ಕೋವಿಡ್-19 ಸಂಕಷ್ಟದಲ್ಲಿ ಗೇರು ಗುತ್ತಿಗೆದಾರರು, ಉದ್ದಿಮೆಗಳು
Team Udayavani, Apr 23, 2020, 5:45 AM IST
ಬೈಂದೂರು: ವರ್ಷದ ಆರಂಭದಲ್ಲಿ ಹವಾಮಾನದ ವೈಪರೀತ್ಯ ಹಾಗೂ ಕೀಟ ಬಾಧೆಯಿಂದಾಗಿ ಆತಂಕ ಕಂಡಿರುವ ಗೇರು ಬೆಳೆ ಕುಸಿತ ಕಂಡಿತ್ತು. ಇದರ ಬಳಿಕ ಕೋವಿಡ್-19 ಹಿನ್ನೆಲೆಯಲ್ಲಿ ಲಾಕ್ಡೌನ್ ಪರಿಣಾಮ ಗೇರು ಗುತ್ತಿಗೆದಾರರು ಹಾಗೂ ಉದ್ದಿಮೆದಾರರು ಸಂಕಷ್ಟ ಪಡುವಂತಾಗಿದೆ.
ಕೂಲಿ ಕಾರ್ಮಿಕರ ಸಮಸ್ಯೆಯಿಂದ ಬೆಳೆದ ಗೇರು ಬೀಜ ಬಿದ್ದು ಕಾಡು ಪ್ರಾಣಿ ಗಳ ಪಾಲಾಗಿದೆ.ಇದರಿಂದಾಗಿ ಗೇರು ಗುತ್ತಿಗೆದಾರರಿಗೆ ಅಪಾರ ನಷ್ಟ ಉಂಟಾಗಿದೆ. ಈ ಹಂತದಲ್ಲಿ ಸರಕಾರ ಸ್ಪಂದಿಸಬೇಕು ಎನ್ನುವುದು ಗೇರು ಬೆಳೆಗಾರರ ಹಾಗೂ ಗುತ್ತಿಗೆದಾರರ ಆಗ್ರಹವಾಗಿದೆ. ಈ ಬಾರಿ ಆರಂಭದಲ್ಲಿಯೇ ಗೇರು ಬೆಳೆ ಕುಸಿದಿದ್ದು, ಇನ್ನೇನು ಬೆಳೆ ಸ್ವಲ್ಪ ಮಟ್ಟಿಗಾದರೂ ಕೈ ಹಿಡಿಯಬಹುದು ಎನ್ನು ವಷ್ಟರಲ್ಲಿಯೇ ಕೋವಿಡ್-19 ದಿಂದಾಗಿ ದೇಶ ಲಾಕ್ಡೌನ್ ಆಗಿದೆ.
ಇದರಿಂದ ಬೆಳೆದ ಗೇರು ಬೆಳೆಯನ್ನು ತೆಗೆ ಯಲು ಕೂಲಿ ಕಾರ್ಮಿಕರ ಕೊರತೆ ಎದುರಾಗಿದೆ. ಗೇರು ಬೀಜ ಬಿದ್ದು ಕಾಡು ಪ್ರಾಣಿಗಳ ಬಾಯಿಗೆ ತುತ್ತಾಗಿ ಸಂಪೂರ್ಣ ನಷ್ಟ ಉಂಟಾಗಿದ್ದು, ಸಾಲ ಸೂಲ ಮಾಡಿ ಗುತ್ತಿಗೆಯಲ್ಲಿ ಪಾಲ್ಗೊಂಡ ಗುತ್ತಿಗೆದಾರರು ನಷ್ಟ ಅನುಭವಿಸುವಂತಾಗಿದೆ.
ಧಾರಣೆಯೂ ಕುಸಿತ
ಈ ವರ್ಷ ಇಳುವರಿ ಸಾಕಷ್ಟು ಪ್ರಮಾಣದಲ್ಲಿ ಕಡಿಮೆ ಯಾಗಿ ರುವ ಜತೆಗೆ ದರ ಕೂಡ ಕುಸಿತಗೊಂಡಿದೆ. ಕಳೆದ ವರ್ಷ ಪ್ರತಿ ಕೆ.ಜಿ. ಗೇರುಬೀಜಕ್ಕೆ 110-120 ರೂ. ಧಾರಣೆ ಇದ್ದು ಈ ಬಾರಿ ಇದುವರೆಗೆ ಕೇವಲ 80 – 90 ರೂ. ಗೆ ಇಳಿದಿದೆ. ಹವಾಮಾನ ವೈಪರೀತ್ಯ ಹಾಗೂ ಗೇರು ಬೆಳೆಗೆ ಕೀಟ ಬಾಧೆ ಆವರಿಸಿಕೊಂಡ ಹಿನ್ನೆಲೆಯಲ್ಲಿ ಆರಂಭ ದಲ್ಲಿಯೇ ಬೆಳೆ ಕುಸಿದಿದೆ. ಅಲ್ಲದೇ ಕೋವಿಡ್-19 ವೈರಸ್ನಿಂದ ಲಾಕ್ಡೌನ್ ಆಗಿ ಗೇರು ಬೀಜವನ್ನು ತೆಗೆಯಲು ಕೂಲಿ ಕಾರ್ಮಿಕರ ಸಮಸ್ಯೆ ಕಾಣಿಸಿಕೊಂಡು ಬಿದ್ದ ಗೇರು ಬೀಜಗಳನ್ನು ಕಾಡು ಪ್ರಾಣಿಗಳು ತಿಂದು ಸಂಪೂರ್ಣ ನಷ್ಟವುಂಟಾಗಿದೆ, ಗೇರು ಅಭಿವೃದ್ಧಿ ನಿಗಮ ಹಾಗೂ ಸರಕಾರ ಎಲ್ಲ ಗೇರು ಗುತ್ತಿಗೆದಾರರ ಸಮಸ್ಯೆಗಳಿಗೆ ಸ್ಪಂದಿಸಿ, ನಷ್ಟ ಭರಿಸಿಕೊಡುವ ಕೆಲಸಮಾಡಬೇಕು ಎನ್ನುವುದು ಗೇರು ಗುತ್ತಿಗೆದಾರ ರಾಜು ಪೂಜಾರಿ ಅವರ ಅಭಿಪ್ರಾಯವಾಗಿದೆ.
ಕೋವಿಡ್-19 ಲಾಕ್ಡೌನ್ನಿಂದಾಗಿ ಗುತ್ತಿಗೆದಾರರಿಗೆ ಗೇರು ಬೀಜ ತೆಗೆಯಲು ಅವಕಾಶ ಕಲ್ಪಿಸಿಕೊಡುವಂತೆ ಸಹಾಯಕ ಕಮಿಷನರ್ ಅವರಿಗೆ ಮನವಿ ಮಾಡಿಕೊಂಡಿದ್ದು, ಬೀಜ ಸ್ಥಳಾಂತರಕ್ಕೆ ಅನುಕೂಲವಾಗುವಂತೆ ಪಾಸ್ ವಿತರಿಸಲಾಗಿದೆ, ಆದರೆ ಲಾಕ್ಡೌನ್ನಿಂದಾಗಿ ಕಾರ್ಮಿಕರ ಸಮಸ್ಯೆ ತಲೆದೋರಿ ಗುತ್ತಿಗೆದಾರರು ನಮಗೆ ನಷ್ಟವುಂಟಾಗಿದೆ ಎಂದು ನಮ್ಮಲ್ಲಿ ಮನವಿ ಮಾಡಿಕೊಂಡಿದ್ದು, ಈ ಬಗ್ಗೆ ಬೋರ್ಡ್ ಮೀಟಿಂಗ್ನಲ್ಲಿ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.
-ಉದಯ್ ಕುಮಾರ ಜೋಗಿ, ಡಿ.ಎಫ್.ಒ.
ಕೋವಿಡ್-19 ದಿಂದಾಗಿ ಗೇರು ಗುತ್ತಿಗೆದಾರರು ಮಹಾ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಕೆ.ಸಿ.ಡಿ.ಸಿ. ಹರಾಜಿನಲ್ಲಿ ಪಡೆದ ತೋಟಗಳಲ್ಲಿ ಈ ವರ್ಷ ಗೇರು ಸಂಗ್ರಹಿಸಲು ಹೊರಜಿಲ್ಲೆಯಿಂದ ಜನ ಬಾರದಂತಾಗಿದೆ. ಟಿ. ಸೊಳ್ಳೆಯಿಂದ ಬೆಳೆ ಕಡಿಮೆ ಇದೆ. ಕಾಡು ಪ್ರಾಣಿ ಹಾವಳಿ ಜನರ ಕೊರತೆಯಿಂದ ಸಂಕಷ್ಟದಲ್ಲಿರುವ ಗುತ್ತಿಗೆದಾರರ ನೆರವಿಗೆ ಸರಕಾರ ಸ್ಪಂದಿಸಬೇಕಾಗಿದೆ.
-ರಾಜೀವ ಭಟ್ ಗೇರು ಗುತ್ತಿಗೆದಾರರು