ನಿಜವಾಯಿತು ಯಡಿಯೂರಪ್ಪರ ನಾಲ್ಕು ಭವಿಷ್ಯವಾಣಿ!
Team Udayavani, Jul 27, 2019, 5:55 AM IST
ಬೆಂಗಳೂರು: ‘ರಾಜ್ಯದಲ್ಲಿ ಬಿಜೆಪಿ 22ಕ್ಕೂ ಹೆಚ್ಚು ಲೋಕಸಭಾ ಸ್ಥಾನ ಗೆಲ್ಲಲಿದೆ. ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಮೈತ್ರಿ ಸರಕಾರ ಪತನವಾಗಲಿದೆ. ವಿಧಾನಮಂಡಲ ಅಧಿವೇಶನ ನಡೆಯುವುದೇ? ಎಂದು ಕಾದು ನೋಡೋಣ. ಬಿಜೆಪಿ ಸರಕಾರ ರಚನೆಯಾಗಲಿದೆ…’
ಕಳೆದ ನಾಲ್ಕು ತಿಂಗಳುಗಳಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ನುಡಿದ ನಾಲ್ಕು ಭವಿಷ್ಯವಾಣಿಗಳು ನಿಜವಾಗಿದ್ದು, ಅಂದುಕೊಂಡಂತೆಯೇ ಯಡಿಯೂರಪ್ಪ ಅವರು ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವುದು ವಿಶೇಷ.
ವಿಧಾನಸಭೆಯಲ್ಲಿ 104 ಶಾಸಕ ಬಲವಿದ್ದರೂ ಬಿಜೆಪಿಗೆ ವಿಶ್ವಾಸ ಮತ ಸಾಬೀತುಪಡಿಸಿ ಸರಕಾರ ರಚಿಸಲು ಸಾಧ್ಯವಾಗಿರಲಿಲ್ಲ. ಹಾಗಿದ್ದರೂ ಬದಲಾದ ಸನ್ನಿವೇಶದಲ್ಲಿ ಸರಕಾರ ರಚನೆ ಅವಕಾಶ ಸಿಕ್ಕರೆ ಬಳಸಿಕೊಳ್ಳುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಲೇ ಬಂದಿತ್ತು. ಮೈತ್ರಿ ಸರಕಾರ ಅಸ್ಥಿರಗೊಳಿಸಲು ಆರು ಬಾರಿ ನಡೆಸಿದ ಪ್ರಯತ್ನ ಕೈಗೂಡದಿದ್ದರೂ ಏಳನೇ ಪ್ರಯತ್ನ ಫಲ ನೀಡಿದಂತಿದ್ದು, ಮುಖ್ಯಮಂತ್ರಿಯಾಗುವ ಯಡಿಯೂರಪ್ಪ ಅವರ ಕನಸು ನನಸಾಗಿದೆ.
ಲೋಕಸಭೆಯಲ್ಲಿ 22ಕ್ಕೂ ಹೆಚ್ಚು ಸ್ಥಾನ
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಪ್ರಚಾರ ಭಾಷಣ, ಸಭೆಗಳಲ್ಲಿ ಯಡಿಯೂರಪ್ಪ ಅವರು ರಾಜ್ಯದಲ್ಲಿ ಬಿಜೆಪಿ 22ಕ್ಕೂ ಹೆಚ್ಚು ಸ್ಥಾನ ಗಳಿಸುವುದಾಗಿ ಭವಿಷ್ಯ ನುಡಿದಿದ್ದರು. ಕಾಂಗ್ರೆಸ್ನ ಘಟನಾನುಘಟಿ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಎಂ.ವೀರಪ್ಪ ಮೊಲಿ, ಕೆ.ಎಚ್.ಮುನಿಯಪ್ಪ ಸೋಲು ಅನುಭವಿಸಲಿದ್ದಾರೆ ಎಂದು ಹೇಳಿದ್ದರು. ಆದರೆ ಇದು ಕಾಂಗ್ರೆಸ್, ಜೆಡಿಎಸ್ ನಾಯಕರಿರಲಿ, ಸ್ವತಃ ಬಿಜೆಪಿ ನಾಯಕರಿಗೇ ಈ ಗುರಿ, ನಿರೀಕ್ಷೆ ವಾಸ್ತವಕ್ಕೆ ದೂರ ಎಂಬಂತಿತ್ತು. ಬಿಜೆಪಿ ನಡೆಸಿದ ಚುನಾವಣ ಪೂರ್ವ ಆಂತರಿಕ ಸಮೀಕ್ಷೆಯಲ್ಲೂ ಗೆಲ್ಲುವ ಲೋಕಸಭಾ ಕ್ಷೇತ್ರಗಳ ಸಂಖ್ಯೆ 18 ದಾಟಿರಲಿಲ್ಲ. ಇದರಿಂದ ಸಹಜವಾಗಿಯೇ ಬಿಜೆಪಿ ನಾಯಕರು ಫಲಿತಾಂಶ ಬಂದಾಗ ಮುಜುಗರಕ್ಕೀಡಾಗುವ ಆತಂಕದಲ್ಲಿದ್ದರು.
ಆದರೆ ಚುನಾವಣ ಫಲಿತಾಂಶ ಪ್ರಕಟವಾದಾಗ ರಾಜ್ಯದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಬಿಜೆಪಿ ದಾಖಲೆ ಅತಿ ಹೆಚ್ಚು 25 ಸ್ಥಾನಗಳಲ್ಲಿ ಜಯ ಗಳಿಸಿತ್ತು. ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಕೂಡ ಜಯ ಗಳಿಸಿದ್ದು, ಒಟ್ಟು ಬಿಜೆಪಿ 26 ಸ್ಥಾನವನ್ನು ಗೆದ್ದಂತಾಗಿತ್ತು. ಬಿಜೆಪಿ ಗೆಲ್ಲುವ ಸ್ಥಾನಗಳನ್ನು ಒಂದಂಕಿಗೆ ಇಳಿಸುವುದಾಗಿ ಹೇಳಿದ್ದ ಕಾಂಗ್ರೆಸ್, ಜೆಡಿಎಸ್ ತಲಾ ಒಂದು ಸ್ಥಾನವನ್ನಷ್ಟೇ ಗೆಲ್ಲುವ ಮೂಲಕ ತೀವ್ರ ಮುಖಭಂಗ ಅನುಭವಿಸಿದವು. ಯಡಿಯೂರಪ್ಪ ಅವರು ಹೇಳಿದ್ದ ಮೊದಲ ಭವಿಷ್ಯ ನುಡಿ ನಿರೀಕ್ಷೆ ಮೀರಿ ನಿಜವಾಗಿತ್ತು.
ಅಧಿವೇಶನ ನಡೆಯುವುದೇ ನೋಡೋಣ
ಮೈತ್ರಿ ಸರಕಾರ ಮಳೆಗಾಲದ ಅಧಿವೇಶನವನ್ನು ಜು.12ರಿಂದ 26ರವರೆಗೆ ನಡೆಸುವುದಾಗಿ ಪ್ರಕಟಿಸುತ್ತಿದ್ದಂತೆ ಮೂರು ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆ ಬಿರುಸುಗೊಂಡಿತ್ತು. ಈ ನಡುವೆ ಯಡಿಯೂರಪ್ಪ ಅವರು ಅಧಿವೇಶನ ನಡೆಯುವುದೇ ಎಂದು ಕಾದು ನೋಡೋಣ ಎಂದು ಹೇಳಿದ್ದರು. ಕಾಂಗ್ರೆಸ್, ಜೆಡಿಎಸ್ ಶಾಸಕರ ರಾಜೀನಾಮೆ, ಮುಂಬಯಿ ಹೊಟೇಲ್ನಲ್ಲಿ ವಾಸ್ತವ್ಯ ಮತ್ತಿತರ ಬೆಳವಣಿಗೆಯಿಂದ ಸಂತಾಪ ಸೂಚನೆ ಮೇಲಿನ ಚರ್ಚೆ ಹೊರತುಪಡಿಸಿದರೆ ಉಳಿದ ಯಾವುದೇ ಚರ್ಚೆ ನಡೆಯಲಿಲ್ಲ. ಕುಮಾರಸ್ವಾಮಿಯವರು ಮಂಡಿಸಿದ ವಿಶ್ವಾಸ ಮತ ಯಾಚನೆ ಪ್ರಸ್ತಾವದ ಮೇಲಿನ ಚರ್ಚೆಗೆ ಸೀಮಿತಗೊಂಡು ಮೈತ್ರಿ ಸರಕಾರದ ಪತನದೊಂದಿಗೆ ಅಧಿವೇಶನ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಯಿತು.
-ಎಂ.ಕೀರ್ತಿಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
MUST WATCH
ಹೊಸ ಸೇರ್ಪಡೆ
MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ
Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ
Village Life: ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ