ಕಾಸರಗೋಡು : ನಾಮಪತ್ರಿಕೆ ಸಲ್ಲಿಕೆಗೆ ಮಾರ್ಚ್ 19 ಕೊನೆಯ ದಿನ
Team Udayavani, Mar 15, 2021, 7:50 PM IST
ಕಾಸರಗೋಡು : ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಮಾರ್ಚ್ 19 ಕೊನೆಯ ದಿನವಾಗಿದ್ದು ಇನ್ನು ನಾಲ್ಕು ದಿನಗಳು ಮಾತ್ರ ಉಳಿದಿದೆ, ಬೆಳಗ್ಗೆ 11ರಿಂದ ಮಧ್ಯಾಹ್ನ 3 ಗಂಟೆ ವರೆಗೆ ಚುನಾವಣಾಧಿಕಾರಿಗೆ ನಾಮಪತ್ರಿಕೆ ಸಲ್ಲಿಸಬಹುದು. ಈ ಬಾರಿ ಆನ್ಲೈನ್ ಮೂಲಕವೂ ನಾಮಪತ್ರಿಕೆ ಸಲ್ಲಿಸುವ ಸೌಲಭ್ಯ ಏರ್ಪಡಿಸಲಾಗಿದೆ.
http://suvidha.eci.gov.in/suvidhaac/public/login ಎಂಬ ಲಿಂಕ್ ಮೂಲಕ ಆನ್ಲೈನ್ ನಲ್ಲೂ ನಾಮಪತ್ರಿಕೆ ಸಲ್ಲಿಸಬಹುದಾಗಿದೆ.
ಯಾರು ಚುನಾವಣೆಗೆ ನಿಲ್ಲಲು ಅರ್ಹರು :
ಅರ್ಹತೆಗಳು : ನಾಮಪತ್ರಿಕೆ ಸೂಕ್ಷ್ಮ ತಪಾಸಣೆ ನಡೆಯುವ ದಿನ ಅಭ್ಯರ್ಥಿಯ ವಯೋಮಾನ 25 ವರ್ಷಕ್ಕಿಂತ ಕಡಿಮೆಯಾಗಿರಬಾರದು, ಪರಿಶಿಷ್ಟ ಜಾತಿ-ಪಂಗಡ ಮೀಸಲಾತಿ ಕ್ಷೇತ್ರದಲ್ಲಿ ಆ ಜನಾಂಗಗಳಿಗೆ ಸೇರಿರುವ ವ್ಯಕ್ತಿ ಮಾತ್ರ ನಾಮಪತ್ರಿಕೆ ಸಲ್ಲಿಸಬೇಕು.
ಒಬ್ಬ ವ್ಯಕ್ತಿ ಸಾಮಾನ್ಯ ಸ್ಥಾನಕ್ಕೆ ಸ್ಪರ್ಧಿಸುವ ಆಸಕ್ತರಾಗಿದ್ದಲ್ಲಿ, ಅವರ ಹೆಸರು ರಾಜ್ಯದ ಯಾವುದಾದರೂ ವಿಧಾನಸಭೆ ಕ್ಷೇತ್ರದ ಮತದಾತರ ಪಟ್ಟಿಯಲ್ಲಿ ಅಳವಡಗೊಂಡಿರಬೇಕು.
ಅನರ್ಹತೆಗಳು : ಅಭ್ಯರ್ಥಿ ಭಾರತೀಯ ಸರಕಾರದ ಯಾ ರಾಜ್ಯ ಸರಕಾರದ ವ್ಯಾಪ್ತಿಯ ಕಚೇರಿಗಳಲ್ಲಿ ನೌಕರಿ ಹೊಂದಿರಕೂಡದು.
ಬೌದ್ಧಿಕ ನ್ಯೂನತೆ ಹೊಂದಿರುವ ವ್ಯಕ್ತಿಯೆಂದು ನ್ಯಾಯಾಲಯ ತೀರ್ಮಾನ ನೀಡಿರುವ ವ್ಯಕ್ತಿ. ಆರ್ಥಿಕವಾಗಿ ದಿವಾಳಿಯಾಗಿರುವ ವ್ಯಕ್ತಿಯೆಂದು ನ್ಯಾಯಾಲಯ ತೀರ್ಪು ನೀಡಿರುವ ವ್ಯಕ್ತಿ. ವಿದೇಶಿಯಾಗಿರುವ ವ್ಯಕ್ತಿ. ಸಂಸತ್ತು ಸಿದ್ಧಪಡಸಿರುವ ಯಾವುದೇ ಕಾನೂನು ಪ್ರಕಾರ ಅನರ್ಹತೆ ಹೊಂದಿರುವವರು.
ನಾಮಪತ್ರಿಕೆಯೊಂದಿಗೆ ಸಲ್ಲಿಸಿರುವ ದಾಖಲೆಗಳಲ್ಲಿ ಸುಳ್ಳು, ನಕಲಿ ಮಾಹಿತಿಗಳಿದ್ದಲ್ಲಿ, ಪರಿಶಿಷ್ಟ ಜಾತಿ ಯಾ ಪಂಗಡಕ್ಕೆ ಸೇರಿದ ವ್ಯಕ್ತಿಯಲ್ಲ ಎಂಬುದು ತದನಂತರದ ದಿನಗಳಲ್ಲಿ ಖಚಿತಗೊಂಡಲ್ಲಿ.
ನೆನಪಿರಲಿ : ಅಭ್ಯರ್ಥಿಯೊಬ್ಬರ ಹೆಸರು ಸರಿಯಾದ ಕ್ರಮದಲ್ಲಿ ನೋಂದಣಿಯಾಗಿದೆಯೇ ಹಾಗೂ ಮತದಾತರ ಪಟ್ಟಿಯಲ್ಲಿ ಫೂಟೋ ಸರಿಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ಹೆಸರಿನಲ್ಲಿ ಅಕ್ಷರದೋಷ, ತಂದೆ ಯಾ ತಾಯಿಯ ಹೆಸರು, ಪತಿಯ ಹೆಸರಿನಲ್ಲಿ ದೋಷಗಳಿದ್ದಲ್ಲಿ ಸರಿಪಡಿಸುವಲ್ಲಿ ವಿಳಂಬ ಸಲ್ಲದು. ಯಥಾ ಸಮಯದಲ್ಲಿ ಲೋಪ ಸರಿಪಡಿಸದಿದ್ದಲ್ಲಿ ನಾಮ ಪತ್ರಿಕೆ ಸೂಕ್ಷ್ಮ ತಪಾಸಣೆ ವೇಳೆ ಪ್ರತಿಸ್ಪರ್ಧಿ ಆಕ್ಷೇಪ ವ್ಯಕ್ತಪಡಿಸಬಹುದಾಗಿದೆ.