ಇರಲಿ ಪ್ರತೀಕ್ಷಣ ಹೊಸತನಕ್ಕೆ ತೆರೆದುಕೊಳ್ಳುವ ತಹತಹ
Team Udayavani, Sep 28, 2020, 4:36 PM IST
ಬದುಕು ನಿಂತ ನೀರಾಗುವುದು ಬಹಳ ಬೇಗ. ನಮ್ಮ ಅರಿವಿಗೆ ಬಾರದಂತೆಯೇ ಅದು ಆಗಿಬಿಡುತ್ತದೆ. ನಮ್ಮೊಳಗನ್ನು ನಾವು ನಿರಂತರವಾಗಿ ಅವಲೋಕನ ಮಾಡಿಕೊಳ್ಳದೆ ಇದ್ದರೆ ಬಹಳ ಬೇಗನೆ ಕೂಪ ಮಂಡೂಕ ಗಳಾಗಿಬಿಡುತ್ತೇವೆ. ಬಾವಿಯೊಳಗಿನ ಕಪ್ಪೆ ಯಾಗುವುದು ಎಂದರೆ ಹೊಸತಾದದ್ದು, ನವೀನವಾಗಿರುವುದರ ಅರಿವು ಇಲ್ಲದೆ ಇರುವುದು. ಸದಾ ಬದಲಾಗುವ ಜಗತ್ತಿ ನೊಂದಿಗೆ ಸಾಂಗತ್ಯ ಕಳೆದುಕೊಳ್ಳುವುದು, ಹಿಂದುಳಿಯುವುದು. ಅದು ಯಾಕೆ ಆಗುತ್ತದೆ ಎಂದರೆ ನಾವಿರುವ ಬಾವಿಯೊಳಗಿಂದ ನಮಗೆ ಹೊರಗೆ ಬರಲು ಆಗುವುದಿಲ್ಲ. ಆ ಬಾವಿಯನ್ನು, ಸೀಮಿತವಾದ ಪರಿಧಿಯನ್ನು, ಗೋಡೆಗಳನ್ನು ನಾವೇ ಕಟ್ಟಿಕೊಳ್ಳು ವುದು ಇದರ ವೈಚಿತ್ರ್ಯ. ಅದರಿಂದ ಹೊರಬರಲಾಗದೆ ಸಿಕ್ಕಿಬೀಳುವುದು ಇನ್ನೂ ವಿಚಿತ್ರ.
ನಮಗೆ ನಾವೇ ತೋಡಿಕೊಂಡಿರುವ ಕೂಪದಿಂದ ಹೊರಬರುವುದು ಹೇಗೆ?
ಒಮ್ಮೆ ಸೂಫಿ ಸಂತ ಮುಲ್ಲಾ ನಾಸಿರುದ್ದೀನ್ ಶಿಷ್ಯನೊಬ್ಬ ಪ್ರಶ್ನಿಸಿದನಂತೆ, “ಈ ಜ್ಞಾನ ಮಾರ್ಗಕ್ಕೆ ನಿಮ್ಮನ್ನು ಕರೆತಂದದ್ದು ಯಾರು?’
“ಒಂದು ನಾಯಿ!’ ಮುಲ್ಲಾ ಹೇಳಿದರು. “ನಾನು ಆ ನಾಯಿಯನ್ನು ನೋಡುವಾಗ ಅದು ಬಾಯಾರಿ ಬಳಲಿ ಬೆಂಡಾಗಿ ಕೊಳದ ಬಳಿ ನಿಂತಿತ್ತು.’
“ಪ್ರತೀ ಬಾರಿ ಅದು ನೀರು ಕುಡಿಯಲು ಮುಂದೆ ಬಂದಾಗಲೂ ಕೊಳದ ನೀರಿನಲ್ಲಿ ಮುಳುಗಿದ್ದ ಕನ್ನಡಿ ತುಂಡಿನಲ್ಲಿ ಆ ನಾಯಿಗೆ ತನ್ನದೇ ಪ್ರತಿಬಿಂಬ ಕಾಣಿಸುತ್ತಿತ್ತು. ಇನ್ನೊಂದು ನಾಯಿ ಅಲ್ಲಿದೆ ಎಂದುಕೊಂಡು ಅದು ಹೆದರುತ್ತಿತ್ತು.’
“ಹೆದರಿಕೆ ತುಂಬಾ ಹೊತ್ತು ನಾಯಿಯನ್ನು ಆವರಿಸಿತ್ತು. ಕೊನೆಗೆ ತೃಷೆಯನ್ನು ತಡೆಯಲು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ಉಂಟಾದಾಗ ನಾಯಿ ಆದದ್ದಾಗಲಿ ಎಂದು ಕೊಳಕ್ಕೆ ಜಿಗಿಯಿತು. ಹಾಗೆ ಅದು ಹಾರಿದ್ದೇ ತಡ, ನೀರು ಅಲ್ಲೋಲಕಲ್ಲೋಲವಾಗಿ ಅದುವರೆಗೆ ಅದನ್ನು ಹೆದರಿಸುತ್ತಿದ್ದ ನಾಯಿಯ ಪ್ರತಿಬಿಂಬ ಚೆಲ್ಲಾಪಿಲ್ಲಿಯಾಯಿತು.’
“ನಾನು ಇರುವುದು ಆ ನಾಯಿಯ ಸ್ಥಿತಿ ಯಲ್ಲಿ ಮತ್ತು ನನ್ನ ವಿಕಾಸಕ್ಕೆ ಅಡ್ಡಿ ನಾನೇ ಎಂಬುದು ಅರಿವಾದ ತತ್ಕ್ಷಣ ನನ್ನ ಜೀವನದ ದಾರಿ ಬದಲಾಯಿತು’ ಎಂದು ಮಾತು ಮುಗಿಸಿದರು ಮುಲ್ಲಾ ನಾಸಿರುದ್ದೀನ್.
ನಾವು ಕಟ್ಟಿಕೊಂಡಿರುವ ಚೌಕಟ್ಟಿನಿಂದ ಹೊರಬರಲು ಇರುವ ಅಡ್ಡಿ ನಾವೇ. ಹತ್ತಾರು ವರ್ಷಗಳಿಂದ ಒಂದೇ ಉದ್ಯೋಗದಲ್ಲಿ ಇರುತ್ತೇವೆ, ಹೊಸತೇನಾದರೂ ಮಾಡಲು ಹೊರಟರೆ ಸೋಲು ಉಂಟಾಗುವ ಭಯ ಕಾಡುತ್ತದೆ. ಹಾಗಾಗಿ ಅತ್ತ ಯೋಚಿಸುವುದೂ ಇಲ್ಲ. ಬಂದಿರುವ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು, ಅದಕ್ಕೆ ಒಗ್ಗಿಕೊಳ್ಳಲು “ನನಗೆ ವಯಸ್ಸಾಯಿತು’ ಎಂಬ ಅಳುಕು ಅಡ್ಡಿ ಯಾಗುತ್ತದೆ. ವ್ಯವಹಾರದಲ್ಲಿ ನಷ್ಟವಾದರೆ ಬದುಕು ಮುಗಿಯಿತು ಎಂದು ಕೊಳ್ಳುತ್ತೇವೆ, ಜೀವನಕ್ಕೆ ನೂರು ದಾರಿಗಳು ತೆರೆದಿರು ವುದು ನಮಗೆ ಗೊತ್ತಿರುವುದಿಲ್ಲ.
ಬದುಕು ಚೆನ್ನಾಗಿರಲು, ಸದಾ ಲವಲವಿಕೆಯಿಂದಿರಲು ಪ್ರತೀ ಕ್ಷಣವೂ ನಮ್ಮಲ್ಲಿ ಆಗುವುದಾಗಲಿ ಎಂದುಕೊಂಡು ನೀರಿಗೆ ಜಿಗಿದ ನಾಯಿಯಂತಹ ತುರ್ತು, ಜಿಗಿ ಯುವ ಮನೋಭಾವ ಇರಬೇಕು. ಪ್ರತೀ ಕ್ಷಣವೂ ಹೊಸತನ್ನು ಎದುರು ನೋಡುವ ತಹತಹವಿರಬೇಕು. ನವೀನವಾದುದಕ್ಕೆ ತುಡಿಯುವ ಮನೋಭಾವವನ್ನು ಕಳೆದುಕೊಳ್ಳಬಾರದು.
ಎದುರು ಕಂದಕವಿದೆ ಎಂದುಕೊಳ್ಳಿ, “ನಾನು ಬೀಳುತ್ತೇನೆ’ ಎಂದುಕೊಂಡು ಹಾರುವಾತ ಬಿದ್ದೇ ಬಿಡುತ್ತಾನೆ. “ಆಚೆ ದಡ ಸೇರುತ್ತೇನೆ’ ಎಂಬ ವಿಶ್ವಾಸವನ್ನು ಹೃದಯದಲ್ಲಿ ತುಂಬಿಕೊಂಡು ದೀರ್ಘ ಉಸಿರೆಳೆದು, ಎಲ್ಲ ಶಕ್ತಿಸಾಮರ್ಥ್ಯಗಳನ್ನು ಕ್ರೋಡೀಕರಿಸಿ ಹಾರುವವನು ಖಂಡಿತ ಅದನ್ನು ದಾಟುತ್ತಾನೆ.
(ಸಂಗ್ರಹ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Students Notes: ಸ್ಕ್ರೀನ್ ಶಾರ್ಟ್ಗಳೆಂದು ಪುಸ್ತಕವಾಗದಿರಲಿ
ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ
Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು