ನಿರ್ಣಾಯಕ ಪಾತ್ರ ವಹಿಸುವ ಶಕ್ತಿ ಭಾರತಕ್ಕಿದೆ
Team Udayavani, Jan 10, 2022, 5:10 AM IST
ಬೆಂಗಳೂರು: ಜಾಗತಿಕ ವಿದ್ಯಮಾನಗಳಿಗೆ ಪ್ರತಿಸ್ಪಂದಿಸಿ ನಿರ್ಣಾಯಕ ಪಾತ್ರ ವಹಿಸುವ ಶಕ್ತಿ ಮತ್ತು ಸಾಮರ್ಥ್ಯವನ್ನು ಭಾರತ ಹೊಂದಿದ್ದು, ಅದಕ್ಕಾಗಿ ಖಚಿತ ಕಾರ್ಯಸೂಚಿ, ದೂರಗಾಮಿ ದೃಷ್ಟಿಕೋನ ಹಾಗೂ ಆರ್ಥಿಕ ಸಬಲತೆಯನ್ನು ಸಾಧಿಸುವ ಅಗತ್ಯ ಭಾರತಕ್ಕಿದೆ ಎಂದು ಆರೆಸ್ಸೆಸ್ ರಾಷ್ಟ್ರೀಯ ಕಾರ್ಯಕಾರಿ ಸದಸ್ಯ ರಾಮ್ ಮಾಧವ್ ಪ್ರತಿಪಾದಿಸಿದ್ದಾರೆ.
ಸಂವಾದ ವರ್ಲ್ಡ್ ರವಿವಾರ ಫೇಸ್ಬುಕ್ ನೇರ ಪ್ರಸಾರದಲ್ಲಿ ಹಮ್ಮಿಕೊಂಡಿದ್ದ ಅದರ ಸಂಪಾದಕ ಪ್ರಶಾಂತ್ ವೈದ್ಯರಾಜ್ ಸಂಪಾದಿಸಿದ “ದಿ ನ್ಯೂ ವರ್ಲ್ಡ್ ಆರ್ಡರ್’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೊರೊನಾ ಸಾಂಕ್ರಾಮಿಕದ ಬಳಿಕ ಜಗತ್ತು ಅನೇಕ ಸ್ಥಿತ್ಯಂತರಗಳಿಗೆ ಸಾಕ್ಷಿಯಾಗಿದೆ. ತಾಪಮಾನ ಬದಲಾವಣೆ, ಆರೋಗ್ಯ ವಲಯ ಮತ್ತು ತಂತ್ರಜ್ಞಾನದ ಬಳಕೆ ದಿಸೆಯಿಂದ ಹೊಸ ಸವಾಲುಗಳು ಎದುರಾಗಿವೆ. ಅವುಗಳ ವಿಚಾರದಲ್ಲಿ ಭಾರತ ತನ್ನ ಪಾತ್ರ ನಿರ್ವಹಿಸಲೇಬೇಕಿದೆ ಎಂದು ರಾಮ್ ಮಾಧವ್ ಅಭಿಪ್ರಾಯಪಟ್ಟರು.
ನಮ್ಮಲ್ಲಿ ಖಚಿತ ಕಾರ್ಯಸೂಚಿ ಇಲ್ಲದಿರುವುದು, ದೂರಗಾಮಿ ದೃಷ್ಟಿಕೋನದ ಕೊರತೆ ಮತ್ತು ಆರ್ಥಿಕ ಬಲಿಷ್ಠತೆ ಸಾಧಿಸದಿರುವುದು ನಮ್ಮ ಪಾಲಿನ “ಅಂಗವೈಕಲ್ಯವಾಗಿದೆ’. ಇದನ್ನು ಮೆಟ್ಟಿ ನಿಲ್ಲಬೇಕಾಗಿದೆ ಎಂದು ಅವರು ಕರೆ ನೀಡಿದರು.
ಇದನ್ನೂ ಓದಿ:ಸಂಕ್ರಾಂತಿಗೆ ಜಾಗತಿಕ ಸೂರ್ಯ ನಮಸ್ಕಾರ !
ವಿಚಾರ ಮಂಡನೆ
“ಜಾಗತಿಕವಾಗಿ ಹೊರಹೊಮ್ಮು ತ್ತಿರುವ ವಿದ್ಯಮಾನಗಳಲ್ಲಿ ಭಾರತದ ಪಾತ್ರ: ಸವಾಲುಗಳು ಮತ್ತು ಅವಕಾಶಗಳು’ ವಿಷಯದಲ್ಲಿ ಚರ್ಚೆ ನಡೆಯಿತು. ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ನ ಜಿಯೋ ಪಾಲಿಟಿಕ್ಸ್ ಆ್ಯಂಡ್ ಇಂಟರ್ ನ್ಯಾಷನಲ್ ರಿಲೇಷನ್ಶಿಪ್ ವಿಭಾಗದ ನಿರ್ದೇಶಕ ಪ್ರೊ| ಮಾಧವದಾಸ್ ನಲಪತ್, ಪುದು ಚೇರಿ ವಿವಿಯ ಪಾಲಿಟಿಕ್ಸ್ ಆ್ಯಂಡ್ ಇಂಟರ್ನ್ಯಾಷನಲ್ ಸ್ಟಡೀಸ್ನ ಸಹಾಯಕ ಪ್ರಾಧ್ಯಾಪಕ ಡಾ| ನಂದಕಿಶೋರ್ ವಿಚಾರ ಮಂಡಿಸಿದರು.