“ಫೆ. 19ರಿಂದ ಕಡತ ವಿಲೇವಾರಿ; ಮಾ.1ರಿಂದ ತಾಲೂಕು ಮಟ್ಟದ ಕಂದಾಯ ಮೇಳ’
ಸಚಿವ ಸುನಿಲ್ ಕುಮಾರ್ ಅಧ್ಯಕ್ಷತೆಯಲ್ಲಿ ದ.ಕ. ಜಿಲ್ಲಾ ಕೆಡಿಪಿ ಸಭೆ
Team Udayavani, Feb 12, 2022, 7:25 AM IST
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೆ. 19ರಿಂದ 28ರ ತನಕ ಗ್ರಾ.ಪಂ.ನಿಂದ ಹಿಡಿದು ಜಿಲ್ಲಾ ಮಟ್ಟದ ಎಲ್ಲ ಇಲಾಖೆಗಳ ಕಡತ ವಿಲೇವಾರಿ ಅಭಿಯಾನ ಹಾಗೂ ಬಳಿಕ ಮಾ. 1ರಿಂದ ನಾಲ್ಕೈದು ದಿನಗಳ ಕಾಲ ತಾಲೂಕು ಮಟ್ಟದಲ್ಲಿ ಕಂದಾಯ ಮೇಳ ನಡೆಯಲಿದೆ ಎಂದು ಸಚಿವ ಸುನಿಲ್ ಕುಮಾರ್ ತಿಳಿಸಿದರು.
ಗುರುವಾರ ಇಲ್ಲಿನ ಜಿ.ಪಂ. ಸಭಾಂಗಣ ದಲ್ಲಿ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ತ್ತೈಮಾಸಿಕ ಸಭೆ ನಡೆಸಿದ ಬಳಿಕ ಅವರು ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.
ಆಡಳಿತಕ್ಕೆ ಚುರುಕು ಮುಟ್ಟಿಸುವ ಪ್ರಯತ್ನವಾಗಿ ಮತ್ತು ಅರ್ಜಿದಾರರಿಗೆ ನ್ಯಾಯ ಒದಗಿಸುವ ಉದ್ದೇಶದಿಂದ ಕಡತ ವಿಲೇವಾರಿ ಅಭಿಯಾನ ನಡೆಸುತ್ತಿದ್ದು, ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಅಭಿಯಾನದಲ್ಲಿ ಕೊರೊನಾ ಸಂದರ್ಭದಲ್ಲಿ ವಿಲೇ ಆಗದೆ ಬಾಕಿ ಉಳಿದಿರುವ ಎಲ್ಲ ಅರ್ಜಿ ವಿಲೇವಾರಿ ಮಾಡಲಾಗುವುದು. ಕಂದಾಯ ಮೇಳದ ಕೊನೆಯಲ್ಲಿ ಫಲಾ ನುಭವಿಗಳಿಗೆ ರೇಶನ್ ಕಾರ್ಡ್, ಹಕ್ಕುಪತ್ರ ವಿತರಣೆ ನಡೆಯಲಿದೆ ಎಂದರು.
ಫೆ. 19ರೊಳಗೆ ವಿಕಲಚೇತನರ ಬಾಕಿ ಅರ್ಜಿ ವಿಲೇ
ವಿಕಲಚೇತನರ ಮಾಶಾಸನ ಅರ್ಜಿ ಪರಿಶೀಲನೆ ಬಗ್ಗೆ ಚರ್ಚೆ ನಡೆದಿದ್ದು, 2,800 ಮಂದಿಯ ಅರ್ಜಿ ವಿಲೇ ಆಗದೆ ಬಾಕಿ ಆಗಿರುವುದು ಗಮನಕ್ಕೆ ಬಂದಿದೆ. ಫೆ. 19ರೊಳಗೆ ಎಲ್ಲ ಅರ್ಜಿಗಳನ್ನು ವಿಲೇ ಗೊಳಿಸಿ ಮಾಸಾಶನ ನೀಡಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
ಬಿಪಿಎಲ್ ಕಾರ್ಡ್ಗೆ 3,600 ಮಂದಿ ಅರ್ಜಿ ಸಲ್ಲಿಸಿದ್ದು, ಸಿಗದವರಿಗೆ ಪರಿ ಶೀಲನೆ ನಡೆಸಿ ಕಾರ್ಡ್ ವಿತರಿಸಲು ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ 1.15 ಲಕ್ಷ ರೈತರಿದ್ದು, ಯಾವುದೇ ರೈತರ ಮಕ್ಕಳು ವಿದ್ಯಾನಿಧಿಯಿಂದ ಹೊರಗುಳಿಯದಂತೆ ಸೂಚನೆ ನೀಡಲಾಗಿದೆ ಎಂದರು.
ಜಲಜೀವನ್ ಮಿಶನ್ ಯೋಜನೆ
ಜಿಲ್ಲಾ ಮಟ್ಟದ ಜಲಜೀವನ್ ಮಿಶನ್ ಯೋಜನೆಯಡಿ 310 ಕೋ.ರೂ. ಅನುದಾನ ಬಿಡುಗಡೆಯಾಗಿದೆ. ಒಟ್ಟು 468 ಕಾಮಗಾರಿಗಳಲ್ಲಿ 168 ಕಾಮಗಾರಿ ಪೂರ್ಣಗೊಂಡಿದ್ದು, ಕಾಮಗಾರಿ ವೇಗ ಹೆಚ್ಚಿಸಿ 2023ರ ಒಳಗೆ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ. ಒಟ್ಟು 28 ಸಾವಿರ ಮನೆಗಳಿಗೆ ನಳ್ಳಿ ನೀರಿನ ಸಂಪರ್ಕ ಒದಗಿಸಲಾಗಿದೆ. 58 ಸಾವಿರ ಮನೆಗಳಿಗೆ ಮಾರ್ಚ್ಗೊಳಗೆ ಪೂರ್ಣಗೊಳಿಸಲು ನಿರ್ಣಯಿಸಲಾಗಿದೆ. 94 ಸಿ ಮತ್ತು 94ಸಿಸಿಯಡಿ 53 ಸಾವಿರ ಅರ್ಜಿಗಳು ಐದು ವರ್ಷಗಳಲ್ಲಿ ತಿರಸ್ಕೃತವಾಗಿವೆ. ಸಕಾರಣವಿಲ್ಲದೆ ತಿರಸ್ಕೃತಗೊಂಡವುಗಳನ್ನು ಪುನರ್ ಪರಿಶೀಲಿಸಲು ಕಂದಾಯ ಇಲಾಖೆಗೆ ಸೂಚನೆ ನೀಡಲಾಗಿದೆ. ಅರ್ಹತೆ ಇರುವವರಿಗೆ ಹಕ್ಕುಪತ್ರ ನೀಡಲು ತೀರ್ಮಾನಿಸಲಾಗಿದೆ.
ಮಂಗಳೂರು ಮನಪಾ ಮತ್ತು ಸ್ಮಾರ್ಟ್ ಸಿಟಿ ಕಾಮಗಾರಿ ಸಂಬಂಧಿತ ವಿಸ್ತೃತ ಸಭೆ ಮುಂದಿನ ವಾರ ನಡೆಸಲಾಗುವುದು. ರಾ.ಹೆ. ಮತ್ತು ಜಿಲ್ಲೆಗೆ ಬರುವ ಯೋಜನೆಗಳ ಬಗ್ಗೆ ಅಧಿವೇಶನ ಸಂದರ್ಭದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಪಡೀಲ್ನಲ್ಲಿ ನೂತನ ಜಿಲ್ಲಾಧಿಕಾರಿ ಕಚೇರಿ ಕಾಮಗಾರಿ ಸುಮಾರು ಶೇ. 70ರಷ್ಟು ಪೂರ್ಣಗೊಂಡಿದ್ದು, ಶೀಘ್ರ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ತಾಲೂಕಿಗೊಂದು ಗೋಶಾಲೆ; ದೇಗುಲದಿಂದ ನಿರ್ವಹಣೆ
ಜಿಲ್ಲಾ ಮಟ್ಟದ ಗೋಶಾಲೆಯನ್ನು ರಾಮಕುಂಜದಲ್ಲಿ ನಿರ್ಮಿಸಲು ಜಾಗ ಗುರುತಿಸುವ ಕಾರ್ಯ ನಡೆದಿದೆ. ಶಾಸಕರ ಆಸಕ್ತಿ ಮೇರೆಗೆ ತಾಲೂಕಿಗೊಂದು ಗೋಶಾಲೆ ನಿರ್ಮಿಸಿ ದೇವಸ್ಥಾನ ಆಡಳಿತ ಮಂಡಳಿ ಮೂಲಕ ನಿರ್ವಹಣೆ ಬಗ್ಗೆ ಚರ್ಚಿಸಲಾಗಿದೆ. ಸುಬ್ರಹ್ಮಣ್ಯ, ಪುತ್ತೂರು, ಪೊಳಲಿ, ಕಟೀಲು, ಸೌತಡ್ಕ ದೇವಸ್ಥಾನಗಳ ಮೂಲಕ ತಾಲೂಕು ಮಟ್ಟದ ಗೋಶಾಲೆ ನಿರ್ವಹಿಸುವ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಲಾಗಿದೆ. ಸ್ಥಳವನ್ನು ಗುರುತಿಸಲು ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಕೆಲವೆಡೆ ಸ್ಥಳ ಗುರುತಿಸಲಾಗಿದೆ; ಬಾಕಿ ಉಳಿದೆಡೆ ಸ್ಥಳ ಗುರುತಿಸಲಾಗುವುದು ಎಂದು ಸಚಿವರು ತಿಳಿಸಿದರು.
“ಅಧಿಕಾರಿಗಳು ತಂಡವಾಗಿ ಕೆಲಸ ಮಾಡಿ’
ಜಿಲ್ಲೆಯ ಅಧಿಕಾರಿಗಳು ತಂಡವಾಗಿ ಕೆಲಸ ಮಾಡಬೇಕು; ಹಾಗಾದಾಗ ಮಾತ್ರ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸಾಧ್ಯ ಎಂದು ಸಚಿವ ಸುನಿಲ್ ಹೇಳಿದರು.
ಕೆಡಿಪಿ ಎಲ್ಲ ಜನಪ್ರತಿನಿಧಿಗಳು ಹಾಜರಾ ಗುವ ಮಹತ್ವದ ಸಭೆ, ಇಲ್ಲಿ ಅವರು ಬಯಸುವ ಮಾಹಿತಿಯನ್ನು ಸಂಬಂಧಿ ಸಿದ ಅಧಿಕಾರಿಗಳು ನೀಡಬೇಕು, ಕಾಟಾ ಚಾರದ ಉತ್ತರ ಸಹಿಸುವುದಿಲ್ಲ ಎಂದರು.
ವಿಧಾನಸಭೆ ಅಧಿವೇಶನದ ಬಳಿಕ ತಾಲೂಕು ಮಟ್ಟದಲ್ಲಿ ಕೆಡಿಪಿ ಸಭೆ ನಡೆಸಲಾಗುವುದು. 15 ದಿನಗಳ ಬಳಿಕ ಸಭೆಯಲ್ಲಿ ಚರ್ಚಿಸಿದ ಅಂಶಗಳಿಗೆ ಉತ್ತರ ನೀಡುವಂತೆ ಸೂಚಿಸಿದರು. ಸಂಸದ ನಳಿನ್ ಮಾತನಾಡಿದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಪೊಲೀಸ್ ಕಮಿಶನರ್ ಶಶಿಕುಮಾರ್, ಜಿಲ್ಲಾ ಎಸ್ಪಿ ಋಷಿಕೇಶ್ ಸೋನಾವಣೆ, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ವೇದಿಕೆಯಲ್ಲಿದ್ದರು.
ಶಾಸಕರಾದ ಡಾ| ಭರತ್ ಶೆಟ್ಟಿ, ಹರೀಶ್ ಪೂಂಜ, ಉಮಾನಾಥ ಕೋಟ್ಯಾನ್, ರಾಜೇಶ್ ನಾಯ್ಕ, ಯು.ಟಿ. ಖಾದರ್, ವಿಧಾನ ಪರಿಷತ್ ಸದಸ್ಯರಾದ ಆಯ ನೂರು ಮಂಜುನಾಥ್, ಪ್ರತಾಪ ಸಿಂಹ ನಾಯಕ್, ಮಂಜುನಾಥ ಭಂಡಾರಿ, ಹರೀಶ್ ಕುಮಾರ್, ಬಿ.ಎಂ. ಫಾರೂಕ್, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಸಭೆಯಲ್ಲಿದ್ದರು.
ಕೊರೊನಾ ಸಂದರ್ಭ ಪರಿಹಾರ ಕಾಮಗಾರಿ ನಿರ್ವಹಿಸಿದ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳಿಗೆ ಸರಕಾರದ ವತಿಯಿಂದ ಸಚಿವರು ಪ್ರಮಾಣಪತ್ರ ವಿತರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ