ಕೋಲಾರ : ಖಾಸಗಿ ಕಂಪನಿ ಎಚ್ಆರ್ ಈಗ ಗ್ರಾಮ ಪಂಚಾಯತ್ ಸದಸ್ಯ!
Team Udayavani, Dec 31, 2020, 11:53 AM IST
ಕೋಲಾರ : ಖಾಸಗಿ ಕಂಪನಿಯಲ್ಲಿ ತಿಂಗಳಿಗೆ ಲಕ್ಷ ರೂ. ಕೈತುಂಬ ಸಂಬಳ ಪಡೆದುಕೊಂಡು ನೆಮ್ಮದಿಯಾಗಿದ್ದ ಎ. ಮಂಜುನಾಥ್ ಈಗ ಗ್ರಾಮ ಪಂಚಾಯತ್ ಸದಸ್ಯ. ಕೋಲಾರಕ್ಕೆ ಹೊಂದಿಕೊಂಡಂತಿರುವ ಕೊಂಡರಾಜನಹಳ್ಳಿ ಗ್ರಾಪಂ ಎರಡನೇ ಬ್ಲಾಕ್ ಅಭ್ಯರ್ಥಿಯಾಗಿದ್ದ ಎ.ಮಂಜುನಾಥ್ ಎಂಎಸ್ಡಬ್ಲೂ ಹಾಗೂ ಎಲ್ಎಲ್ಬಿ ಪದವೀಧರ.
ಆನೇಕಲ್ನ ಮೈಕ್ರೋಪ್ಲಾಸ್ಟಿಕ್ಸ್ ಕಂಪನಿಯಲ್ಲಿ ಹದಿನೈದು ವರ್ಷಗಳಿಂದಲೂ ಎಚ್ಆರ್ ಆಗಿ ಉದ್ಯೋಗಿಯಾಗಿದ್ದರು.
ಕೇವಲ ನಾಲ್ಕು ಸಾವಿರ ಸಂಬಳಕ್ಕೆ ಕೆಲಸಕ್ಕೆ ಸೇರಿದ್ದವರು ತಮ್ಮ ಸ್ವಸಾಮರ್ಥ್ಯದಿಂದಲೇ ಲಕ್ಷ ರೂ.ಸಂಬಳದ ಎಚ್ಆರ್
ವರೆಗೂ ಏರಿದ್ದರು.
ಕೆಲಸಕ್ಕೆ ರಾಜೀನಾಮೆ: ಎಂಎಸ್ಡಬ್ಲೂ ಪದವಿ ಪಡೆದುಕೊಂಡಿದ್ದ ಇವರಿಗೆ ಜನರ ಸೇವೆ ಮಾಡುವ ಬಯಕೆ. ಇದಕ್ಕೆ
ವೇದಿಕೆಯಾಗಿದ್ದು ಗ್ರಾಮ ಪಂಚಾಯತ್ ಚುನಾವಣೆ. ಇದಕ್ಕಾಗಿ ಲಕ್ಷ ರೂ.ಸಂಬಳದ ಕೆಲಸಕ್ಕೆ ರಾಜೀನಾಮೆ ಕೊಟ್ಟು
ಬಂದಿದ್ದರು. ರಾಜೀನಾಮೆ ಕೊಡುವ ಸಂದರ್ಭದಲ್ಲಿ ಕಂಪನಿಯು ಇವರಿಗೆ ಮತ್ತಷ್ಟು ಸಂಬಳ ಹೆಚ್ಚಿಸುವುದಾಗಿಯೂ
ಹೇಳಿತ್ತು. ಆದರೆ, ಮಂಜುನಾಥ್ ಇದ್ಯಾವುದಕ್ಕೂ ಕಿವಿಗೊಡಲಿಲ್ಲ. ಕೊಂಡರಾಜನಹಳ್ಳಿ ಪಂಚಾಯ್ತಿ ಚುನಾವಣೆಯಲ್ಲಿ
ಸ್ಪರ್ಧಿಸಿದ್ದ ಇವರು 26 ಮತಗಳಿಂದ ತಮ್ಮ ಪ್ರತಿಸ್ಪರ್ಧಿಗಿಂತಲೂ ಹೆಚ್ಚಿನ ಮತಗಳಿಸಿ ವಿಜೇತರಾಗಿದ್ದಾರೆ.
ಇದನ್ನೂ ಓದಿ:ರೂಪಾಂತರ ಕೊರೊನಾ ಹಿನ್ನೆಲೆ : ನಾಪತ್ತೆ ಆಗಿದ್ದವರ ವಿಳಾಸ ಕೊನೆಗೂ ಪತ್ತೆ!
ಜನರ ಸೇವೆ ಮಾಡಲು ಜನಪ್ರತಿನಿಧಿಯಾಗಬೇಕು ಎಂಬುದು ಇವರ ಗುರಿ. ಇದನ್ನು ಗ್ರಾಪಂ ಚುನಾವಣೆಯಿಂದೇ ಆರಂಭಿಸಲು ನಿರ್ಧರಿಸಿದ್ದರು. ಸವಿತಾ ಸಮಾಜದ ಎ.ಮಂಜುನಾಥ್ ಚುನಾವಣೆಗೆ ನಿಂತಾಗ ಸಮಸ್ಯೆಗಳು ಎದುರಾಗಿದ್ದವು. ಕಾರ್ಪೋರೇಟ್ ವಲಯದಲ್ಲಿ ಜಾತಿ ಧರ್ಮ ಲೆಕ್ಕಿಸದೆ ಕೇವಲ ಸಾಮರ್ಥ್ಯದಿಂದಷ್ಟೇ ಉನ್ನತ ಸ್ಥಾನಕ್ಕೇರಿದ್ದ ಮಂಜುನಾಥ್ರಿಗೆ ಪಂಚಾಯ್ತಿ ಚುನಾವಣೆಗೆ ಇಳಿದ ತಕ್ಷಣವೇ ತಮ್ಮ ಸಾಮರ್ಥ್ಯಕ್ಕಿಂತಲೂ ಜಾತೀಯತೆ, ಹಣಕಾಸು ಮತ್ತು ಸಾಮಾಜಿಕ ಹಿನ್ನೆಲೆಯು ಹೆಚ್ಚಿನ
ಚರ್ಚೆಯಾಗಿದ್ದು ಬೇಸರ ತರಿಸಿತ್ತು. ಆದರೂ, ಪರಿಸ್ಥಿತಿಗೆ ಹೊಂದಿಕೊಂಡು, ವಿರೋಧಗಳನ್ನು ಲೆಕ್ಕಿಸದೆ ಪ್ರಚಾರ
ನಡೆಸಿದರು. ಪ್ರಯತ್ನ ಫಲಿಸಿದೆ.