ತಹಶೀಲ್ದಾರ್ ಕಚೇರಿಯಿಂದ ಕಡತ ಕದ್ದ ರೈತ: ದೂರು
Team Udayavani, Aug 30, 2019, 3:11 PM IST
ಶಿವಮೊಗ್ಗ: ಪರಿಶೀಲನೆ ಹಂತದಲ್ಲಿದ್ದ ಕಡತವನ್ನು ತಹಶೀಲ್ದಾರ್ ಕಚೇರಿಯಿಂದ ಕಳ್ಳತನ ಮಾಡಲಾಗಿದೆ ಎಂದು ಆರೋಪಿಸಿ ರೈತರೊಬ್ಬರ ವಿರುದ್ಧ ತಾಲೂಕು ಕಚೇರಿ ಶಿರಸ್ತೇದಾರ್ ದೂರು ನೀಡಿದ್ದಾರೆ. ಫೈಲ್ ಕದ್ದೊಯ್ಯುತ್ತಿರುವ ದೃಶ್ಯ ಕಚೇರಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಪರಿಶೀಲನೆ ಹಂತದಲ್ಲಿದ್ದ ಕಡತವನ್ನು, ದೇವೇಂದ್ರಪ್ಪ ಎಂಬುವವರು ಅಧಿಕಾರಿಗಳ ಗಮನಕ್ಕೆ ಬಾರದ ಹಾಗೆ, ತೆಗೆದುಕೊಂಡು ಹೋಗಿದ್ದಾರೆ. ದೇವೇಂದ್ರಪ್ಪ ಫೈಲ್ ಕೊಂಡೊಯ್ಯುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನು ಪರಿಶೀಲಿಸಿದ ಬಳಿಕ, ದೇವೇಂದ್ರಪ್ಪ ವಿರುದ್ಧ ಶಿರಸ್ತೇದಾರ್ ಕೃಷ್ಣಮೂರ್ತಿ ಅವರು ಜಯನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.
ಹೊಳಲೂರಿನ ಬೆಳಲಕಟ್ಟೆ ಗ್ರಾಮದ ಜಮೀನೊಂದನ್ನು ಪಾರ್ವತಮ್ಮ ಎಂಬುವವರ ಹೆಸರಿಗೆ ಪಹಣಿ ನಮೂದಿಸುವಂತೆ ಅರ್ಜಿ ಸಲ್ಲಿಸಲಾಗಿತ್ತು. ಈ ಸಂಬಂಧ ಹೆಚ್ಚುವರಿ ದಾಖಲೆ ಹಾಜರುಪಡಿಸುವಂತೆ ಅಧಿಕಾರಿಗಳು ಸೂಚಿಸಿದ್ದರು. ಪರಿಶೀಲನೆ ಹಂತದಲ್ಲಿದ್ದ ಕಡತವನ್ನು ತಾಲೂಕು ಕಚೇರಿಯಲ್ಲಿ ಶಿರಸ್ತೇದಾರ್ ಟೇಬಲ್ ಮೇಲೆ ಇರಿಸಿದ್ದರು.
ಅವರು ಯಾರು ಇಲ್ಲದ ವೇಳೆ ಕಚೇರಿಗೆ ಬಂದ ದೇವೇಂದ್ರಪ್ಪ ಅವರು ಫೈಲ್ ಕದ್ದೊಯ್ದಿದ್ದಾರೆ, ಅದರಲ್ಲಿದ್ದ ಕೆಲವು ದಾಖಲೆಗಳನ್ನು ತೆಗೆದುಕೊಂಡು, ಉಳಿದ ದಾಖಲೆಗಳ ಫೈಲನ್ನು ಜಿಲ್ಲಾಧಿಕಾರಿ ಕಚೇರಿಗೆ ಹಾಜರುಪಡಿಸಿದ್ದಾರೆ. ಈ ಮೂಲಕ ಸರ್ಕಾರಿ ಕೆಲಸಕ್ಕೆ ತೊಂದರೆ ಮಾಡಿದ್ದಾರೆ ಎಂದು ದೇವೇಂದ್ರಪ್ಪ ಅವರ ವಿರುದ್ಧ ದೂರು ನೀಡಲಾಗಿದೆ.