ಪತ್ನಿ ಜೊತೆ ಅನೈತಿಕ ಸಂಬಂಧ ಶಂಕೆಯಿಂದ ಯುವಕನ ಹತ್ಯೆ: ಆರೋಪಿ ಬಂಧನ
Team Udayavani, Aug 16, 2021, 3:19 PM IST
ವಿಜಯಪುರ: ತನ್ನ ಪತ್ನಿಯ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಶಂಕಿಸಿದ ವ್ಯಕ್ತಿಯೊಬ್ಬ ಯುವಕನನ್ನು ಸಂಬಂಧಿಗಳ ಜೊತೆ ಸೇರಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಾಳಿಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯ ಆ.12 ರಂದು ಯಮನಪ್ಪ ಅಲಿಯಾಸ್ ಕುಮಾರ ಮಡಿವಾಳ ಎಂಬ ವ್ಯಕ್ತಿಯ ಹತ್ಯೆ ಆಗಿತ್ತು. ಮೃತನ ಪತ್ನಿ ದೀಪಾ ಮಡಿವಾಳ ನೀಡಿದ ದೂರಿನಂತೆ ತಾಳಿಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬಸವನಬಾಗೇವಾಡಿ ಡಿಎಸ್ ಪಿ ಅರುಣ್ ಕುಮಾರ ಕೋಳೂರ ನೇತೃತ್ವದಲ್ಲಿ ಮುದ್ದೇಬಿಹಾಳ ಸಿಪಿಐ ಆನಂದ ವಾಘಮೋಡೆ, ಎಸ್ ಐ ವಿನೋದ ದೊಡಮನಿ ಹಾಗೂ ಪೊಲೀಸ್ ಸಿಬ್ಬಂದಿ ತನಿಖಾ ತಂಡ ರಚಿಸಲಾಗಿತ್ತು.
ಇದನ್ನೂ ಓದಿ:ಅಜ್ಜಿಯ ಹಲ್ಲಿನ ಸೆಟ್ ಹಾಳು ಮಾಡಿದ ಹಸುಳೆಯ ಹತ್ಯೆ: ಆರೋಪಿ ಬಂಧನ
ಸದರಿ ಪ್ರಕರಣದಲ್ಲಿ ಪ್ರಮುಖ ಆರೋಪಿ ವೀರೇಶ ಮಡಿವಾಳರ ಇನ್ನಿಬ್ಬರು ಆರೋಪಿಗಳಾದ ಮಡಿವಾಳಪ್ಪ ಮಲ್ಲಪ್ಪ ಮಡಿವಾಳರ, ಕಾಶಿನಾಥ ತಮ್ಮಣ್ಣ ಮಡಿವಾಳರ ಇವರೊಂದಿಗೆ ಸೇರಿ ಯಮನಪ್ಪನನ್ನು ಹತ್ಯೆ ಮಾಡುವ ಸಂಚು ರೂಪಿಸಿದ್ದರು.
ಹಣ ಕೊಡುವುದಾಗಿ ಆ.6 ರಂದು ಇಲಕಲ್ಲ ತಾಲೂಕ ಇಂಗಳಗಿ ಗ್ರಾಮದ ಯಮನಪ್ಪನನ್ನು ತಾಳಿಕೋಟೆ ತಾಲೂಕಿನ ತಮ್ಮ ಸ್ವಗ್ರಾಮ ಬಳಗಾನೂರಗೆ ಕರೆಸಿಕೊಂಡಿದ್ದರು. ಗುತ್ತಿಹಾಳ ಬಳಿ ಇರುವ ತೋಟದಲ್ಲಿ ರಾತ್ರಿ ಮದ್ಯ ಸೇವಿಸಿದ್ದು, ನಂತರ ಕುಡಗೋಲಿನಿಂದ ಕತ್ತು ಕೊಯ್ದು ಹತ್ಯೆ ಮಾಡಿದ್ದಾರೆ.
ಬಳಿಕ ಶವವನ್ನು ಗೋಣಿ ಚೀಲದಲ್ಲಿ ತುಂಬಿ ಮುದ್ದೇಬಿಹಾಳ ತಾಲೂಕಿನ ತಂಗಡಗಿ ಬಳಿಯ ಕೃಷ್ಣಾ ನದಿ ಸೇತುವೆ ಮೇಲಿಂದ ನದಿಗೆ ಎಸೆದು, ಸಾಕ್ಷಿ ನಾಶ ಮಾಡಿ ಪರಾರಿ ಆಗಿದ್ದರು.
ಸಾಕ್ಷಿ ನಾಶ ಮಾಡಿದ್ದರೂ ಆರೋಪಿಗಳ ಜಾಡು ಹಿಡಿದ ಪೊಲೀಸ್ ತನಿಖಾ ತಂಡ ಪ್ರಮುಖ ಆರೋಪಿ ವೀರೇಶನನ್ನು ಬಂಧಿಸಿದ್ದಾಗಿ ಎಸ್ಪಿ ಆನಂದಕುಮಾರ ಪತ್ರಿಕಾಗೋಷ್ಠಿಯಲ್ಲಿ ಪ್ರಕರಣದ ಮಾಹಿತಿ ನೀಡಿದರು.