ಕಾಸರಗೋಡು: ಇಬ್ಬರಲ್ಲಿ ಸೋಂಕು ದೃಢ
Team Udayavani, Apr 30, 2020, 10:07 AM IST
ಕಾಸರಗೋಡು: ಜಿಲ್ಲೆಯಲ್ಲಿ ಬುಧವಾರ ಇಬ್ಬರಿಗೆ ಕೋವಿಡ್ ಸೋಂಕು ದೃಢಗೊಂಡಿದೆ. ಇದೇ ವೇಳೆ ಮೂವರು ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಈ ವರೆಗೆ 178 ಮಂದಿಗೆ ಸೋಂಕು ಬಾಧಿಸಿದ್ದು, 165 ಮಂದಿ ಗುಣಮುಖರಾಗಿದ್ದಾರೆ. 13 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾಸರಗೋಡಿನಲ್ಲಿ ಕೋವಿಡ್ ಬಾಧಿಸಿದ ವ್ಯಕ್ತಿಗಳಲ್ಲೊಬ್ಬರು ದೃಶ್ಯ ಮಾಧ್ಯಮ ಸಿಬಂದಿ ಹಾಗೂ ಇನ್ನೋರ್ವ 29ರ ಹರೆಯದ ಚೆಮ್ನಾಡ್ ನಿವಾಸಿಯಾಗಿದ್ದಾರೆ.
ಗುಣಮುಖರಾದ ಮೂವರು ಉಕ್ಕಿನಡ್ಕದಲ್ಲಿರುವ ಕಾಸರಗೋಡು ಮೆಡಿಕಲ್ ಕಾಲೇಜಿನಿಂದ ಬಿಡುಗಡೆಗೊಂಡಿದ್ದಾರೆ.
ಹಾಟ್ಸ್ಪಾಟ್ಗಳು
ಕಾಸರಗೋಡು ಜಿಲ್ಲೆಯಲ್ಲಿ ಕಾಂಞಂಗಾಡು ನಗರಸಭೆ, ಕಾಸರಗೋಡು ನಗರಸಭೆ, ಕುಂಬಳೆ, ಮಧೂರು, ಚೆಮ್ನಾಡ್, ಚೆಂಗಳ, ಮೊಗ್ರಾಲ್ ಪುತ್ತೂರು, ಮುಳಿಯಾರು ಗ್ರಾಮ ಪಂಚಾಯತ್ಗಳಲ್ಲದೆ ಅಜಾನೂರು ಗ್ರಾಮ ಪಂಚಾಯತ್ ಕೂಡ ಹಾಟ್ ಸ್ಪಾಟ್ ಪಟ್ಟಿಯಲ್ಲಿ ಸೇರಿದೆ.
ಕೇರಳದಲ್ಲಿ 10 ಮಂದಿಗೆ ಸೋಂಕು
ಕೇರಳ ರಾಜ್ಯದಲ್ಲಿ ಬುಧವಾರ 10 ಮಂದಿಯಲ್ಲಿ ಸೋಂಕು ದೃಢಗೊಂಡಿದ್ದು, 10 ಮಂದಿ ಗುಣಮುಖರಾಗಿದ್ದಾರೆ. ಕೊಲ್ಲಂ ಜಿಲ್ಲೆಯಲ್ಲಿ 6, ತಿರುವನಂತಪುರ ಮತ್ತು ಕಾಸರ ಗೋಡು ಜಿಲ್ಲೆಯಲ್ಲಿ ತಲಾ ಇಬ್ಬರನ್ನು ಸೋಂಕು ಬಾಧಿಸಿದೆ. ಬಾಧಿತರಲ್ಲಿ ಮೂವರು ಆರೋಗ್ಯ ಕಾರ್ಯಕರ್ತರು. ಕಾಸರಗೋಡಿ ನಲ್ಲಿ ದೃಶ್ಯಮಾಧ್ಯಮ ಸಿಬಂದಿಗೆ ರೋಗ ದೃಢಗೊಂಡಿದೆ. ಕೊಲ್ಲಂನ ಐವರಿಗೆ ಸಂಪರ್ಕದಿಂದ ರೋಗ ಬಾಧಿಸಿದೆ. ಕೊಲ್ಲಂನಲ್ಲಿ ರೋಗ ಬಾಧಿಸಿದ ಒಬ್ಬರು ಆಂಧ್ರದಿಂದಲೂ ತಿರುವ ನಂತಪುರದ ಒಬ್ಬರು ತಮಿಳುನಾಡಿನಿಂದಲೂ ಬಂದವರು. ಕಾಸರಗೋಡಿನಲ್ಲಿ ಇಬ್ಬರಿಗೆ ಸಂಪರ್ಕದ ಮೂಲಕ ಸೋಂಕು ಹರಡಿದೆ.
ಜಿಲ್ಲಾಧಿಕಾರಿಗೆ ಕ್ವಾರಂಟೈನ್
ಕಾಸರಗೋಡು: ಜಿಲ್ಲೆಯ ದೃಶ್ಯ ಮಾಧ್ಯಮ ವರದಿಗಾರರೊಬ್ಬರಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ| ಡಿ. ಸಜಿತ್ಬಾಬು, ಅವರ ವಾಹನ ಚಾಲಕ ಮತ್ತು ಗನ್ಮ್ಯಾನ್ ತಮ್ಮ ಮನೆಗಳಲ್ಲೇ ನಿಗಾದಲ್ಲಿದ್ದಾರೆ.
ಎ. 19ರಂದು ಆ ವರದಿಗಾರ ಜಿಲ್ಲಾಧಿಕಾರಿಯ ಸಂದರ್ಶನ ನಡೆಸಿದ್ದರು. ನಾನು ಗಂಟಲ ದ್ರವ ಪರೀಕ್ಷೆ ಮಾಡಿಸಿದ್ದು ನೆಗೆಟಿವ್ ಫಲಿತಾಂಶ ಬಂದಿದೆ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಸ್ವಯಂ ಕ್ವಾರಂಟೈನ್ಗೆ ಒಳಗಾಗಿದ್ದೇನೆ ಎಂದು ಅವರು ಹೇಳಿದ್ದಾರೆ.