ಲಾಕ್ಡೌನ್ ಸಂಕಷ್ಟದಲ್ಲಿರುವವರಿಗೆ ನೆರವಿನ ಹಸ್ತ ಚಾಚಿ
Team Udayavani, May 10, 2021, 6:40 AM IST
ರಾಜ್ಯದಲ್ಲಿ ಲಾಕ್ಡೌನ್ ಎಂದು ಹೇಳದಿದ್ದರೂ ಲಾಕ್ಡೌನ್ ಮಾದರಿಯ ಕರ್ಫ್ಯೂ ಜಾರಿಯಾಗಿದೆ. ಕೆಲವು ವಲಯ ಹೊರತುಪಡಿಸಿ ಗಾರ್ಮೆಂಟ್ಸ್ ಸೇರಿದಂತೆ ಆಟೋ, ಟ್ಯಾಕ್ಸಿ, ಕಟ್ಟಡ ನಿರ್ಮಾಣ ಎಲ್ಲ ಕಾಮಗಾರಿಗಳು ಸ್ಥಗಿತಗೊಂಡಿವೆ. ಇದರಿಂದ ಲಕ್ಷಾಂತರ ಶ್ರಮಿಕ ವರ್ಗದ ಉದ್ಯೋಗ ಬಂದ್ ಆಗಿದೆ.
ನೆರೆ ರಾಜ್ಯಗಳಾದ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ದೇಶದ ರಾಜಧಾನಿ ದಿಲ್ಲಿ ಸೇರಿ ಬಹುತೇಕ ರಾಜ್ಯಗಳಲ್ಲಿ ಅಧಿಕೃತವಾಗಿ ಲಾಕ್ಡೌನ್ ಘೋಷಿಸಿ ಬಡವರ್ಗಕ್ಕೆ ಆಹಾರ ಧಾನ್ಯಗಳ ಕಿಟ್ ಸೇರಿದಂತೆ ಆರ್ಥಿಕ ನೆರವು ಸಹ ಘೋಷಿಸಲಾಗಿದೆ. ಇಂತಹ ಸಂಕಷ್ಟ ಸಂದರ್ಭದಲ್ಲಿ ಬಡವರ್ಗದ ನೆರವಿಗೆ ನಿಲ್ಲಬೇಕಾಗಿರುವುದು ಯಾವುದೇ ಒಂದು ರಾಜ್ಯ ಸರಕಾರದ ಕರ್ತವ್ಯ ಸಹ. ಆರ್ಥಿಕ ಪರಿಸ್ಥಿತಿ ಏನೇ ಇದ್ದರೂ ದೊಡ್ಡ ಪ್ರಮಾ ಣದ ಯೋಜನೆ ಒಂದು ಅಥವಾ ಎರಡು ವರ್ಷದ ಮಟ್ಟಿಗೆ ಸ್ಥಗಿತಗೊಳಿಸಿ ತತ್ಕ್ಷಣದ ಆದ್ಯತೆಯಾಗಿ ಆರೋಗ್ಯ ಸೇವೆ ಹಾಗೂ ಬಡಜನರಿಗೆ ನೆರವಾಗುವ ನಿಟ್ಟಿನಲ್ಲಿ ಸರಕಾರ ಮುಂದಡಿ ಇಡಬೇಕಾಗಿದೆ.
ಲಾಕ್ಡೌನ್ ಘೋಷಿಸಿದರೆ ನೆರವಿನ ಪ್ಯಾಕೇಜ್ ಘೋಷಿಸಬೇಕು ಎಂಬ ಕಾರಣಕ್ಕೆ ಕರ್ಫ್ಯೂ ಹೆಸರು ಬಳಕೆ ಮಾಡಲಾಗುತ್ತಿದೆ ಎಂದು ವಿಪಕ್ಷಗಳು ಟೀಕಿಸುತ್ತಿದ್ದು, ಬಡವರ್ಗಕ್ಕೆ ಪ್ಯಾಕೇಜ್ ಘೋಷಿಸಲು ಸರಕಾರದ ಮೇಲೆ ನಿರಂತರವಾಗಿ ಒತ್ತಡ ಹೇರುತ್ತಲೇ ಇವೆ.
ಆದರೆ ಸರಕಾರ ಮೌನವಹಿಸಿದೆ. ಪ್ಯಾಕೇಜ್ ಘೋಷಣೆ ಸಂಬಂಧ ಆರ್ಥಿಕ ಇಲಾಖೆ ಅಧಿಕಾರಿಗಳ ಜತೆ ಚರ್ಚೆ ನಡೆಸಿದೆಯಾದರೂ ಯಾವುದೇ ತೀರ್ಮಾನಕ್ಕೆ ಬಂದಿಲ್ಲ. ಇಂತಹ ಸಂದರ್ಭ ಸರಕಾರದ ಮೌನ ಸರಿಯಲ್ಲ. ಅಗತ್ಯ ಇರುವಾಗ ಬಿಟ್ಟು ಅನಂತರ ಕೊಟ್ಟರೂ ಪ್ರಯೋಜನವಿಲ್ಲ. ರೈತರು, ಕಾರ್ಮಿಕರು, ಬೀದಿ ವ್ಯಾಪಾರಿಗಳು, ದಿನದ ದುಡಿಮೆ ನಂಬಿ ಬದುಕುವ ಕುಶಲ ಕರ್ಮಿಗಳು, ಆಟೋ ಮತ್ತು ಟ್ಯಾಕ್ಸಿ ಚಾಲಕರು, ಗಾರ್ಮೆಂಟ್ಸ್ ನೌಕರರು ಬಹುದೊಡ್ಡ ವರ್ಗವಿದೆ. ಲಕ್ಷಾಂತರ ಕುಟುಂಬಗಳು ಇದರ ಮೇಲೆ ಆಧಾರವಾಗಿವೆ.
ಅದರಲ್ಲೂ ರಾಜ್ಯದಲ್ಲಿ ಆಯಾ ದಿನದಗಳಿಕೆಯ ಮೇರೆಗೆ ಲಕ್ಷಾಂತರ ಮಂದಿ ಬದುಕುತ್ತಿದ್ದಾರೆ. ಈ ವಿಧಿಸಲಾಗಿರುವ ನಿರ್ಬಂಧ ಅವರನ್ನು ಇನ್ನಿಲ್ಲದ ಕಷ್ಟಕ್ಕೆ ದೂಡಿದೆ. ಅದರಲ್ಲೂ ಆಟೋ ಡ್ರೈವರ್ ಗಳು, ಟ್ಯಾಕ್ಸಿ ಚಾಲಕರು, ಬೀದಿ ಬದಿ ವ್ಯಾಪಾರಿಗಳಂತೂ ಭಾರೀ ಕಷ್ಟ ಅನುಭವಿಸುತ್ತಿದ್ದಾರೆ. ಕಳೆದ ಬಾರಿ ಘೋಷಿಸಿದ ರೀತಿಯಲ್ಲಿ ಈ ಬಾರಿಯೂ ಈ ಸಮುದಾಯಗಳಿಗೆ ತಿಂಗಳಿಗೆ ಇಷ್ಟು ಅಂತ ನೆರವು ಘೋಷಿಸಲೇಬೇಕು.
ಕಳೆದ ವರ್ಷದ ಲಾಕ್ಡೌನ್ ಸಂದರ್ಭದಲ್ಲಿ ಪಡಿತರ ಹೆಚ್ಚಳ, ಆರ್ಥಿಕ ನೆರವಿನ ಪ್ಯಾಕೇಜ್ನಿಂದ ಸ್ವಲ್ಪ ಮಟ್ಟಿಗೆ ಬಡವರ್ಗ ನಿರಾಳವಾಗಿತ್ತು. ಈ ಬಾರಿ ಪ್ಯಾಕೇಜ್ ಬಗ್ಗೆ ಇನ್ನೂ ತೀರ್ಮಾನ ಕೈಗೊಂಡಿಲ್ಲ. ಬಹುತೇಕ ಒಂದು ತಿಂಗಳು ವಾರಾಂತ್ಯ ಕರ್ಫ್ಯೂ, ಸಂಪೂರ್ಣ ಕರ್ಫ್ಯೂ, ಲಾಕ್ಡೌನ್ ಮಾದರಿ ಕರ್ಫ್ಯೂ ಜಾರಿಯಾದಂತಾಗುತ್ತದೆ. ಒಂದು ತಿಂಗಳು ದುಡಿಮೆ ಇಲ್ಲದೆ ಶ್ರಮಿಕವರ್ಗ, ಬಡವರ್ಗ ಜೀವನ ನಡೆಸುವುದು ಕಷ್ಟ. ಮನೆ ಬಾಡಿಗೆ, ದೈನಂದಿನ ಮನೆಯ ವೆಚ್ಚಕ್ಕೆ ದಾರಿ ಕಾಣದಂತಾಗಿದೆ. ಹೀಗಾಗಿ ರಾಜ್ಯ ಸರಕಾರ ಬಡವರ್ಗ ಹಾಗೂ ಶ್ರಮಿಕ ವರ್ಗದ ಹಿತಾಸಕ್ತಿ ಗಮನ ದಲ್ಲಿಟ್ಟುಕೊಂಡು ಆ ಕುಟುಂಬಗಳಿಗೆ ನೆರವಾಗುವ ನಿಟ್ಟಿನಲ್ಲಿ ಪ್ರಾಮಾಣಿಕ ಹಾಗೂ ಮುಕ್ತ ಮನಸ್ಸಿನಿಂದ ಯೋಚಿಸಬೇಕಾಗಿದೆ. ಆದಷ್ಟು ಶೀಘ್ರ, ಅಂದರೆ ಇಂದು ನಾಳೆಯೊಳಗೆ ತೀರ್ಮಾನ ತೆಗೆದುಕೊಂಡಷ್ಟು ಈ ದುಡಿಯುವ ವರ್ಗಕ್ಕೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ
Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ
ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil
ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?