ಕಾರ್ಯನಿರತ ಪತ್ರಕರ್ತರಿಗೆ ಉಚಿತ ಚಿಕಿತ್ಸೆಗೆ ಹೆಲ್ತ್ ಕಾರ್ಡ್: ಸಿ.ಎಂ
Team Udayavani, Sep 19, 2019, 9:50 PM IST
ಬೆಂಗಳೂರು: ಕಾರ್ಯ ನಿರತ ಪತ್ರಕರ್ತರಿಗೆ ಉಚಿತ ಚಿಕಿತ್ಸೆ ಪಡೆಯಲು ತಕ್ಷಣವೇ ಹೆಲ್ತ್ ಕಾರ್ಡ್ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸೂಚಿಸಿದ್ದಾರೆ.
ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿ ಗಳು ಸಂಘದ ಅಹವಾಲುಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದರು.
ಅಕಾಲಿಕ ಮರಣಕ್ಕೆ ತುತ್ತಾಗುವ ಕಾರ್ಯನಿರತ ಪತ್ರಕರ್ತರ ಕುಟುಂಬಕ್ಕೆ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ತಿಳಿಸಿದರು
ಜಿಲ್ಲಾಮಟ್ಟದಲ್ಲೆ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಒದಗಿಸುವಂತೆ ಸ್ಥಳದಲ್ಲೇ ಅಧಿಕಾರಿಗಳಿಗೆ ಸೂಚಿಸಿದರು.ಪತ್ರಕರ್ತರ ಪಿಂಚಣಿ ಪಡೆಯಲು ಅಡ್ಡಿಯಾಗಿರುವ ನಿಯಮಾವಳಿಗಳನ್ನು ಸರಳೀಕರಿಸಲು ಇಲಾಖಾಧಿಕಾರಿಗಳಿಗೆ ಮುಖ್ಯಮಂತ್ರಿ ಗಳು ಸೂಚಿಸಿದರು.
ಆರ್ಥಿಕವಾಗಿ ಹಿಂದುಳಿದ ಪತ್ರಕರ್ತರಿಗೆ ಈಗಿರುವ ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಡಲಾಗುವುದು. ಅಕಾಲಿಕವಾಗಿ ಮರಣ ಹೊಂದುವ ಪತ್ರಕರ್ತರಿಗೆ ಪರಿಹಾರ ನೀಡುವುದಾಗಿ ತಿಳಿಸಿದರು.
ಎಲ್ಲಾ ವರ್ಗದ ಆರ್ಥಿಕವಾಗಿ ಹಿಂದುಳಿದ ಪತ್ರಕರ್ತರಿಗೆ ” ಮೀಡಿಯಾ ಕಿಟ್” ನೀಡಲು ಆದೇಶಿಸಿದ ಮುಖ್ಯಮಂತ್ರಿಗಳು ಪತ್ರಕರ್ತರ ಹಿತ ಕಾಯಲು ಬದ್ದರಿರುವುದಾಗಿ ಭರವಸೆ ನೀಡಿದರು.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪತ್ರಿಕಾ ಭವನಗಳನ್ನು ಪತ್ರಕರ್ತರ ಸಂಘದ ನಿರ್ವಹಣೆಗೆ ವಹಿಸುವ ಬಗ್ಗೆ ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಸಿ ಎಂ ಸೂಚಿಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ಅವರು ಅಹವಾಲುಗಳನ್ನು ಮುಖ್ಯಮಂತ್ರಿ ಗಳಿಗೆ ವಿವರಿಸಿದರು.
ಇದೇ ಸಂದರ್ಭದಲ್ಲಿ ಸಂಘದ ವತಿಯಿಂದ ನೆರೆಸಂತ್ರಸ್ತರ ನಿಧಿಗೆ 1 ಲಕ್ಷ ರೂ ಗಳ ಚೆಕ್ ನ್ನುಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು.
ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ರಾಷ್ಟ್ರಿಯ ಅಧ್ಯಕ್ಷರಾದ ಬಿ.ವಿ ಮಲ್ಲಿಕಾರ್ಜುನ ಯ್ಯ, ರಾಜ್ಯ ಸಂಘದ ಪದಾಧಿಕಾರಿಗಳಾದ ಲೋಕೇಶ್, ಸಂಜೀವರಾವ ಕುಲಕರ್ಣಿ, ಡಾ.ಉಮೇಶ್ವರ, ಮಲ್ಲಿಕಾರ್ಜುನ ಬಂಗಲೆ ವಿವಿಧ ಜಿಲ್ಲಾ ಸಂಘಗಳ ಅಧ್ಯಕ್ಷರು ಹಾಜರಿದ್ದರು.