ದುಡುಕದಂತೆ ಪ್ರಜ್ವಲ್ಗೆ ಗೌಡರ ಕಿವಿಮಾತು
Team Udayavani, May 25, 2019, 6:00 AM IST
ಬೆಂಗಳೂರು: ಹಾಸನ ಲೋಕಸಭೆ ಕ್ಷೇತ್ರದಿಂದ ಗೆಲುವು ಸಾಧಿಸಿರುವ ಪ್ರಜ್ವಲ್ ರೇವಣ್ಣ ಶುಕ್ರವಾರ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ಭೇಟಿ ಮಾಡಿದ್ದರು. ಭವಾನಿ ರೇವಣ್ಣ ಅವರ ಜತೆ ಆಗಮಿಸಿದ ಪ್ರಜ್ವಲ್, ಲೋಕಸಭೆ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ ಎಂದು ಹೇಳಿದರು. ಆದರೆ, ಇದಕ್ಕೆ ಒಪ್ಪದ ದೇವೇಗೌಡರು, ದುಡುಕಬೇಡ, ತಾಳ್ಮೆ ಇರಲಿ ಎಂದು ಕಿವಿಮಾತು ಹೇಳಿದರು ಎನ್ನಲಾಗಿದೆ.
ಗೌಡರ ಭೇಟಿ ನಂತರ ಸುದ್ದಿಗಾರರ ಜತೆ ಮಾತನಾಡಿದ ಪ್ರಜ್ವಲ್ ರೇವಣ್ಣ, ‘ದೇವೇ ಗೌಡರ ಸೋಲು ನನಗೆ ಬೇಸರ ತಂದಿದೆ. ಹೀಗಾಗಿ, ಅವರಿಗಾಗಿ ಹಾಸನ ಕ್ಷೇತ್ರದ ಲೋಕಸಭೆ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ. ನನ್ನ ತೀರ್ಮಾನ ವನ್ನೂ ದೇವೇಗೌಡರಿಗೆ ತಿಳಿಸಿದ್ದೇನೆ’ ಎಂದು ಹೇಳಿದರು.
‘ರಾಜ್ಯದ ಪರ ಹೋರಾಟ ಮಾಡಲು ದೇವೇಗೌಡರ ಅಗತ್ಯವಿದೆ. ಅವರು ಸಂಸತ್ತಿನಲ್ಲಿರಬೇಕು. ಹೀಗಾಗಿ, ರಾಜೀನಾಮೆ ನಿರ್ಧಾರ ಮಾಡಿದ್ದೇನೆ. ಜನರ ತೆರಿಗೆ ದುಡ್ಡು ವ್ಯರ್ಥ ಮಾಡುವ ಉದ್ದೇಶವಿಲ್ಲ. ನನ್ನ ತೀರ್ಮಾ ನದ ಬಗ್ಗೆ ಲೇವಡಿ ಮಾಡುವವರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಇದು ಡ್ರಾಮಾ ಅಲ್ಲ’ ಎಂದು ತಿಳಿಸಿದರು. ದೇವೇಗೌಡರ ಭೇಟಿ ಸಂದರ್ಭದಲ್ಲಿ ಭವಾನಿ ಅವರು ತುಮಕೂರಿನ ಸೋಲು ನೆನೆಸಿಕೊಂಡು ಕಣ್ಣೀರು ಹಾಕಿದರು ಎಂದು ಹೇಳಲಾಗಿದೆ. ಆದರೆ, ದೇವೇಗೌಡರು ಸಮಾಧಾನಪಡಿಸಿದರು ಎನ್ನಲಾಗಿದೆ.