ಭದ್ರಾವತಿ: ಗಣಪತಿ ಮೂರ್ತಿಗೆ ಅಂತಿಮ ರೂಪ
Team Udayavani, Aug 20, 2020, 12:30 PM IST
ಭದ್ರಾವತಿ: ಎಲ್ಲೆಡೆ ಕೋವಿಡ್ ಹಾವಳಿ ಜೋರಾಗಿದ್ದು, ಗಣಪತಿ ಮೂರ್ತಿ ತಯಾರಿಸುವವರ ಮೇಲೂ ಇದರ ಕರಿನೆರಳು ಬಿದ್ದಿದೆ. ಪ್ರತಿ ಬಾರಿ ಗಣಪತಿ ಹಬ್ಬಕ್ಕೆ ಎರಡು-ಮೂರು ತಿಂಗಳ ಮುಂಚಿತವಾಗಿ ಗಣಪತಿ ವಿಗ್ರಹ ತಯಾರಿ ಶುರುವಾಗುತ್ತದೆ.
ಗಣಪತಿ ಪ್ರತಿಷ್ಠಾಪಿಸುವ ಸಂಘ, ಸಂಸ್ಥೆಯವರು ನೀಡುವ ಆರ್ಡರ್ ಆಧಾರದ ಮೇರೆಗೆ ವೈವಿಧ್ಯಮಯ ಗಣಪತಿ ತಯಾರಿಕೆ ಮಾಡುತ್ತಿದ್ದ ಇಲ್ಲಿನ ಗಣಪತಿ ತಯಾರಿಸುವವರು ಈ ಬಾರಿ ಕೊರೊನಾ ಪರಿಣಾಮವಾಗಿ ಸಂಘ ಸಂಸ್ಥೆಗಳಿಂದ ಆರ್ಡರ್ ಬಾರದ ಹಿನ್ನೆಲೆಯಲ್ಲಿ ಬೆರಳೆಣಿಕೆ ಸಂಖ್ಯೆಯಷ್ಟು ಗಣಪತಿಯನ್ನು ಮಾತ್ರ ತಯಾರಿಸಿದ್ದಾರೆ.
ಸರ್ಕಾರದ ಉದಾಸೀನ: ಕೋವಿಡ್ ಹಿನ್ನೆಲೆಯಲ್ಲಿ ಗಣಪತಿ ತಯಾರಿಸುವವರು ಗಣಪತಿ ಹಬ್ಬದ ರೂಪು ರೇಷೆಗಳನ್ನು
ಹಾಗೂ ಗಣಪತಿ ವಿಗ್ರಹ ತಯಾರಿಕೆಗೆ ಅನುಮತಿ ನೀಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದರೂ ಸಹ ಸರ್ಕಾರ
ಅದನ್ನು ಗಂಭೀರವಾಗಿ ಪರಿಗಣಿಸದೆ ಈಗ ಹಬ್ಬಕ್ಕೆ ಕೇವಲ ಮೂರು ದಿನಗಳು ಉಳಿದಿರುವಾಗ 2 ಅಡಿ, ನಾಲ್ಕು ಅಡಿ
ಗಣಪತಿ ವಿಗ್ರಹ ಮಾತ್ರ ಇಡಬೇಕು ಎಂದು ಮಾರ್ಗಸೂಚಿ ನೀಡಿರುವುದು ಗಣಪತಿ ತಯಾರಕರಿಗೆ ಸಮಸ್ಯೆಯಾಗಿದೆ. ಆದರೂ
ವೃತ್ತಿ ಬಿಡಬಾರದು ಎಂಬ ಉದ್ದೇಶದಿಂದ ಕಡಿಮೆ ಪ್ರಮಾಣದ 2, 4ಅಡಿ ಎತ್ತರದ ಗಣಪತಿಯನ್ನು ತಯಾರು ಮಾಡಲಾಗಿದೆ
ಎಂದು ಸುಮಾರು 87 ವರ್ಷದಿಂದ ವಂಶ ಪಾರಂಪರ್ಯವಾಗಿ ಗಣಪತಿ ತಯಾರಿಕಾ ವೃತ್ತಿ ಮಾಡಿಕೊಂಡು ಬರುತ್ತಿರುವ ಯುವ
ಕಲಾವಿದ ಮಲ್ಲಿಕಾರ್ಜುನ ಹೇಳುತ್ತಾರೆ.
ಪ್ರತಿ ವರ್ಷ 300 ಚಿಕ್ಕಗಾತ್ರದ ಗಣಪತಿ ಹಾಗೂ 7-8 ಅಡಿ ಎತ್ತರದ ಸುಮಾರು 60 ಗಣಪತಿ ವಿಗ್ರಹ ತಯಾರಿಸುವ ಮೂಲಕ ಸುಮಾರು 2.5 ಲಕ್ಷದಷ್ಟು ವಹಿವಾಟನ್ನು ಮಾಡುತ್ತಿದ್ದೇವು. ಆದರೆ ಈ ಬಾರಿ ಕೊರೊನಾ ಕಾರಣ ವಿರಳ ಸಂಖ್ಯೆಯಲ್ಲಿ ಬಂದ ಆರ್ಡರ್ ಹೊರತುಪಡಿಸಿ ಬೇರೆ ಯಾವುದೇ ಆರ್ಡರ್ ಬಾರದಿರುವುದರಿಂದ, ಸರ್ಕಾರ ಸಹ ಗಣಪತಿ ಪ್ರತಿಷ್ಠಾಪನೆಯ ಕುರಿತಂತೆ ಮಾರ್ಗಸೂಚಿ ತಡವಾಗಿ ಬಿಡುಗಡೆ ಮಾಡಿರುವ ಕಾರಣ 150 ಚಿಕ್ಕಗಣಪತಿ ಮತ್ತು 4 ಅಡಿ ಎತ್ತರದ 8 ಗಣಪತಿ ಮಾತ್ರ ತಯಾರು ಮಾಡಿದ್ದೇವೆ. ಈ ಬಾರಿ ಐವತ್ತು ಸಾವಿರ ವಹಿವಾಟು ಆಗುವುದು ಸಹ ಅನುಮಾನವೆನಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೋವಿಡ್ ಸಂಹಾರಕ ಗಣಪತಿ: ಕುಂಬಾರ ವೃತ್ತಿ ಜತೆಗೆ ಕಳೆದ ಮೂವತ್ತು ವರ್ಷದಿಂದ ಗಣಪತಿ ತಯಾರು ಮಾಡುತ್ತಾ ಬಂದಿರುವ ಅದೇ ಬೀದಿಯ ಕಲಾವಿದ ಪಿ.ಬಸವರಾಜ್ ಅವರು ಹೇಳುವಂತೆ ಪ್ರತಿ ವರ್ಷ ದೊಡ್ಡಗಾತ್ರದ 30 ವೈವಿಧ್ಯಮಯವಾದ ಭಂಗಿಯ ಗಣಪತಿಯನ್ನು ತಯಾರು ಮಾಡುತ್ತಿದ್ದೇವು. ಆದರೆ ಕೊರೊನಾ ಕಾರಣ ಯಾರೂ ಆರ್ಡರ್ ಕೊಡದ ಕಾರಣ ಕೇವಲ 9 ಗಣಪತಿ ವಿಗ್ರಹ ತಯಾರಿಸಿದ್ದೇವೆ. ಈ ಬಾರಿ ಕೋವಿಡ್ ಸಂಹಾರಕ ಭಂಗಿಯಲ್ಲಿರುವ
ಗಣಪತಿಯನ್ನು ತಯಾರಿಸಿರುವುದು ವಿಶೇಷವಾಗಿದೆ ಎಂದರು. ಒಟ್ಟಿನಲ್ಲಿ ಈ ಬಾರಿ ಸರ್ಕಾರ ಬಿಡುಗಡೆ ಮಾಡಿರುವ
ಮಾರ್ಗಸೂಚಿ ಮೇರೆಗೆ ಗಣಪತಿ ತಯಾರಿಕರಿಂದ ಹಿಡಿದು ಆರ್ಕೆಸ್ಟ್ರಾ ತಂಡ, ಸಂಗೀತ ಕಲಾ ತಂಡ ಎಲ್ಲರಿಗೂ ಕೋವಿಡ್
ತೊಂದರೆ ತೊಂದರೆ ಉಂಟು ಮಾಡಿದೆ.
– ಕೆ. ಎಸ್. ಸುಧೀಂದ್ರ