ಕಾಶ್ಮೀರಿ ವಿದ್ಯಾರ್ಥಿಗಳ ಸಮಸ್ಯೆ ನಿವಾರಿಸಲು ಮನವಿ: ಶೋಭಾ ಕರಂದ್ಲಾಜೆ
Team Udayavani, Sep 25, 2019, 7:15 PM IST
ಬೆಂಗಳೂರು: ಕಾಶ್ಮೀರದಲ್ಲಿ ತಲೆದೋರಿರುವ ಕೆಲ ಸಮಸ್ಯೆಗಳು ತಾತ್ಕಾಲಿಕವಾಗಿದ್ದು, ರಾಜ್ಯದ ಕೆಲವು ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಕಾಶ್ಮೀರಿ ವಿದ್ಯಾರ್ಥಿಗಳ ಹಾಸ್ಟೆಲ್ ಶುಲ್ಕ ಪಾವತಿ ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಲಾಗುವುದು ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಕೇಂದ್ರ ಸರಕಾರವು ದೇಶದ ಹಿತದೃಷ್ಟಿಯಿಂದ ಮತ್ತು ಕಾಶ್ಮೀರದ ಜನರಿಗೆ ಉತ್ತಮ ಭವಿಷ್ಯವನ್ನು ಖಾತರಿಪಡಿಸುವ ಸಲುವಾಗಿ ಸಂವಿಧಾನದ 370ನೇ ವಿಧಿ ರದ್ದುಪಡಿಸುವ ದಿಟ್ಟ ಕ್ರಮ ಕೈಗೊಂಡಿದೆ. ಈ ಕ್ರಮಕ್ಕೆ ಹಲವು ರಾಷ್ಟ್ರಗಳಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಕೈಗೊಂಡ ಅಮೆರಿಕ ಪ್ರವಾಸದಲ್ಲಿ ಅನಿವಾಸಿ ಭಾರತೀಯರು ಕೂಡ ಈ ದಿಟ್ಟ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವುದು ಗಮನಾರ್ಹ.
ಕಾಶ್ಮೀರದ ಸಮಗ್ರ ಅಭಿವೃದ್ಧಿಗೆ ರೂಪಿಸಲಾಗುತ್ತಿರುವ ಯೋಜನೆಗಳು ಅನುಷ್ಠಾನಕ್ಕೆ ಬಂದ ಅನಂತರ ಕಾಶ್ಮೀರದಲ್ಲಿ ಹಿಂದಿನ ವೈಭವ ಮರುಕಳಿಸಲಿದೆ ಎಂಬ ನಂಬಿಕೆ ದೇಶದ ಜನರಲ್ಲಿದೆ ಎಂದವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.