ಸಿಡಿ ಲೇಡಿಯ ಹೆಬಿಯಸ್ ಕಾರ್ಪಸ್ ಅರ್ಜಿ ಹೈಕೋರ್ಟ್ ನಲ್ಲಿ ವಿಚಾರಣೆ
Team Udayavani, May 31, 2021, 6:43 PM IST
ಧಾರವಾಡ : ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರೊಂದಿಗೆ ವಿಡಿಯೋದಲ್ಲಿ ಇದ್ದಾಳೆ ಎನ್ನಲಾದ ಸಂತ್ರಸ್ತ ಮಹಿಳೆ ಹೆಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ವೇಳೆ ಧಾರವಾಡ ಹೈಕೋರ್ಟಿನ ವಿಭಾಗೀಯ ಪೀಠದ ಎದುರು ವೀಡಿಯೋ ಕಾನ್ಫರನ್ಸ್ ಮೂಲಕ ಹಾಜರಾಗಿದ್ದಾಳೆ.
ತಮ್ಮ ಮಗಳು ಕಾಣೆಯಾಗಿದ್ದು, ಆಕೆಯನ್ನು ಹುಡುಕಿಕೊಡುವಂತೆ ಸಂತ್ರಸ್ತ ಮಹಿಳೆಯ ತಂದೆ ಪ್ರಕಾಶ ಕಂಚೇರಿ ಎಂಬುವರು ಬೆಳಗಾವಿಯ ಎಪಿಎಂಸಿ ಠಾಣೆಯಲ್ಲಿ ದೂರು ನೀಡಿದ್ದರು. ದೂರು ನೀಡಿ ಹಲವು ದಿನಗಳು ಕಳೆದರೂ ತಮ್ಮ ಮಗಳನ್ನು ಪೊಲೀಸರು ಪತ್ತೆ ಮಾಡಿಲ್ಲ. ಹೀಗಾಗಿ ನನ್ನ ಮಗಳನ್ನು ಹುಡುಕಿ, ನ್ಯಾಯಾಲಯಕ್ಕೆ ಹಾಜರು ಪಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸುವಂತೆ ಪ್ರಕಾಶ ಕಂಚೇರಿ ಧಾರವಾಡದ ಹೈಕೋರ್ಟ್ ನಲ್ಲಿ ಮೇ ೨೭ರಂದು ಹೆಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.
ಅದರಂತೆ ಸೋಮವಾರ ಹೈಕೋರ್ಟಿನ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಸಂತ್ರಸ್ತ ಮಹಿಳೆಯನ್ನು ಬೆಂಗಳೂರಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲಾಯಿತು. ಈ ವೇಳೆ ಸಂತ್ರಸ್ತ ಮಹಿಳೆ, ನಾನು ಯಾವುದೇ ಬಂಧನದಲ್ಲಿ ಇಲ್ಲ. ಪೊಲೀಸರಿಂದಲೂ ನನಗೆ ಯಾವುದೇ ತೊಂದರೆಯಾಗಿಲ್ಲ. ಪ್ರಕರಣದ ತನಿಖೆ ಪೂರ್ಣಗೊಂಡ ನಂತರ ನನ್ನ ತಂದೆ- ತಾಯಿಯನ್ನು ಭೇಟಿಯಾಗುತ್ತೇನೆ ಎಂದು ಕೋರ್ಟ್ ಮುಂದೆ ಸ್ವಯಂ ಪ್ರೇರಿತ ಹೇಳಿಕೆ ನೀಡಿದಳು. ಅದನ್ನು ದಾಖಲಿಸಿಕೊಂಡ ನ್ಯಾಯಪೀಠ, ಹೆಬಿಯಸ್ ಕಾರ್ಪಸ್ ಅರ್ಜಿಯನ್ನು ಇತ್ಯರ್ಥಪಡಿಸಿದೆ.