ನೆರೆ ರಾಜ್ಯದಿಂದ ವಲಸಿಗರ ನಿಯಮ ಬಾಹಿರ ರವಾನೆ
ಗಡಿಭಾಗದಲ್ಲಿನ ಹಳ್ಳಿಗಳು, ಹಳ್ಳ ಕೊಳ್ಳಗಳು, ಅಡ್ಡದಾರಿಗಳ ಮೂಲಕ ಆಗಮನ
Team Udayavani, May 2, 2020, 11:38 AM IST
ಸಾಂದರ್ಭಿಕ ಚಿತ್ರ
ರಾಯಚೂರು: ಅಂತಾರಾಜ್ಯಗಳಿಂದ ಜನರನ್ನು ತಮ್ಮ ರಾಜ್ಯಗಳಿಗೆ ಸ್ಥಳಾಂತರಿಸಲು ಸರ್ಕಾರ ಅವಕಾಶ ನೀಡಿ ಸಮರ್ಪಕ ನಿಯಮಾವಳಿ ರೂಪಿಸುತ್ತಿದೆ. ಅಷ್ಟರಲ್ಲೇ ಆಂಧ್ರಪ್ರದೇಶ ಹಾಗೂ ತೆಲಂಗಾಣ ಸರ್ಕಾರಗಳು ರಾಯಚೂರು ಜಿಲ್ಲೆಯ ಜನರನ್ನು ಗಡಿಭಾಗದವರೆಗೂ ಕರೆದುಕೊಂಡು ಬಂದು ನಿಯಮ ಬಾಹಿರವಾಗಿ ಇಳಿಸಿ ಹೋಗುತ್ತಿವೆ. ಈಗಾಗಲೇ ಆಂಧ್ರ, ತೆಲಂಗಾಣ ರಾಜ್ಯಗಳಲ್ಲಿ ಕೋವಿಡ್ ಅಟ್ಟಹಾಸವಿದೆ. ಈ ರಾಜ್ಯಗಳಿಗೆ ಹೊಂದಿಕೊಂಡಿರುವ ರಾಯಚೂರು ಜಿಲ್ಲೆ ಹಸಿರು ವಲಯದಲ್ಲಿದೆ. ಆ ಭಾಗದಲ್ಲಿ ಅಕ್ರಮವಾಗಿ ನುಸುಳುತ್ತಿರುವ ಜನರನ್ನು ತಡೆದು ತಪಾಸಣೆ ಮಾಡುವಷ್ಟರಲ್ಲಿ ಆರೋಗ್ಯ ಸಿಬ್ಬಂದಿ ಸುಸ್ತಾಗುತ್ತಿದ್ದಾರೆ. ಸಂಬಂಧಿಸಿದ ರಾಜ್ಯದ ಜತೆ ಮಾತುಕತೆ ನಡೆಸದೆ ಬೇಕಾಬಿಟ್ಟಿಯಾಗಿ ಜನರನ್ನು ಸ್ಥಳಾಂತರಿಸುತ್ತಿರುವುದು ಆತಂಕಕ್ಕೆಡೆ ಮಾಡಿದೆ.
ಎರಡು ದಿನದಲ್ಲಿ 150 ಜನ: ಈ ರೀತಿ ನುಗ್ಗಿದ ಜನರ ಸಂಖ್ಯೆ ಎರಡು ದಿನದಲ್ಲಿ 150 ದಾಟಿದೆ. ಇವರೆಲ್ಲ ಗಡಿಭಾಗದಲ್ಲಿನ ಹಳ್ಳಿಗಳು, ಹಳ್ಳ ಕೊಳ್ಳಗಳು, ಅಡ್ಡದಾರಿಗಳ ಮೂಲಕ ಸದ್ದಿಲ್ಲದೇ ಬರುತ್ತಿದ್ದಾರೆ. ಆದರೆ, ಈಗಾಗಲೇ ಗಡಿಭಾಗದ 20ಕ್ಕೂ ಅಧಿಕ ಹಳ್ಳಿಗಳಲ್ಲಿ ಟಾಸ್ಕ್ಫೋರ್ಸ್ ತಂಡಗಳು ಸಕ್ರಿಯವಾಗಿವೆ. ಯಾರೇ ಹೊಸದಾಗಿ ಬಂದರೂ ಜಿಲ್ಲಾಡಳಿತಕ್ಕೆ ಮಾಹಿತಿ
ಸಿಗುತ್ತಿದೆ. ಅಂತವರ ತಪಾಸಣೆ ನಡೆಸಿ 14 ದಿನ ಹೋಮ್ ಕ್ವಾರಂಟೈನ್ ಮಾಡಲಾಗುತ್ತಿದೆ. ಆದರೆ, ಗೊತ್ತಿಲ್ಲದೇ ನುಸುಳಿದವರಿಂದ ಎಲ್ಲಿ ವೈರಸ್ ಹರಡುವುದೋ ಎಂಬ ಆತಂಕ ಖುದ್ದು ಜಿಲ್ಲಾಡಳಿತಕ್ಕೆ ಎದುರಾಗಿದೆ.
ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ: ಈಗಾಗಲೇ ಅಂತರ್ ಜಿಲ್ಲೆಗಳಿಂದ ಜನರ ಸ್ಥಳಾಂತರ ಕಾರ್ಯ ನಡೆದಿದೆ. ಆಯಾ ಜಿಲ್ಲಾಡಳಿತಗಳು ವಲಸೆ ಹೋದ ಜನರನ್ನು ಖುದ್ದು ತಾವೇ ಕರೆದುಕೊಂಡು ಬಂದು ಬಿಟ್ಟು ಹೋಗುತ್ತಿವೆ. ಇಲ್ಲಿನವರನ್ನೂ ಬೇರೆಡೆ ಕಳುಹಿಸಲಾಗಿದೆ. ಆದರೆ, ಅಂತರ್ ರಾಜ್ಯಗಳಲ್ಲೂ ರಾಜ್ಯದ ಸಾಕಷ್ಟು ಜನ ವಲಸೆ ಹೋಗಿ ಸಿಲುಕಿದ್ದಾರೆ. ಅದರಂತೆ ಉತ್ತರ ಪ್ರದೇಶ,
ಓರಿಸ್ಸಾ, ಬಿಹಾರ, ರಾಜಸ್ಥಾನ ಸೇರಿ ವಿವಿಧ ಭಾಗದ ಜನರು ಜಿಲ್ಲೆಯಲ್ಲಿದ್ದಾರೆ. ಅವರನ್ನೂ ಹೇಗೆ ಕಳುಹಿಸಬೇಕೆಂಬ ಸ್ಪಷ್ಟ ನಿರ್ದೇಶನ ಬಂದಿಲ್ಲ. ಅಷ್ಟರೊಳಗೆ ನೆರೆ ರಾಜ್ಯಗಳು ಈ ರೀತಿ ಎಡವಟ್ಟುಗಳನ್ನು ಮಾಡುತ್ತಿವೆ.
ತೆಲಂಗಾಣ, ಆಂಧ್ರ ಸರ್ಕಾರಗಳು ಅಲ್ಲಿನ ಕೆಲ ಜಿಲ್ಲೆಗಳನ್ನು ಹಸಿರು ವಲಯ ಎಂದು ಘೋಷಿಸಿವೆ. ಅದನ್ನು ತಪ್ಪಾಗಿ ಅರ್ಥೈಸಿಕೊಂಡು ಅಲ್ಲಿ ಜನ ಸಂಚಾರ ಹೆಚ್ಚಾಗಿದೆ ಎಂದು ತಿಳಿದು ಬಂದಿದೆ. ನಮ್ಮ ಜಿಲ್ಲೆಗೆ 150ಕ್ಕೂ ಅಧಿಕ ಜನ ನುಸುಳಿದ್ದು, ಅಲ್ಲಿನ ಸರ್ಕಾರ ಕನಿಷ್ಠ ಮಾಹಿತಿಯೂ ನೀಡಿಲ್ಲ. ಈ ವಿಚಾರವನ್ನು ಡಿಸಿಯವರು ಸರ್ಕಾರದ ಗಮನಕ್ಕೆ ತಂದಿದ್ದಾರೆ. ಬೇರೆ
ರಾಜ್ಯಗಳಿಗೆ ಜನರನ್ನು ಸ್ಥಳಾಂತರಿಸುವ ಬಗ್ಗೆ ಸೂಕ್ತ ನಿರ್ದೇಶನ ಬಂದಿಲ್ಲ.
● ಸಂತೋಷ ಎಸ್. ಕಾಮಗೌಡ, ಸಹಾಯಕ ಆಯುಕ್ತ, ರಾಯಚೂರು
ಸಿದ್ಧಯ್ಯಸ್ವಾಮಿ ಕುಕುನೂರು