ಚಿಂಚೋಳಿಯ ಚೆಟ್ಟಿನಾಡ್ ಕಂಪನಿ ಮೇಲೆ ಐಟಿ ದಾಳಿ
Team Udayavani, Dec 10, 2020, 7:05 PM IST
ಕಲಬುರಗಿ: ಚಿಂಚೋಳಿ ತಾಲೂಕಿನ ಕಲ್ಲೂರು ಗ್ರಾಮದಲ್ಲಿರುವ ಚೆಟ್ಟಿನಾಡ್ ಗ್ರೂಪ್ಸ್ನ ಸಿಮೆಂಟ್ ಕಂಪನಿ ಮೇಲೆ ಬುಧವಾರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಹಣಕಾಸಿಗೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
15ಕ್ಕೂ ಹೆಚ್ಚು ಅಧಿಕಾರಿಗಳ ತಂಡ ಬೆಳಗ್ಗೆ ಕಂಪನಿ ಮೇಲೆ ದಾಳಿ ನಡೆಸಿ, ಹಣಕಾಸು ಶಾಖೆ ಮತ್ತು ಮಾನವ ಸಂಪನ್ಮೂಲ ಶಾಖೆ ಬಂದ್ ಮಾಡಿ ಲೆಕ್ಕಪತ್ರಗಳ ಪರಿಶೀಲನೆ ನಡೆಸಿದರು. ಕಂಪನಿ ಅಧಿಕಾರಿಗಳು ಕ್ಟಾಟರ್ಸ್ನಲ್ಲಿ ಇರಬೇಕಾದರೆ ಮನೆಗಳಿಗೆ ಹೋಗಿ ಅವರನ್ನು ಕರೆದುಕೊಂಡು ಬಂದು ದಾಖಲೆಗಳ ಪರಿಶೀಲನೆ ಶುರು ಮಾಡಿದರು.
ತಮಿಳುನಾಡು ಮೂಲದ ಚೆಟ್ಟಿನಾಡ್ ಗ್ರೂಪ್ಸ್ ಶತಮಾನದ ಇತಿಹಾಸ ಹೊಂದಿದ್ದು, ಸಿಮೆಂಟ್ ಮತ್ತು ಸಿಲಿಕಾ ಉತ್ಪನಗಳಿಗೆ ಹೆಸರು ಮಾಡಿದೆ. ಅಲ್ಲದೇ, ಕಟ್ಟಡ ನಿರ್ಮಾಣ, ಸಾಗಾಟ, ಕಲ್ಲಿದ್ದಲು, ಇಂಧನ ಕ್ಷೇತ್ರಗಳಲ್ಲಿ ತೊಡಗಿದೆ. ಬುಧವಾರ
ಚಿಂಚೋಳಿಯ ಚೆಟ್ಟಿನಾಡ್ ಸಿಮೆಂಟ್ ಕಂಪನಿ ಸೇರಿ 50 ಕಡೆಗಳಲ್ಲಿ ಏಕಾಕಾಲಕ್ಕೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಇದನ್ನೂ ಓದಿ:ನಿವೃತ್ತ ಸೈನಿಕನ ಮೇಲೆ ಮಾರಣಾಂತಿಕ ಹಲ್ಲೆ : ನ್ಯಾಯಕ್ಕಾಗಿ ಮೊರೆಯಿಡುತ್ತಿರುವ ಮಡದಿ
ಬೆಂಗಳೂರು ಮತ್ತು ಚೆನ್ನೆ ಅಧಿಕಾರಿಗಳು ಈ ದಾಳಿ ಮಾಡಿದ್ದಾರೆ ಎನ್ನಲಾಗಿದೆ. ಬೆಂಗಳೂರಿಂದ ಕಲಬುರಗಿಗೆ ಬಂದು, ಇಲ್ಲಿಂದ ಬೆಳಗ್ಗೆ 5 ಗಂಟೆ ಸುಮಾರಿಗೆ ಕಾರಿನಲ್ಲಿ ತೆರಳಿದ್ದಾರೆ. 7 ಗಂಟೆ ಸುಮಾರಿಗೆ ಕಂಪನಿ ಮೇಲೆ ದಾಳಿ ಮಾಡಿದ್ದಾರೆ.
ಈ ವೇಳೆ ಕೆಲ ಅಧಿಕಾರಿಗಳು ಕಾರ್ಖಾನೆಯೊಳಗೆ ಇದ್ದರು. ಬೆಳಗಿನ ಶಿಫ್ಟ್ಗೆ ಹೋಗಬೇಕಿದ್ದ ಅಧಿಕಾರಿಗಳು ಮತ್ತು ಕಾರ್ಮಿಕರು ಐಟಿ ದಾಳಿ ವಿಷಯ ತಿಳಿದು ಮನೆಗಳಿಗೆ ವಾಪಸ್ ಬಂದಿದ್ದಾರೆ. ಕಾರ್ಖಾನೆಯೊಳಗೆ ತೆರಳಬೇಕಿದ್ದ ಕಾರು, ಲಾರಿಗಳನ್ನು ಹೊರಗಡೆ ನಿಲ್ಲಿಸಲಾಗಿತ್ತು. ಈ ಸಿಮೆಂಟ್ ಕಂಪನಿ 2012ರಲ್ಲಿ ಕಾರ್ಯಾರಂಭ ಮಾಡಿದ್ದು, ಇದು ಮೊದಲ ಐಟಿ ದಾಳಿಯಾಗಿದೆ.