ರ, ಪುತ್ರಿಯರಿಬ್ಬರೂ ಜೈಲು ಆವರಣದಲ್ಲಿಯೇ ಕಾಯ್ದು ಕುಳಿತರು. ಪತ್ನಿ ಹಾಗೂ ಸಹೋದರ ವಿನಯ ಅವರನ್ನು ಭೇಟಿಯಾದರು. ಒಂದು ತಿಂಗಳ ಬಳಿಕ ಕುಟುಂಬಸ್ಥರನ್ನು ಕಂಡು
ವಿನಯ ಭಾವುಕರಾದರು. ತಮ್ಮೊಂದಿಗೆ ತಂದಿದ್ದ ಮನೆ ಆಹಾರವನ್ನು ನೀಡಿದರು. ನಗರದ ಹಿಂಡಲಗಾ ಜೈಲಿನಲ್ಲಿಯೇ ಇರುವ ಮಾಜಿ ಸಚಿವ ವಿನಯ ಕುಲಕರ್ಣಿಯನ್ನು 31 ದಿನದ ಬಳಿಕ ಎರಡನೇ ಬಾರಿಗೆ ಪತ್ನಿ ಶಿವಲೀಲಾ ಭೇಟಿಯಾದರೆ, ಮೊದಲ ಬಾರಿಗೆ
ಸಹೋದರ ವಿಜಯ ಭೇಟಿಯಾದರು.
ಇದನ್ನೂ ಓದಿ:ಬಜೆಟ್ನಲ್ಲಿ ಒಂದು ಸಾವಿರ ಕೋಟಿ ಮೀಸಲಿಡಿ; ಎಚ್.ವಿ. ಅನಂತಸುಬ್ಬರಾವ
ಭೇಟಿಯಾಗಲು ಒಂದು ಗಂಟೆ ಕಾಲ ಅವಕಾಶ ಇತ್ತು. ಸಂಜೆ 4ರಿಂದ 5 ಗಂಟೆಯವರೆಗೆ ಮಾತನಾಡಿದರು. ಆದರೆ ತಂದೆಯನ್ನು ಭೇಟಿಯಾಗದೇ ಮೂವರೂ ಮಕ್ಕಳು ನಿರಾಶರಾಗಿ ವಾಪಸ್ಸು ಹೋದರು. 2020ರ ಡಿ. 10ರಂದು ವಿನಯ ಕುಲಕರ್ಣಿಗೆ ಭೇಟಿಯಾಗಲು ಕುಟುಂಬಸ್ಥರಿಗೆ ಕೋರ್ಟ್ ಅನುಮತಿ ನೀಡಿತ್ತು. ಅನುಮತಿ ಮೇರೆಗೆ ಕುಟುಂಬಸ್ಥರು ಒಂದು ತಿಂಗಳ ಬಳಿಕ ಭೇಟಿಯಾದರು.