ನಾನು ಸದಾ ಇಲ್ಲೇ ಇದ್ದೇನೆ ಗುರುಗಳೇ
Team Udayavani, Mar 2, 2021, 5:35 AM IST
ಕೆಲವು ಸರಳ ಸತ್ಯಗಳನ್ನು ತಿಳಿದು ಕೊಳ್ಳೋಣ: ಸಂಕೀರ್ಣ ಸಂಗತಿಗಳು ಸುಲಭವಾಗಿ ಅರ್ಥವಾಗುತ್ತವೆ. ಹಿಡಿತಕ್ಕೆ ಸಿಗದೆ ಜಾರಿ ಹೋಗುವುದು ಸರಳ ವಾದವುಗಳೇ. ಸರಳ – ಎಷ್ಟು ಸರಳ ಎಂದರೆ, ಮನಸ್ಸು ಅದರ ಮೇಲೆ ಕೆಲಸ ಮಾಡುವುದಕ್ಕಾಗುವುದಿಲ್ಲ. ಈ ಕಥೆ ಕೂಡ ಹಾಗೆಯೇ- ಅರ್ಥ ಮಾಡಿ ಕೊಳ್ಳಲು ಪ್ರಯತ್ನಿಸಬೇಡಿ; ಅನುಭವಿಸಿ.
ಗುರು ಜೋಶುವಾ ಒಂದು ದಿನ ಬೆಳಗ್ಗೆ ಎದ್ದು ಆಶ್ರಮಕ್ಕೆ ಬಂದರು. ಎದು ರಾದ ಒಬ್ಬನನ್ನು ಕುರಿತು, “ನಾನು ನಿನ್ನನ್ನು ಈ ಹಿಂದೆ ನೋಡಿದ್ದೇ ನೆಯೇ’ ಎಂದು ಕೇಳಿ ದರು. ಆತ “ಇಲ್ಲ ಗುರುಗಳೇ. ನಾನು ಇಲ್ಲಿಗೆ ಹೊಸಬ’ ಎಂದು ಉತ್ತರಿಸಿದ. “ಸರಿ, ಚಹಾ ಕುಡಿ ಯೋಣ ಬಾ’ ಎಂದರು ಜೋಶುವಾ.
ಅಷ್ಟರಲ್ಲಿ ಇನ್ನೊಬ್ಬ ಎದುರಾದ. ಮತ್ತದೇ ಪ್ರಶ್ನೆ, “ನಾನು ನಿನ್ನನ್ನು ಈ ಹಿಂದೆ ನೋಡಿದ್ದೇನೆಯೇ?’ ಆತ, “ಹೌದು ಗುರುಗಳೇ. ನಾನು ಹಲವು ವರ್ಷಗಳಿಂದ ಇಲ್ಲೇ ಇದ್ದೇನೆ’ ಎಂದ. “ಸರಿ ಹಾಗಾದರೆ, ಚಹಾ ಕುಡಿ ಯೋಣ ಬಾ’ ಎಂದರು ಜೋಶುವಾ.
ಈ ಮಾತುಕತೆ ಕೇಳಿದ ಆಶ್ರಮದ ಒಬ್ಬ ಸಿಬಂದಿಗೆ ವಿಚಿತ್ರ ಎನಿಸಿತು. ಅಪರಿ ಚಿತನ ಜತೆಗೂ ಪರಿಚಿತನ ಜತೆಗೂ ಜೋಶುವಾ ಒಂದೇ ರೀತಿ ಮಾತಾಡಿದ ರಲ್ಲ! ಅಪರಿಚಿತನ ಜತೆಗೆ “ನೀನು ಹೊಸಬ, ಸ್ವಾಗತ. ಚಹಾ ಕುಡಿಯೋಣ’ ಎಂದಿದ್ದರೆ ಸರಿಹೋಗುತ್ತಿತ್ತು; ಇನ್ನೊಬ್ಬ ದಿನವೂ ಸಿಗುವವನಾದ್ದರಿಂದ ಅವನನ್ನು ಚಹಾಕ್ಕೆ ಆಹ್ವಾನಿಸದೆ ಇದ್ದರಾಗುತ್ತಿತ್ತು ಎಂಬುದು ಸಿಬಂದಿಯ ಆಲೋಚನೆ.
ಪರಿಚಯ, ಜತೆಗಿರುವುದು, ಸದರ, ಸಲುಗೆಗಳು ಔದಾಸೀನ್ಯ, ಅಸಡ್ಡೆಗಳನ್ನು ಉಂಟುಮಾಡುತ್ತವೆ. ಸುಪರಿಚಿತವಾದು ದನ್ನು ನಾವು ಗಣನೆಗೆ ತೆಗೆದುಕೊಳ್ಳುವು ದಿಲ್ಲ. ನಾವು ನಮ್ಮ ಪತ್ನಿ ಅಥವಾ ಪತಿಯ ಮುಖವನ್ನು ಸರಿಯಾಗಿ ನೋಡದೆ ವರ್ಷಗಳೇ ಕಳೆದಿರಬಹುದು! ಅವರು ಎಷ್ಟೋ ವರ್ಷಗಳಿಂದ ನಮ್ಮ ಜತೆಗೇ ಇದ್ದಾರಲ್ಲ. ಸುಮ್ಮನೆ ಕಣ್ಣು ಮುಚ್ಚಿ ಅವರ ಮುಖವನ್ನು ಚಿತ್ರಿಸಲು ಪ್ರಯತ್ನಿಸಿ. ಪ್ರಾಯಃ ಮದುವೆಯಾದ ಹೊಸತರ ಮುಖ ಕಣ್ಣೆದುರು ಬರಬಹುದು. ಆದರೆ ಅವರ ಬದುಕು, ದೇಹ ನಿಂತ ನೀರಲ್ಲ. ಈ ಇಷ್ಟು ವರ್ಷಗಳಲ್ಲಿ ಎಷ್ಟೋ ಬದಲಾವಣೆಗಳು ಆಗಿರುತ್ತವೆ. ಅದ್ಯಾ ವುದೂ ನಮ್ಮ ಲಕ್ಷ್ಯಕ್ಕೆ ಬಂದಿರುವುದಿಲ್ಲ.
ಕಡಲ ಕಿನಾರೆಯಲ್ಲಿ ಇಬ್ಬರು ಶ್ರೀಮಂತರು ಮಲಗಿಕೊಂಡು ಸೂರ್ಯ ಸ್ನಾನ ಮಾಡುತ್ತಿದ್ದರು. ಅವರಲ್ಲೊಬ್ಬ ಹೇಳಿದ, “ಆ ಮಾಧುರಿ ದೀಕ್ಷಿತ್ ಅಂದರೆ ಜನ ಯಾಕೆ ಅಷ್ಟು ಹುಚ್ಚರಾಗುತ್ತಾರೋ ಗೊತ್ತಿಲ್ಲ. ಏನಿದೆ ಆಕೆಯಲ್ಲಿ? ಕಣ್ಣು, ಮೂಗು, ತುಟಿ,
ಸುಂದರ ನಗು, ದೇಹದ ಉಬ್ಬುತಗ್ಗು- ಇದನ್ನೆಲ್ಲ ತೆಗೆದು ಬಿಟ್ಟರೆ ಉಳಿದದ್ದು ಏನು?’
ಇನ್ನೊಬ್ಬ ಶ್ರೀಮಂತ ದುಃಖದ ಸ್ವರದಲ್ಲಿ ಹೇಳಿದ, “ನನ್ನ ಹೆಂಡತಿ, ಉಳಿದದ್ದು ನನ್ನ ಹೆಂಡತಿ…’
ನಮ್ಮ ನಮ್ಮ ಪತಿಯಾ ಪತ್ನಿಯ ವಿಚಾರದ ಲ್ಲಿಯೂ ಇದು ನಿಜ. ಹಲವು ವರ್ಷಗಳ ಜತೆ ವಾಸ, ಸಲುಗೆ, ಸದರ ಗಳಿಂದ ಈಗ ಉಳಿದಿ ರುವುದು ಏನೂ ಇಲ್ಲ! ಆದರೆ ಇದು ಸದಾ ಹೀಗೆ ಇರಲಿಲ್ಲ. ನಾವು ಆತ ಅಥವಾ ಆಕೆಯನ್ನು ಒಂದು ಕಾಲದಲ್ಲಿ ಬಹಳ ಪ್ರೀತಿಸಿದ್ದೆವು. ಅವರ ಜತೆಗೆ ಕಳೆಯುವ ಒಂದೊಂದು ಕ್ಷಣಕ್ಕೂ ಕಾತರಿಸಿದ್ದೆವು. ಆದರೆ ಆ ಕ್ಷಣ ಈಗಿಲ್ಲ.
ಈ ನಗಣ್ಯ, ನಿರ್ಲಕ್ಷ್ಯಗಳನ್ನು ಕಳೆಯ ಲೆಂದೇ ಜೋಶುವಾ ಇಬ್ಬರಿಗೂ ಒಂದೇ ರೀತಿ ಉತ್ತರಿಸಿದ್ದು.
ಈಗ ಮತ್ತೆ ಮೂಲ ಕಥೆಗೆ ಮರಳ್ಳೋಣ. ಸಿಬಂದಿ ತನ್ನ ಅಚ್ಚರಿ ಯನ್ನು ಜೋಶುವಾ ಬಳಿ ಹೇಳಿಕೊಂಡ. ತತ್ಕ್ಷಣ ಜೋಶುವಾ ದೊಡ್ಡ ಸ್ವರದಲ್ಲಿ ಆತನ ಹೆಸರು ಹಿಡಿದು ಕೂಗಿದರು, “ನೀನು ಇಲ್ಲಿದ್ದೀಯಾ?’
“ಹೌದು ಗುರುಗಳೇ ಇಲ್ಲೇ ಇದ್ದೇನೆ’ ಎಂದ ಸಿಬಂದಿ. “ಸರಿ, ಚಹಾ ಕುಡಿ ಯೋಣ ಬಾ’ ಎಂದರು ಜೋಶುವಾ.
ಹೆಸರು ಹಿಡಿದು ಕರೆಯುವುದು ಎಂದರೆ ಆಯಾ ವ್ಯಕ್ತಿಯ ಅರಿವನ್ನು ಎಚ್ಚರಿಸುವುದು. ಅರಿವು ಯಾವಾಗಲೂ ಹೊಸತು. ದೇಹ ಪರಿಚಿತವಾಗುತ್ತದೆ, ಆದರೆ ಆತ್ಮವಲ್ಲ. ಸಿಬಂದಿಯ ಹೆಸರು ಹಿಡಿದು ಕರೆದಾಗ ಪ್ರತಿಕ್ರಿಯಿಸಿದ್ದು ಅವನ ಅರಿವು; ಮನಸ್ಸಲ್ಲ.
ಜೋಶುವಾಗೆ ಎಲ್ಲವೂ ಹೊಸತು, ವಿಸ್ಮಯ. ಪ್ರತೀ ಕ್ಷಣವೂ ನಿತ್ಯನೂತನ. ಹಾಗಾಗಿ ಅಸಡ್ಡೆ ಎಂಬುದು ಇಲ್ಲ. ನಾವು ಕೂಡ ನಮ್ಮ ಕಿವಿ, ಕಣ್ಣು, ಮೂಗು ಇತ್ಯಾದಿ ಮುಚ್ಚಿಕೊಂಡು ಬದುಕುವು ದನ್ನು ಬಿಟ್ಟು ಪ್ರತೀ ಕ್ಷಣವನ್ನೂ ಪ್ರತಿ ಯೊಂದನ್ನೂ ಹೊಸತು ಎಂಬಂತೆ ಬೆರಗಿನಿಂದ ಕಾಣಲು ಕಲಿಯೋಣ.
(ಸಾರ ಸಂಗ್ರಹ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ
CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ
Karkala: ಕಾಂಗ್ರೆಸ್ಸಿನಿಂದ ಬೃಹತ್ ಪರಿವರ್ತನಾ ರ್ಯಾಲಿ
Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ