ವಾಹನಗಳ ಓಡಾಟ ಹೆಚ್ಚಳ; ಮಧ್ಯಾಹ್ನದ ಬಳಿಕ ವಿರಳ
ರಾಜ್ಯದಲ್ಲಿ ಲಾಕ್ಡೌನ್ ಸಡಿಲಿಕೆ; ತೆರೆಯಿತು ಹಲವು ಅಂಗಡಿಗಳ ಬಾಗಿಲು
Team Udayavani, Apr 24, 2020, 5:55 AM IST
ಉಡುಪಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೃಷಿ ಯಂತ್ರೋಪಕರಣಗಳ ಮಳಿಗೆ.
ರಾಜ್ಯದಲ್ಲಿ ಬುಧವಾರ ಮಧ್ಯರಾತ್ರಿಯಿಂದ ಲಾಕ್ಡೌನ್ ಸಡಿಲಿಕೆ ಮಾಡಲಾಗಿದ್ದರೂ ಕೆಲವೊಂದೆಡೆ ನಿಬಂಧನೆಗಳನ್ನು ಯಥಾಸ್ಥಿತಿಯಲ್ಲಿ ಪಾಲಿಸಿದ್ದರೆ ಇನ್ನು ಕೆಲವೆಡೆ ಜನರ ಓಡಾಟ, ವಾಹನ ಸಂಚಾರ ಹೆಚ್ಚಿನ ಸಂಖ್ಯೆಯಲ್ಲಿತ್ತು.ವ್ಯಾಪಾರಿಗಳಲ್ಲಿ ಅಂಗಡಿ ಬಾಗಿಲು ತೆರೆಯುವುದೋ ಬೇಡವೋ ಎಂಬ ಗೊಂದಲ ಮನೆಮಾಡಿತ್ತು.
ಉಡುಪಿ: ಉಡುಪಿ ಜಿಲ್ಲೆಯಲ್ಲಿಯೂ ಗುರುವಾರ ಲಾಕ್ಡೌನ್ ಮೂಡ್ ಇರಲಿಲ್ಲ. ಜನರು, ವಾಹನಗಳ ಓಡಾಟ ನಿರಂತರವಾಗಿತ್ತು.
ನಗರದಲ್ಲಿ ಬಸ್ಸುಗಳ ಸಂಚಾರ ಬಿಟ್ಟರೆ ಉಳಿದೆಲ್ಲವೂ ನಿರಂತರವಾಗಿ ನಡೆಯುತ್ತಿದ್ದವು. ಈ ನಡುವೆ ಕೆಲವು ವ್ಯಾಪಾರಸ್ಥರು ಅಂಗಡಿ- ಮುಂಗ್ಗಟ್ಟುಗಳನ್ನು ತೆರೆಯಬೇಕೊ ಬೇಡವೊ ಎಂಬ ಗೊಂದಲದಲ್ಲಿದ್ದರು. ಇಂದಿನ ಪರಿಸ್ಥಿತಿ ನೋಡಿಕೊಂಡು ನಾಳೆಯಿಂದ ನಿರ್ಧರಿಸ ಲಾಗುವುದು ಎಂದು ನಗರದ ಫುಟ್ವೇರ್ ಮಳಿಗೆಯ ಮಾಲಕರೊಬ್ಬರು ತಿಳಿಸಿದರು.
ಡಿಟಿಎಚ್, ಕೇಬಲ್ ಸೇವೆ, ಗ್ರಾ.ಪಂ. ಮಟ್ಟದಲ್ಲಿ ಸರಕಾರ ಅನುಮತಿ ನೀಡಿರುವ ಸೇವಾ ವಲಯ, ಶೈತ್ಯ ದಾಸ್ತಾನು , ಕಿರಾಣಿ, ಮಾಂಸದ ಅಂಗಡಿ, ಕೊರಿ ಯರ್, ಅಂಚೆ, ಇ ಕಾಮರ್ಸ್, ರಸ್ತೆ, ಕಟ್ಟಡ ನಿರ್ಮಾಣ, ಕೈಗಾರಿಕಾ ಉತ್ಪಾದನೆ, ಮೆಟ್ರೋ ಕಾಮಗಾರಿ, ಎಲೆ ಕ್ಟ್ರಿಧೀಶಿ ಯನ್, ಪ್ಲಂಬರ್, ಟಿವಿ ರಿಪೇರಿ, ಮೋಟಾರ್ ಮೆಕ್ಯಾನಿಕ್, ಆಹಾರ ಸಂಸ್ಕ ರಣ ಘಟಕ , ಕಲ್ಲಿದ್ದಲು ಉತ್ಪಾದನೆ, ಗಣಿಗಾರಿಕೆ ಮತ್ತು ಸಂಬಂಧಿ ಸಿದ ಕೈಗಾರಿಕೆ , ಪ್ಯಾಕೇಜಿಂಗ್ , ಗೂಡ್ಸ್ ರೈಲು, ಕಾರ್ಗೋ ವಿಮಾನ , ಒಳನಾಡು ಜಲ ಸಾರಿಗೆ, ಸರಕು ಸಾಗಣೆ ಲಾರಿ, ದಾಬಾ, ಸಿಮೆಂಟ್, ಉಕ್ಕು, ಜಲ್ಲಿ, ಟೈಲ್ಸ್, ಪೈಂಟ್, ಇಟ್ಟಿಗೆ ಮತ್ತು ಟಾರ್ ಸಾಗಾಟ, ಆಸ್ಪತ್ರೆ,ನರ್ಸಿಂಗ್ ಹೋಮ್, ಕ್ಲಿನಿಕ್, ಪಶು ಆಸ್ಪತ್ರೆ, ಆ್ಯಂಬುಲೆನ್ಸ್,ಕೃಷಿ ಚಟುವಟಿಕೆಗಳು, ಎಪಿಎಂಸಿಗಳು, ಕೃಷಿ ಉಪ ಕರಣಗಳ ಮಾರಾಟ,ಬೀಜ,ಗೊಬ್ಬರ, ಕ್ರಿಮಿ ನಾಶಕ ಉತ್ಪಾದನ ಘಟಕ,ಕಾಫಿ,ಟೀ,ರಬ್ಬರ್ ಪ್ಲಾಂಟೇಶನ್, ಹೈನುಗಾರಿಕೆ, ಹಾಲು-ಹಾಲಿನ ಉತ್ಪನ್ನ ಸಾಗಾಣಿಕೆ ಮತ್ತು ಮಾರಾಟ, ಗೋಶಾಲೆ ,ಮೀನುಗಾರಿಕೆ, ಬ್ಯಾಂಕ್ಗಳು, ಎಟಿಎಂ, ಸೆಕ್ಯುರಿಟಿ ಏಜೆನ್ಸಿ,ಸೆಬಿ,ವಿಮಾ ಕಂಪೆನಿ . ಅನಾಥಾಶ್ರಮ, ವೃದ್ಧಾಶ್ರಮ, ವೃದ್ಧರು, ವಿಧವೆಯರು, ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿಗೆ ವ್ಯವಸ್ಥೆ, ಅಂಗನವಾಡಿ ಕೇಂದ್ರಗಳು, ಆನ್ ಲೈನ್ ಶಿಕ್ಷಣ, ನರೇಗಾಗಳಿಗೆ ಅನುಮತಿ ಕಲ್ಪಿಸಲಾಗಿತ್ತು.
ಶೇ.75ರಷ್ಟು ಸೇವೆ
ಲಾಕ್ಡೌನ್ ಸಡಿಲಿಕೆ ಮಾಡಿರುವುದರಿಂದಾಗಿ ಶೇ.75ರಷ್ಟು ವಿವಿಧ ಅಂಗಡಿಗಳು ತೆರೆದಿದ್ದವು. ಇಂದು ಕೂಡ ಬೆಳಗ್ಗೆ 11ರ ಅನಂತರ ವಾಹನಗಳ ಸಂಚಾರ ಕಡಿಮೆಯಿತ್ತು. ಜನರಿಲ್ಲದ ಕಾರಣ ಮಧ್ಯಾಹ್ನದ ಬಳಿಕ ಎಲ್ಲ ಅಂಗಡಿಗಳನ್ನು ಮುಚ್ಚಲಾಯಿತು.
ಕೋಟ: ರಸ್ತೆಯಲ್ಲಿ ಟಿಪ್ಪರ್, ಲಾರಿ ಸದ್ದು
ಕೋಟ: ಕೋಟದಲ್ಲಿ ಗುರುವಾರ ಗ್ರಾಮಾಂತರ ಪ್ರದೇಶದಲ್ಲೂ ಜನರು ಏಕಾಏಕಿ ರಸ್ತೆಗಿಳಿದು ಸಂಚಾರ ಆರಂಭಿಸಿದರು. ಅಂಗಡಿ- ಮುಂಗಟ್ಟುಗಳು ಜನದಟ್ಟಣೆಯಿಂದ ತುಂಬಿದ್ದವು.
ಕೋಟ, ಸಾಸ್ತಾನ, ಸಾೖಬ್ರಕಟ್ಟೆ, ಸಾಲಿ ಗ್ರಾಮ ಮುಂತಾದ ಕಡೆಗಳಲ್ಲಿ ಬೆಳಗ್ಗೆ 8 ಗಂಟೆಯಿಂದಲೇ ಸಾಕಷ್ಟು ಜನಸಂಚಾರ ಆರಂಭಗೊಂಡಿತ್ತು. ಅಗತ್ಯ ಸಾಮಗ್ರಿಗಳ ಅಂಗಡಿಗಳು ಜತೆಗೆ ಕೆಲವೊಂದು ಇತರ ಮಳಿಗೆಗಳು ತೆರದಿದ್ದವು. ಕಟ್ಟಡ ಸಾಮಾಗ್ರಿಗಳನ್ನು ಸಾಗಿಸುವ ವಾಹನಗಳಿಗೆ ಅವಕಾಶ ನೀಡಿದ್ದರಿಂದ ಬಿಕೋ ಎನ್ನುತ್ತಿದ್ದ ರಸ್ತೆಯಲ್ಲಿ ಟಿಪ್ಪರ್, ಲಾರಿ, ಟ್ರಕ್ಗಳಿಂದ ಓಡಾಟ ಜೋರಾಗಿತ್ತು.
ಜನರು ಪೇಟೆಗೆ ಆಗಮಿಸುವ ಸಂದರ್ಭ ತಮ್ಮ ಮನೆಯವರು, ಮಕ್ಕಳನ್ನು ಕರೆದೊ ಯ್ಯುತ್ತಿದ್ದ ದೃಶ್ಯ ಕಂಡುಬಂತು. ಸಾಮಾಜಿಕ ಅಂತರ, ಮುನ್ನೆಚ್ಚರಿಕೆ ಕ್ರಮಗಳೆಲ್ಲವೂ ಒಂದೇ ದಿನಕ್ಕೆ ಮರೆತು ಹೋದಂತಿತ್ತು.
ವರ್ತಕರಲ್ಲಿ ಗೊಂದಲ
ಲಾಕ್ಡೌನ್ ಸಡಿಲಗೊಳಿಸಿದ ಪ್ರಥಮ ದಿನದಂದು ವ್ಯವಹಾರದ ಸಮಯವನ್ನು ನಿಗದಿಪಡಿಸದ ಕಾರಣ ವರ್ತಕರಲ್ಲಿ ಗೊಂದಲ ವಾಯಿತು. ಇಡೀ ದಿನ ವ್ಯವಹಾರ ನಡೆಸಲು ಅವಕಾಶ ಇದೆಯೇ? ಅಥವಾ ಮೊದಲಿನಂತೆ ಬೆಳಗ್ಗೆ 11 ಗಂಟೆಗೆ ಸ್ಥಗಿತಗೊಳಿಸಬೇಕೇ ಎನ್ನುವುದು ತಿಳಿಯದೆ ಅಧಿಕಾರಿಗಳು, ಪೊಲೀಸರಲ್ಲಿ ವಿಚಾರಿಸುತ್ತಿದ್ದದ್ದು ಕಂಡು ಬಂತು.
ಕಾರ್ಕಳ: ಲಾಕ್ಡೌನ್ ಸಡಿಲಿಕೆಯಾಗಿದ್ದರೂ ಬದಲಾವಣೆಯಿಲ್ಲ
ಕಾರ್ಕಳ: ಲಾಕ್ಡೌನ್ ಸಡಿಲಿಕೆ ಮಾಡಿದ್ದರೂ ಕಾರ್ಕಳ ನಗರ ಹಾಗೂ ಗ್ರಾಮಾಂತರ ಪ್ರದೇಶ ಗುರುವಾರ ಈ ಹಿಂದಿನಂತೆಯೇ ಇತ್ತು. ಬೆಳಗ್ಗಿನ ವೇಳೆ ನಗರದಲ್ಲಿ ಜನರ ಓಡಾಟ, ವಾಹನಗಳ ಸಂಚಾರ ತುಸು ಜಾಸ್ತಿಯಾಗಿದ್ದರೂ 11 ಗಂಟೆ ಅನಂತರ ನಗರ ಸಂಪೂರ್ಣ ಸ್ತಬ್ಧಗೊಂಡಿತ್ತು. ಬೆಳಗ್ಗೆ 7ರಿಂದ 11 ದಿನಸಿ ಅಂಗಡಿ, ಕೆಲವೊಂದು ಬೇಕರಿಗಳು ತೆರೆದಿದ್ದರೆ, ಮೆಡಿಕಲ್ ರಾತ್ರಿ ತನಕವೂ ಕಾರ್ಯನಿರ್ವಹಿಸುತ್ತಿತ್ತು. ಅಲ್ಲೊಂದು ಇಲ್ಲೊಂದು ದ್ವಿಚಕ್ರ ವಾಹನಗಳ ಓಡಾಟ ದಿನವಿಡೀ ಕಂಡುಬರುತ್ತಿತ್ತು.
ಬಹುತೇಕ ಕ್ರಷರ್ಗಳು ಕಾರ್ಯಾರಂಭ ಮಾಡಿದ ಹಿನ್ನೆಲೆ ಟಿಪ್ಪರ್ಗಳು ಜಲ್ಲಿಕಲ್ಲು ಹೇರಿ ಕೊಂಡು ಸಾಗುತ್ತಿದ್ದವು. ಬೆರಳೆಣಿಕೆ ಹೊಟೇಲ್ಗಳು ತೆರೆದು ಬೆಳಗ್ಗೆ 11 ಗಂಟೆ ತನಕ ತಿಂಡಿ ಪಾರ್ಸೆಲ್ ನೀಡುತ್ತಿರುವುದು ಕಂಡುಬಂತು. ನಗರ, ಗ್ರಾಮೀಣ ಭಾಗದ ವಿವಿಧೆಡೆ ಸಂಘ-ಸಂಸ್ಥೆಗಳು, ದಾನಿಗಳು ಅಗತ್ಯವುಳ್ಳವರಿಗೆ ಆಹಾರ ಸಾಮಗ್ರಿ ವಿತರಿಸಿ ನೆರವಾದರು.
ಪಡುಬಿದ್ರಿಯಲ್ಲೂ ತೆರೆದ ಹೆಚ್ಚಿನ ಅಂಗಡಿಗಳು
ಪಡುಬಿದ್ರಿ: ಪಡುಬಿದ್ರಿ, ಸುತ್ತಮುತ್ತಲ ಭಾಗದಲ್ಲಿ ಹಾರ್ಡ್ವೇರ್, ಸಿಮೆಂಟ್, ಎಲೆಕ್ಟ್ರಿಕಲ್, ಪೈಂಟ್, ಕೃಷಿ ಯಂತ್ರೋಪಕರಣ, ರಸಗೊಬ್ಬರ ಮಳಿಗೆಗಳು ಗುರುವಾರದಂದು ತೆರೆದಿದ್ದವು.
ಹೆದ್ದಾರಿ ಬದಿಯಲ್ಲಿನ ಡಾಬಾ, ಗ್ಯಾರೇಜ್ಗಳು ಕಾರ್ಯಾರಂಭ ಮಾಡಿವೆ. ಆದರೆ ಗ್ರಾಹಕರ ಸಂಖ್ಯೆ ಕಡಿಮೆ ಇತ್ತು. ಈ ಎಲ್ಲ ಮಳಿಗೆಗಳು ಎಷ್ಟು ಗಂಟೆ ತೆರೆದಿರಬೇಕೆಂಬ ಸ್ಪಷ್ಟತೆ ಇದ್ದ ಹಾಗಿಲ್ಲ, ಇವುಗಳು ಇತರ ಅಗತ್ಯ ವಸ್ತುಗಳ ಮಳಿಗೆಗಳಂತೆ 11 ಗಂಟೆಗೆ ವಹಿವಾಟು ಸ್ಥಗಿತಗೊಳಿಸಿವೆ. ಈ ಮಳಿಗೆಗಳು ತೆರೆದ ಪರಿಣಾಮ ಕೆಲವು ಗ್ರಾಮೀಣ ಭಾಗದಲ್ಲಿ ನಿರ್ಮಾಣ ಕಾಮಗಾರಿ ಸಹಿತ ಕೃಷಿ ಚಟುವಟಿಕೆಗಳಿಗೆ ಚಾಲನೆ ಸಿಕ್ಕಂತಾಗಿದೆ.
ಉಡುಪಿ-ದ.ಕ. ಜಿಲ್ಲೆಯ ಗಡಿ ಹೆಜಮಾಡಿ ಯಲ್ಲಿ ಸೀಲ್ಡೌನ್ ಮುಂದುವರಿದಿದೆ. ಎರಡೂ ತಪಾಸಣಾ ಕೇಂದ್ರದಲ್ಲಿ ಅಗತ್ಯ ಸೇವೆಗಳ ವಾಹನ, ಪರವಾನಿಗೆ ಪಡೆದ ವಾಹನಗಳ ಹೊರತು ಇತರ ವಾಹನಗಳ ಸಂಚಾರಕ್ಕೆ ಪೊಲೀಸರು ಅವಕಾಶ ನೀಡ ಲಿಲ್ಲ. ಅನಗತ್ಯ ಸಂಚಾರಕ್ಕೆ ಮುಂದಾಗುವ ವಾಹನ ಗಳನ್ನು ಪೊಲೀಸರು ತಪಾಸಣೆ ನಡೆಸಿ ಹಿಂದಕ್ಕೆ ಕಳುಹಿಸಿದರು.
ಕುಂದಾಪುರ: ತೆರೆದ ಹಾರ್ಡ್ವೇರ್ ಮಳಿಗೆಗಳು
ಕುಂದಾಪುರ: ಸರಕಾರ ಲಾಕ್ಡೌನ್ನಲ್ಲಿ ಕೊಂಚ ಸಡಿಲಿಕೆ ಮಾಡಿದ್ದು ಗುರುವಾರ ಹಾರ್ಡ್ವೇರ್ ಮಳಿಗೆಗಳು ತೆರೆಯಲಾರಂಭಿಸಿವೆ.
ನಗರದಲ್ಲಿ ಜನಸಂದಣಿ ಎಂದಿಗಿಂತ ಹೆಚ್ಚಿತ್ತು. ಬಹುತೇಕ ಅಂಗಡಿಗಳು ತೆರೆಯಲಿವೆ, ಹೊಟೇಲ್ಗಳು ತೆರೆಯಲಿವೆ ಎಂದು ಜನ ಭಾವಿಸಿದ್ದರು. ಆದರೆ ದಿನಸಿ ಅಂಗಡಿಗಳು, ಮೆಡಿಕಲ್ಗಳು, ಬೇಕರಿ, ಜ್ಯೂಸ್ ಅಂಗಡಿಗಳು ತೆರೆದಿದ್ದವು. ಕೆಲ ದಿನಗಳ ಹಿಂದಿನಿಂದ ಕೃಷಿ ಚಟುವಟಿಕೆ ಸಲುವಾಗಿ ಪೈಪ್ ಮೊದಲಾದ ಕೃಷಿ ಉಪಕರಣಗಳು ದೊರೆಯುವ ಅಂಗಡಿಗಳು ತೆರೆಯುತ್ತಿವೆ. ಗುರುವಾರದಿಂದ ಸಿಮೆಂಟ್, ಕಬ್ಬಿಣ ಮೊದಲಾದ ವಸ್ತುಗಳು ದೊರೆಯುವ ಹಾರ್ಡ್ವೇರ್ ಮಳಿಗೆಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಆದರೆ ನಗರದಲ್ಲಿ ಒಂದೇ ಹಾರ್ಡ್ವೇರ್ ಮಳಿಗೆ ತೆರೆದಿತ್ತು. ಇತರ ಮಳಿಗೆಗಳು ತೆರೆದಿರಲಿಲ್ಲ. ಇನ್ನುಳಿದಂತೆ ಗ್ಯಾರೇಜ್ಗಳು ಕೂಡಾ ಕಾರ್ಯಾಚರಿಸಲಿಲ್ಲ.
ಆಸ್ಪತ್ರೆ ಮೊದಲಾದ ತುರ್ತು ಹಾಗೂ ಅನಿವಾರ್ಯ ಸ್ಥಳಗಳಿಗೆ ಊಟ, ಉಪಾಹಾರ ನೀಡಲು ಒಂದು ಹೊಟೇಲ್ನ ಪಾರ್ಶ್ವದಲ್ಲಿ ಪಾರ್ಸೆಲ್ ಸೇವೆ ಮಾತ್ರ ಲಭ್ಯವಿದೆ. ಜನ ನಿರೀಕ್ಷಿಸಿದಂತೆ ಬದಲಾವಣೆ ಆಗಿಲ್ಲ. 11 ಗಂಟೆಗೆ ಎಲ್ಲ ಅಂಗಡಿಗಳು ಬಾಗಿಲು ಹಾಕುತ್ತಿವೆ. ಲಾಕ್ಡೌನ್ ಸಡಿಲಿಕೆ ಎಂದ ಕೂಡಲೇ ಇಡೀ ದಿನ ತೆರೆದಿರುತ್ತದೆ, ಎಲ್ಲ ಅಂಗಡಿಗಳೂ ತೆರೆಯಲಿವೆ ಎಂದೇ ಬಹುತೇಕ ಜನ ಭಾವಿಸಿದ್ದರು. ಆದರೆ ಅಂತಹ ಯಾವುದೇ ಬದಲಾವಣೆಗಳು ನಡೆಯಲಿಲ್ಲ. 11 ಗಂಟೆ ಅನಂತರ ಓಡಾಟಕ್ಕೆ ಅವಕಾಶ ಇಲ್ಲದ ಕಾರಣ ಹಾರ್ಡ್ವೇರ್ ಮಳಿಗೆಗಳು, ಕೃಷಿ ಉಪಕರಣಗಳ ಮಳಿಗೆಗಳು ಕೂಡಾ ಬೇಗನೆ ಬಾಗಿಲು ಹಾಕುವುದು ಅನಿವಾರ್ಯವಾಗಿದೆ. ನಗರದ ಪ್ರವೇಶಕ್ಕೆ ಒಡ್ಡಿದ ತಡೆಯನ್ನು ತೆರವುಗೊಳಿಸಿಲ್ಲ. ಆದ್ದರಿಂದ ಎರಡೇ ದಾರಿಗಳಿವೆ.
ಲಾಕ್ಡೌನ್ ಮುಗಿದಿಲ್ಲ
ಜನರು ಸಾಮಾಜಿಕ ಅಂತರವನ್ನು ಮರೆತು ಓಡಾಡುವುದು, ಗುಂಪು-ಗುಂಪಾಗಿ ಸಂಚರಿಸುವುದು ಹಾಗೂ ರಸ್ತೆಗಳಲ್ಲಿ ಟಿಪ್ಪರ್, ಲಾರಿ, ಕಾರುಗಳು ಎಗ್ಗಿಲ್ಲದೆ ಸಂಚರಿಸುತ್ತಿರುವುದನ್ನು ನೋಡಿದಾಗ ಲಾಕ್ಡೌನ್ ಮುಗಿದೇ ಹೋಯಿತು. ನಾವಿನ್ನು ಮೊದಲಿನಂತೆ ಇರಬಹುದು ಎನ್ನುವ ರೀತಿಯ ವರ್ತನೆ ಜನರಿಂದ ಕಂಡು ಬರುತ್ತಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ
ಜಯಪ್ರಕಾಶ್ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ
ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು
ಕಾರ್ಗಿಲ್ ಯೋಧ ಮೆಲ್ವಿನ್ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ
ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್