ಅಂತಾರಾಷ್ಟ್ರೀಯ ಪ್ರಸಿದ್ಧ “ಅಂಜನಾದ್ರಿ” ಅಭಿವೃದ್ಧಿ ಕಾರ್ಯಕ್ಕೆ ಆನೆಬಲ
ಅಂಜನಾದ್ರಿಯೂ ಕೊಪ್ಪಳ ಜಿಲ್ಲೆಗೊಂದು ಮುಕುಟಮಣಿ ಇದ್ದಂತೆ.
Team Udayavani, Mar 8, 2022, 3:33 PM IST
ಕೊಪ್ಪಳ: ಅಂತಾರಾಷ್ಟ್ರೀಯ ಪ್ರಸಿದ್ಧ ಅಂಜನಾದ್ರಿ ಅಭಿವೃದ್ಧಿಗೆ ರಾಜ್ಯ ಸರ್ಕಾರ ಪಣತೊಟ್ಟಿದೆ. ಪ್ರಸಕ್ತ ಸಾಲಿನ ಬಜೆಟ್ನಲ್ಲಿ 100 ಕೋಟಿ ರೂ. ಘೋಷಣೆ ಮಾಡಿರುವುದು ಜಿಲ್ಲೆಯ ಜನತೆಯ ಖುಷಿಯನ್ನು ಇಮ್ಮಡಿಗೊಳಿಸಿದೆ.
ಇದು ಕೇವಲ ಚುನಾವಣೆ ಘೋಷಣೆಯಾಗದೇ ಅಂದುಕೊಂಡಂತೆ ಬೆಟ್ಟದ ಅಭಿವೃದ್ಧಿಗೆ ಆನೆಬಲ ಬರಬೇಕಿದೆ. ಶೀಘ್ರವೇ ಅಂಜನಾದ್ರಿ ಅಭಿವೃದ್ಧಿಗೆ ಮಾಸ್ಟರ್ ಪ್ಲಾ ನ್ ರೂಪಿಸಿ ಅಭಿವೃದ್ಧಿಗೊಳಿಸಿ ನಾಡಿನ ಪ್ರವಾಸಿಗರನ್ನು ಕೈಬೀಸಿ ಕರೆಯುವಂತೆ ಮಾಡಬೇಕಿದೆ ಎಂದೆನ್ನುತ್ತಿದೆ ಜನತೆ. ರಾಮಾಯಣ ಕಾಲದ ಇತಿಹಾಸ ಒಳಗೊಂಡಿರುವ ಜಿಲ್ಲೆಯ ಅಂಜನಾದ್ರಿಯ ಪವಿತ್ರ ಸ್ಥಳ ಈಗ ವಿಶ್ವಮಟ್ಟದ ಪ್ರವಾಸಿ ತಾಣವಾಗಿ ಹೊರಹೊಮ್ಮಿದೆ. ದೇಶ, ವಿದೇಶಗಳ ಪ್ರವಾಸಿಗರು ಇಲ್ಲಿಗೆ ಆಗಮಿಸಿ ಇಲ್ಲಿನ ಐತಿಹಾಸಿಕ ಪ್ರದೇಶ, ಸ್ಮಾರಕಗಳು, ಬೆಟ್ಟ ಗುಡ್ಡಗಳನ್ನು ಕಣ್ಮನ ತುಂಬಿಕೊಳ್ಳುತ್ತಿದ್ದಾರೆ.
ಅಂಜನಾದ್ರಿಯಲ್ಲಿರುವ ಸವಾಲುಗಳೇನು? ಆಂಜನೇಯ ಅಂಜನಾದ್ರಿಯಲ್ಲೇ ಜನಿಸಿದ್ದು ಎನ್ನುವುದಕ್ಕೆ ಹಲವಾರು ದಾಖಲೆಗಳಿವೆ. ಇತಿಹಾಸ, ಪುರಾಣ ಇಲ್ಲಿನ ಜಾನಪದ ಕಥೆಗಳಲ್ಲೂ ಅಂಜನಾದ್ರಿಯ ನಾಮಾವಳಿ ಹಾಸು ಹೊಕ್ಕಾಗಿದೆ. ಆದರೆ ಟಿಟಿಡಿ ಹನುಮಂತನು ನಮ್ಮಲ್ಲಿ ಜನಿಸಿರುವನು ಎನ್ನುವ ಮೊಂಡುವಾದ ಮಾಡುತ್ತಿದೆ. ಇದಕ್ಕೆ ತಕ್ಕ ಉತ್ತರ ನೀಡಲು ರಾಜ್ಯ ಸರ್ಕಾರವು ದಾಖಲೆಗಳ ಸಂಗ್ರಹಕ್ಕೆ ಸಿದ್ಧವಾಗಿದೆ.
ಕೆಲ ದಿನಗಳ ಹಿಂದಷ್ಟೇ ಮುಜರಾಯಿ ಇಲಾಖೆ ಸಚಿವರ ಅಧ್ಯಕ್ಷತೆಯಲ್ಲಿ ದಾಖಲೆ ಸಂಗ್ರಹಕ್ಕೆ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಪಂಡಿತರು, ಸಂಶೋಧಕರು, ಇತಿಹಾಸ ತಜ್ಞರು, ಪ್ರಾಧ್ಯಾಪಕರು ಸೇರಿ ಧಾರ್ಮಿಕ ಪ್ರಮುಖರನ್ನು ಆಹ್ವಾನಿಸಿತ್ತು. ಆದರೆ ಸಿಎಂ ನೇತೃತ್ವದಲ್ಲೇ ಸಭೆ ನಡೆಸಲು ನಿರ್ಧರಿಸಿದ ಹಿನ್ನೆಲೆಯಲ್ಲಿ ಸಚಿವರ ಸಭೆ ಮುಂದೂಡಿಕೆಯಾಗಿತ್ತು. ಬಜೆಟ್ನಲ್ಲೂ ಅಂಜನಾದ್ರಿಯೇ ಹನುಮನ ಜನ್ಮಸ್ಥಳ ಎನ್ನುವ ಅಂಶವೂ ಪ್ರಸ್ತಾಪಕ್ಕೆ ಬಂದಿದ್ದು, ಟಿಟಿಡಿಗೆ ತಕ್ಕ ಉತ್ತರ ನೀಡಲು ಸರ್ಕಾರವೇ ಅಂಜನಾದ್ರಿ ಅಭಿವೃದ್ಧಿಗೆ ಮೊಟ್ಟ ಮೊದಲ ಬಾರಿಗೆ 100 ಕೋಟಿ ಅನುದಾನ ಘೋಷಿಸಿದೆ. ಅಲ್ಲದೇ ಸ್ಥಳೀಯವಾಗಿ ಬೆಟ್ಟದ ಕೆಳ ಭಾಗದಲ್ಲಿ ಅಭಿವೃದ್ಧಿಗಾಗಿ ಪಟ್ಟಾ ಜಮೀನು ಸ್ವಾ ಧೀನ ಮಾಡಿಕೊಳ್ಳಬೇಕಿದೆ.
ರಸ್ತೆಗಳ ಅಗಲೀಕರಣವೂ ಸರ್ಕಾರ, ಜಿಲ್ಲಾಡಳಿತಕ್ಕೆ ಸವಾಲಿನ ವಿಷಯವಾಗಿದೆ. ಪ್ರವಾಸೋದ್ಯಮ ಬೆಳೆಯಲು ಭೂಸ್ವಾಧೀನ ಅನಿವಾರ್ಯತೆ ಆಗಲಿದೆ. ಸರ್ಕಾರಕ್ಕೆ ಸ್ಥಳೀಯವಾಗಿಯೂ ಕೆಲ ಸವಾಲುಗಳನ್ನು ಎದುರಿಸಬೇಕಿದೆ.
ಅಂಜನಾದ್ರಿ ಅಭಿವೃದ್ಧಿಯಿಂದ ಪ್ರವಾಸೋದ್ಯಮ ವೃದ್ಧಿ:
ಅಂಜನಾದ್ರಿಯೂ ಕೊಪ್ಪಳ ಜಿಲ್ಲೆಗೊಂದು ಮುಕುಟಮಣಿ ಇದ್ದಂತೆ. ಇದನ್ನು ಅಭಿವೃದ್ಧಿಗೊಳಿಸಿದರೆ ಜಿಲ್ಲೆಯ ಪ್ರವಾಸೋದ್ಯಮಕ್ಕೆ ದೊಡ್ಡ ಶಕ್ತಿ ಬಂದಂತಾಗಲಿದೆ. ನಾಡು, ದೇಶ, ವಿದೇಶಗಳ ಪ್ರವಾಸಿಗರನ್ನು ಸೆಳೆಯಲಿದೆ. ಇಲ್ಲಿಗೆ ಬರುವ ಪ್ರವಾಸಿಗರು ಅಂಜನಾದ್ರಿಯ ಜೊತೆಗೆ ಇಲ್ಲಿನ ಪಂಪಾ ಸರೋವರ, ವಾಲಿಕಿಲ್ಲಾ, ದುರ್ಗಾದೇವಿ ಬೆಟ್ಟ, ಋಷಿಮುಖ ಪರ್ವತ, ಹುಲಿಗೆಮ್ಮ ದೇವಸ್ಥಾನ, ಗವಿಮಠ, ಕುಮಾರ ರಾಮನಬೆಟ್ಟ ಸೇರಿ ಹಲವು ಪ್ರದೇಶಗಳಿಗೆ ಭೇಟಿ ನೀಡುವರು. ಇದು ಜಿಲ್ಲೆ ಆದಾಯಕ್ಕೆ ದೊಡ್ಡ ಶಕ್ತಿ ತಂದುಕೊಡಲಿದೆ.ಅಲ್ಲದೇ, ಪ್ರವಾಸಿಗರಿಗೆ ಕಿಷ್ಕಿಂದೆಯ ಸಮಗ್ರ ಇತಿಹಾಸ, ಸ್ಮಾರಕಗಳ ದರ್ಶನ ಒಂದೇ ಕಡೆ ಆಗಲಿದೆ.
ಚುನಾವಣಾ ಘೋಷಣೆಯಾಗದಿರಲಿ: ಅಂಜನಾದ್ರಿ ಅಭಿವೃದ್ಧಿಗೆ ಅನುದಾನ ಘೋಷಣೆಯಾಗಿದ್ದು, ಜಿಲ್ಲೆಯ ಜನರಿಗೇನೋ ಸಂತಸ ತರಿಸಿದೆ. ಆದರೆ ಮುಂದಿನ ವಿಧಾನಸಭಾ ಚುನಾವಣೆ ದೃಷ್ಟಿಯನ್ನಿಟ್ಟುಕೊಂಡು ಕಾಟಾಚಾರಕ್ಕೆ ಹಾಗೂ ಜನರನ್ನು ಸೆಳೆಯುವ ಉದ್ದೇಶದಿಂದ ಘೋಷಣೆಯಾಗದಿರಲಿ. 100 ಕೋಟಿ ರೂ.ಗೆ ಜಿಲ್ಲಾಡಳಿತ ತಕ್ಕ ಸಮಗ್ರ ಅಭಿವೃದ್ಧಿಯ ಯೋಜನಾ ವರದಿ ಸಿದ್ಧಪಡಿಸಿ ಸಕಾಲಕ್ಕೆ ಸರ್ಕಾರದಿಂದಲೇ ಅನುಮತಿ ಪಡೆದುಕೊಂಡು ಅಭಿವೃದ್ಧಿಗೆ ವೇಗ ಕೊಡುವ ಅಗತ್ಯ ಇದೆ. ಪ್ರಸ್ತುತ ಬೆಟ್ಟದ ಕೆಳ ಭಾಗದಲ್ಲಿ ಯಾತ್ರಿ ನಿವಾಸ, ಶೌಚಾಲಯ, ಕುಡಿಯುವ ನೀರು ಸೇರಿ ವಿಸ್ತಾರದ ಪಾರ್ಕಿಂಗ್, ಗಾರ್ಡನ್ ನಿರ್ಮಾಣವಾಗಬೇಕಿದೆ.
ಪ್ರದಕ್ಷಿಣೆ ಪಥ, ರೂಪ್ವೇ ಅವಶ್ಯ: ಬೆಟ್ಟದ ಸುತ್ತಲೂ ಕೆಳ ಭಾಗದಲ್ಲಿ ಪ್ರದಕ್ಷಿಣೆ ಪಥ ನಿರ್ಮಿಸುವುದರಿಂದ ಭಕ್ತರು ಕೆಳ ಭಾಗದಿಂದಲೇ ಪ್ರದಕ್ಷಿಣೆ ಹಾಕುತ್ತ ತಮ್ಮ ಇಷ್ಟಾರ್ಥ ಸಲ್ಲಿಸಲಿದ್ದಾರೆ. ಜೊತೆಗೆ ಅಂಜನಾದ್ರಿ ತಟಕ್ಕೆ ಬರುವ ಹಿರಿಯರು, ವೃದ್ಧರು ಬೆಟ್ಟ ಹತ್ತಲಾಗದೇ ತೊಂದರೆ ಎದುರಿಸುತ್ತಿದ್ದು, ಅಂತಹವರಿಗೂ ಬೆಟ್ಟದ ಮೇಲಿರುವ ಆಂಜನೇಯನ ದರ್ಶನ ದೊರೆಯುವಂತೆ ಮಾಡಲು ರೂಪ್ವೇ ನಿರ್ಮಿಸುವ ಅಗತ್ಯವಿದೆ. ಆದರೆ ಈ ರೂಪ್ವೇ ಬೆಟ್ಟದ ನೈಸರ್ಗಿಕ ಸೊಬಗಿಗೆ ಯಾವುದೇ ಧಕ್ಕೆಯಾಗದಂತೆ, ಇತಿಹಾಸ, ಸ್ಮಾರಕಗಳಿಗೂ ತೊಂದರೆಯಾಗದಂತೆ ನಿರ್ಮಿಸುವ ಅಗತ್ಯವಿದೆ ಎಂದೆನ್ನುತ್ತಾರೆ ಜನತೆ.
ಏನೆಲ್ಲಾ ಆಗಬೇಕಿದೆ?
ಅಂಜನಾದ್ರಿಯೊಂದು ರಾಷ್ಟ್ರೀಯ ಧಾರ್ಮಿಕ ಕೇಂದ್ರವಾಗಬೇಕಿದೆ.
ಅಂಜನಾದ್ರಿ ಅಭಿವೃದ್ಧಿಗೆ ನೀತಿಗಳು ರೂಪಗೊಳ್ಳಬೇಕಿದೆ.
ಅಂಜನಾದ್ರಿ ಅಭಿವೃದ್ಧಿಗೆ ರಸ್ತೆಗಳ ಅಗಲೀಕರಣ, ಎನ್ಎಚ್ಗೆ ಸಂಪರ್ಕ ಕಲ್ಪಿಸಬೇಕಿದೆ.
ಅಂಜನಾದ್ರಿ ಬೆಟ್ಟದ ಸುತ್ತ ಪ್ರದಕ್ಷಣಾ ಪಥ ಹಾಗೂ ಮೇಲ್ಭಾಗಕ್ಕೆ ತೆರಳಲು ರೂಪ್ವೇ ನಿರ್ಮಿಸಲಿ
ಬೆಟ್ಟದ ಕೆಳ ಭಾಗದಲ್ಲಿ 500-1000 ಸಾಮರ್ಥ್ಯದ ಯಾತ್ರಿ ನಿವಾಸ ನಿರ್ಮಿಸಬೇಕಿದೆ.
ರಾಮಾಯಣ ಥೀಮ್ ಪಾರ್ಕ್ ನಿರ್ಮಿಸಬೇಕಿದೆ.
ಅಂಜನಾದ್ರಿ ಬೆಟ್ಟದ ಕೆಳಗೆ ಪ್ರವಾಸಿಗರಿಗೆ ಮಾಹಿತಿ ಕೇಂದ್ರ ಸ್ಥಾಪನೆಯಾಗಬೇಕಿದೆ.
ಅಂಜನಾದ್ರಿ ಸುತ್ತಲಿನ ಸ್ಮಾರಕ, ತಾಣಗಳಿಗೆ ಲಿಂಕ್ ರಸ್ತೆ ಅಭಿವೃದ್ಧಿಯಾಗಲಿ.
ಕಿಷ್ಕಿಂದ ಟೂರ್ ಪ್ಯಾಕೇಜ್ ಸಿದ್ಧಪಡಿಸಿ ಪ್ರವಾಸಿಗರಿಗೆ ಗೈಡ್ಗಳ ಮೂಲಕ ಮಾಹಿತಿ ಸಿಗಲಿ.
ಸರ್ಕಾರದಿಂದಲೇ ಪ್ರವಾಸಿಗರಿಗೆ ಬೆಟ್ಟದ ಕೆಳಭಾಗದಲ್ಲಿ ಸಂಚಾರಕ್ಕೆ ವಾಹನದ ವ್ಯವಸ್ಥೆ ಇರಲಿ.
ರಾಮಾಯಣದ ಇತಿಹಾಸದ ಪಕ್ಷಿನೋಟ ಕನ್ನಡ, ಹಿಂದಿ, ಇಂಗ್ಲೀಷ್ ಭಾಷೆಯಲ್ಲಿರಲಿ.
ಬೆಟ್ಟದ ಕೆಳಗಡೆ ಅಂಜನಾದ್ರಿಯ ಸಮಗ್ರ ಇತಿಹಾಸದ ಪುಸ್ತಕ ಪ್ರವಾಸಿಗರಿಗೆ ಸಿಗುವಂತಾಗಲಿ.
ಅಂಜನಾದ್ರಿಯ ಐತಿಹಾಸಿಕತೆಯ ಪ್ರಚುರಕ್ಕೆ ರಾಷ್ಟ್ರೀಯ ಸೆಮಿನಾರ್ಗಳು ನಡೆಯಲಿ.
ಬೆಟ್ಟದ ಅಕ್ಕಪಕ್ಕದ ಸಣ್ಣಪುಟ್ಟ ಸ್ಮಾರಕಗಳ ಅಭಿವೃದ್ಧಿ ನಡೆಯಬೇಕಿದೆ.
ಬೆಟ್ಟದ ಬಳಿ ಗಾರ್ಡನ್, ಶೌಚಾಲಯ, ಕುಡಿಯುವ ನೀರು, ವಿಶ್ರಾಂತಿ ಕೊಠಡಿ ನಿರ್ಮಿಸಲಿ.
ಅಂಜನಾದ್ರಿ ಹಂಪಿ ಪ್ರಾ ಕಾರದಿಂದ ಬೇರ್ಪಟ್ಟು “ಹನುಮ ಜನ್ಮಭೂಮಿ-ಅಂಜನಾದ್ರಿ-ಕಿಷ್ಕಿಂದೆ
ಅಭಿವೃದ್ಧಿ ಪ್ರಾಧಿಕಾರ’ ಎಂದು ಸ್ಥಾಪನೆಯಾಗಲಿ.
ಅಂಜನಾದ್ರಿಯ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿ ವೇಗದಗತಿಯಲ್ಲಿ ಅಭಿವೃದ್ಧಿಯನ್ನು ಮಾಡಬೇಕಿದೆ. ಇದರಿಂದ ಜಿಲ್ಲೆಯ ಪ್ರವಾಸೋದ್ಯಮದ ಬೆಳವಣಿಗೆಗೆ ಸಹಕಾರಿಯಾಗಲಿದೆ. ಇಲ್ಲಿರುವ ಇತಿಹಾಸ, ರಾಮಾಯಣದ ಕಾಲದ ಸ್ಮಾರಕಗಳ ಪರಿಚಯ ಪ್ರವಾಸಿಗರಿಗೆ ವಿವಿಧ ಭಾಷೆಗಳಲ್ಲಿ ತಿಳಿಸುವ ಕೆಲಸವಾಗಲಿ. ರಾಮಾಯಣ ಥೀಮ್ ಪಾರ್ಕ್, ಪ್ರತ್ಯೇಕ ಪ್ರಾಧಿಕಾರ, ಪ್ರದಕ್ಷಣಾ ಪಥ ಸೇರಿದಂತೆ ಸರ್ವ ರೀತಿಯಲ್ಲೂ ಅಭಿವೃದ್ಧಿಗೆ ಒತ್ತು ನೀಡುವ ಅಗತ್ಯವಿದೆ.
ಡಾ| ಶರಣಬಸಪ್ಪ ಕೋಲ್ಕಾರ,
ಇತಿಹಾಸ ಸಂಶೋಧಕರು
ಅಂಜನಾದ್ರಿಯ ಅಭಿವೃದ್ಧಿಗೆ ಸಮಗ್ರವಾಗಿ ಯೋಜನೆ ರೂಪಿಸುತ್ತಿದ್ದೇವೆ. ಬೆಟ್ಟದ ಅಕ್ಕಪಕ್ಕದಲ್ಲಿನ ಪಟ್ಟಾ ಜಮೀನು ಸ್ವಾಧೀನ, ರಸ್ತೆಗಳ ಅಗಲೀಕರಣ ಮಾಡಿ ಹೆದ್ದಾರಿಗೆ ಸಂಪರ್ಕ ಕಲ್ಪಿಸುವುದು, ರೂಪ್ ವೇ ನಿರ್ಮಿಸುವುದು ಸೇರಿದಂತೆ ವಿವಿಧ ಪ್ರತ್ಯೇಕ ಪ್ರಸ್ತಾವನೆಗಳನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದೇವೆ. ಈಗಾಗಲೇ ಮಂಜೂರಾದ 20 ಕೋಟಿ ಅನುದಾನದಲ್ಲಿ ಕೆಲವೊಂದು ಕಾಮಗಾರಿ ನಡೆದಿವೆ. ಮುಂದೆ ವಿಶೇಷ ಯೋಜನೆಗೆ ಸಿದ್ಧತೆ ನಡೆಸಿದ್ದೇವೆ.
ವಿಕಾಸ್ ಕಿಶೋರ್, ಕೊಪ್ಪಳ ಜಿಲ್ಲಾಧಿಕಾರಿ
*ದತ್ತು ಕಮ್ಮಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ