ಕ್ಯಾನ್ಸರ್ ಬಾಧಿತ ಮಹಿಳೆಗೆ ಜೀವನ ಪರ್ಯಂತ ಉಚಿತ ಆ್ಯಂಬುಲೆನ್ಸ್ ಸೇವೆ ನೀಡಿದ ಚಾಲಕ
Team Udayavani, Jul 26, 2020, 9:28 AM IST
ಬೆಳ್ತಂಗಡಿ: ಕ್ಯಾನ್ಸರ್ ಬಾಧಿತ ಕಟೀಲಿನ ಕೊಂಡೇಲದ ಬಡ ಮಹಿಳೆಯೊಬ್ಬರ ನೆರವಿಗೆ ಬೆಳ್ತಂಗಡಿ ತಾಲೂಕಿನ ಆ್ಯಂಬುಲೆನ್ಸ್ ಚಾಲಕರೊಬ್ಬರು ನೆರವಾಗಿದ್ದಾರೆ.
ಇತ್ತೀಚೆಗೆ ಕಟೀಲಿನ ರಾಮ್ ಸೇನಾ ಕೇಸರಿ ಘಟಕದ ಕಾರ್ಯಕರ್ತರೊಬ್ಬರು ಕೊಂಡೇಲದ ಬಡ ಮಹಿಳೆಯೊಬ್ಬರ ಕರುಣಾಜನಕ ಪರಿಸ್ಥಿತಿಯ ಕುರಿತು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಅದನ್ನು ಗಮನಿಸಿದ ಬೆಳ್ತಂಗಡಿಯ ಖುಷಿ ಆ್ಯಂಬುಲೆನ್ಸ್ ಮಾಲಕ/ಚಾಲಕರಾಗಿರುವ ಅಭಿಲಾಷ್ ಎಂ. ಅವರು ಸಂತ್ರಸ್ತೆಗೆ ಜೀವನ ಪರ್ಯಂತ ಆ್ಯಂಬುಲೆನ್ಸ್ ಸೇವೆಯನ್ನು ಉಚಿತವಾಗಿ ಒದಗಿಸುವುದಾಗಿ ಘೋಷಿಸಿದ್ದಾರೆ.
ಮೂಡುಬಿದಿರೆಯಿಂದ ಮಂಗಳೂರಿಗೆ ವಾರಕ್ಕೊಂದು ಬಾರಿ ರೋಗಿಯು ಹೋಗಿ ಬರಬೇಕಾಗಿತ್ತು. ಕೋವಿಡ್ ಸಂದರ್ಭ ಪ್ರತಿ ವಾರ ವೈದ್ಯರ ಭೇಟಿ ಸಾಧ್ಯವಾಗದೆ ಮಹಿಳೆ ತೀವ್ರ ಸಂಕಷ್ಟ ಎದುರಿಸುತ್ತಿದ್ದರು. ಈ ಸಂದರ್ಭ ಅಭಿಲಾಷ್ ಅವರು ಮಾನವೀಯ ನಡೆಯ ಮೂಲಕ ಶ್ಲಾಘನೆಗೆ ಪಾತ್ರರಾಗಿದ್ದಾರೆ.