ಹಾಸನ : ಯುವಕನ ಬೆತ್ತಲೆ ಥಳಿತ, ಎಫ್ಐಆರ್ ದಾಖಲು : ಓರ್ವ ಆರೋಪಿಯ ಬಂಧನ
Team Udayavani, Jan 13, 2022, 7:30 PM IST
ಹಾಸನ: ನಗರದ ಮಹಾರಾಜ ಉದ್ಯಾನವನದಲ್ಲಿ ಯುವತಿಯೊಬ್ಬಳನ್ನು ಚುಡಾಯಿಸಿದನೆಂಬ ಕಾರಣಕ್ಕೆ ವಿಜಯಪುರ ಜಿಲ್ಲೆಯ ಯುವಕನನ್ನು ವಿವಸ್ತ್ರಗೊಳಿಸಿದ ಪ್ರಕರಣಕ್ಕೆ ಬಂಧಿಸಿದಂತೆ ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಶ್ರೀನಿವಾಸಗೌಡ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿ, ಯುವಕನನ್ನು ಬೆತ್ತಲೆ ಮಾಡಿ ಥಳಿಸಿದ ಗುಂಪಿನಲ್ಲಿದ್ದವರ ಬಗ್ಗೆ ವಿವರ ಸಂಗ್ರಹಿಸಲಾಗುತ್ತಿದೆ. ಈ ಸಂಬಂಧ ವಿಡಿಯೋ ದೃಶ್ಯಾವಳಿಯನ್ನು ಪರಿಶೀಲಿಸಿ ಯುವಕನ ಥಳಿಸಿದವರನ್ನು ಬಂಧಿಸಲಾಗುವುದು ಎಂದರು. ಥಳಿತಕ್ಕೊಳಗಾದ ಯುವಕ ವಿಜಯಪುರ ಜಿಲ್ಲೆಯ ಮೇಘರಾಜು ಎಂದು ಗುರ್ತಿಸಲಾಗಿದೆ. ಆತ ಒಂದೆರಡು ವರ್ಷಗಳಿಂದ ಹಾಸನದಲ್ಲಿಯೇ ಮನೆ ಮಾಡಿಕೊಂಡು ಗುತ್ತಿಗೆದಾರರೊಬ್ಬರ ಬಳಿ ಗಾರೆ ಕೆಲಸ ಮಾಡಿಕೊಂಡಿದ್ದ. ಆತ ನೀಡಿರುವ ಹೇಳಿಕೆ ಆಧರಿಸಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ಆತ ಯಾವುದೇ
ಯುವತಿಯನ್ನು ಚುಡಾಯಿಸಿಲ್ಲ ಎಂದಿದ್ದಾನೆ. ಯಾವ ಯುವತಿಯೂ ಮೇಘರಾಜನ ವಿರುದ್ಧ ದೂರು ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.
ಜಿಲ್ಲೆಯಲ್ಲಿ ನೈತಿಕ ಪೊಲೀಸ್ ಗಿರಿಗೆ ಅವಕಾಶ ಇಲ್ಲ: ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗುವಂತಹ ನೈತಿಕ ಪೊಲೀಸ್ ಗಿರಿ ನಡೆಸಲು ಮುಂದಾಗುವವರು ಕಾನೂನು ಕ್ರಮ
ಎದುರಿಸಲೇಬೇಕಾಗಿದೆ. ಜಿಲ್ಲೆಯಲ್ಲಿ ಎಲ್ಲಿಯಾದರೂ ಅಪರಾಧ ಪ್ರಕರಣ ಕಂಡುಬಂದಲ್ಲಿ ತಕ್ಷಣ ಸಾರ್ವಜನಿಕರು ತುರ್ತು ಸೇವೆಯ 112 ನಂಬರಿಗೆ ಕೆರೆ ಮಾಡುವ ಮೂಲಕ ಮಾಹಿತಿ ಕೊಡಬೇಕು. ಕಾನೂನನ್ನು ಕೈಗೆತ್ತಿಕೊಳ್ಳುವ ವ್ಯಕ್ತಿಗಳ ವಿರುದ್ಧ ಕ್ರಮವಹಿಸಲಾಗುವುದು ಎಂದರು. ನಗರದ ವರ್ತುಲ ರಸ್ತೆ ಉದ್ದೂರು ರಸ್ತೆ ಕಾಮಗಾರಿ ಗಲಾಟೆ ಸಂಬಂಧಿಸಿದಂತೆ ದೂರನ್ನು ದಾಖಲು ಮಾಡಿಕೊಳ್ಳಲಾಗಿದ್ದು, ಕಾನೂನಿನಡಿ ಯಾವ ರೀತಿಯ ಕೇಸು ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗಿದ್ದು, ತನಿಖೆ ನಡೆಯುತ್ತಿದೆ ಎಂದರು