ಬಿಜೆಪಿ 8ಕ್ಕೂ ಹೆಚ್ಚು ಸ್ಥಾನ ಗೆದ್ದರೆ ಸಿದ್ದು ವಿಪಕ್ಷ ಸ್ಥಾನಕ್ಕೆ ರಾಜಿನಾಮೆ ಕೊಡ್ತಾರಾ ?
ಸಿದ್ದರಾಮಯ್ಯ ಹೇಳಿದ್ದಲ್ಲವೂ ಉಲ್ಟಾ ಆಗಿವೆ
Team Udayavani, Nov 26, 2019, 6:15 PM IST
ಕೊಪ್ಪಳ: ಬಿಜೆಪಿ 8ಸ್ಥಾನ ಗೆಲ್ಲದಿದ್ದರೆ ಅಧಿಕಾರ ಕಳೆದುಕೊಳ್ಳಲಿದೆ, ಸಿಎಂ ಯಡಿಯೂರಪ್ಪ ರಾಜಿನಾಮೆ ಕೊಡ್ತಾರೆ ಎಂದು ಹೇಳಿರುವ ಸಿದ್ದರಾಮಯ್ಯ, 8ಕ್ಕೂ ಹೆಚ್ಚು ಸ್ಥಾನ ನಾವು ಗೆದ್ದರೆ ತಮ್ಮ ವಿಪಕ್ಷ ಸ್ಥಾನಕ್ಕೆ ರಾಜಿನಾಮೆ ಕೊಡ್ತಾರಾ ? ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಪ್ರತಿ ಸವಾಲ್ ಹಾಕಿದರು.
ಕೊಪ್ಪಳದ ಮುನಿರಾಬಾದ್ ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಈ ಹಿಂದೆ ಸಿದ್ದರಾಮಯ್ಯ ಅವರು ಹೇಳಿದ್ದೆಲ್ಲವೂ ಉಲ್ಟಾ ಆಗಿದೆ. ಮೋದಿ ಮತ್ತೆ ಪ್ರಧಾನಿ ಆಗಲ್ಲ , ಬಿಜೆಪಿ ಅಧಿಕಾರಕ್ಕೆ ಬರಲ್ಲ , ಯಡಿಯೂರಪ್ಪ ಸಿಎಂ ಆಗಲ್ಲ , ಕುಮಾರಸ್ವಾಮಿ ಅವರಪ್ಪನಾಣೆ ಸಿಎಂ ಆಗಲ್ಲ ಎಂದಿದ್ರು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 2 ಸೀಟೂ ಗೆಲ್ಲಲ್ಲ ಎಂದಿದ್ರು 25 ಸ್ಥಾನ ಬಂದವು. ನಾನು ಮತ್ತೆ ಸಿಎಂ ಆಗ್ತೇನೆ ಎಂದಿದ್ರು, 37 ಸಾವಿರ ಓಟಿನಲ್ಲಿ ಸೋತರು. ಹೀಗೆ ಅವರು ಹೇಳಿದ್ದೆಲ್ಲವೂ ಉಲ್ಟಾ ಆಗಿದೆ. ಈಗ ಬಿಜೆಪಿ 8 ಸ್ಥಾನಕ್ಕಿಂತ ಹೆಚ್ಚು ಸ್ಥಾನ ಗೆಲ್ಲಲ್ಲ ಎಂದೆನ್ನುತ್ತಿದ್ದಾರೆ. 8 ಸ್ಥಾನಗಳನ್ನು ಗೆಲ್ಲಲಾಗದಿದ್ದರೆ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜಿನಾಮೆ ಕೊಡ್ತಾರಾ ಎಂದು ಸವಾಲ್ ಹಾಕಿದ್ದಾರೆ. ಒಂದು ವೇಳೆ 8ಕ್ಕೂ ಹೆಚ್ಚು ಸ್ಥಾನ ಬಿಜೆಪಿ ಗೆದ್ದರೆ ಸಿದ್ದರಾಮಯ್ಯ ಅವರು ವಿಪಕ್ಷ ಸ್ಥಾನಕ್ಕೆ ರಾಜಿನಾಮೆ ಕೊಡ್ತಾರಾ ಎಂದು ತಿರುಗೇಟಿನ ಮೂಲಕ ಪ್ರತಿ ಸವಾಲ್ ಹಾಕಿದರು.
ಇನ್ನೂ ಉಪ ಚುನಾವಣೆಯಲ್ಲಿ ಬಿಜೆಪಿ ಇಂತಿಷ್ಟೇ ಸ್ಥಾನ ಗೆಲ್ಲಲಿವೆ ಎನ್ನುವುದಕ್ಕಿಂತ ಹೆಚ್ಚಿನ ಸ್ಥಾನವನ್ನು ನಾವು ಗೆಲ್ಲಲಿದ್ದೇವೆ. 17 ಶಾಸಕರು ನಮ್ಮನ್ನು ನಂಬಿ ಬಂದಿದ್ದಾರೆ. 15 ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲಿದ್ದೇವೆ ಎಂದರಲ್ಲದೇ, ಮಾಜಿ ಸಿಎಂ ಕುಮಾರಸ್ವಾಮಿ ಅವರು ಅನರ್ಹ ಶಾಸಕರನ್ನು ಸೋಲಿಸುವುದೇ ನಮ್ಮ ಕೆಲಸ ಎಂದುಕೊಂಡು ಸುತ್ತುತ್ತಿದ್ದಾರೆ. ಈ ಹಿಂದೆ ನಡೆದ ಚುನಾವಣೆಯಲ್ಲಿ ತನ್ನ ಅಪ್ಪ ಹಾಗೂ ಮಗನನ್ನೆ ಗೆಲ್ಲಿಸಿಕೊಳ್ಳಲು ಅವರಿಂದ ಸಾಧ್ಯವಾಗಲಿಲ್ಲ. ಅಂತವರು ಅನರ್ಹ ಶಾಸಕರನ್ನು ಹೇಗೆ ಸೋಲಿಸುತ್ತಾರೆ. ರಾಜಕಾರಣದಲ್ಲಿ ಶಕ್ತಿ ಇಲ್ಲದವರು ಹೀಗೆಲ್ಲ ಮಾತನಾಡುತ್ತಾರೆ ಎಂದು ಲೇವಡಿ ಮಾಡಿದರು.
ಮಹಾರಾಷ್ಟ್ರ ರಾಜಕಾರಣದ ಬೆಳವಣಿಗೆಯಲ್ಲಿ ಅತಂತ್ರ ಸ್ಥಿತಿ ಬಂದಿದೆ. ಚುನಾವಣೆಯ ಪೂರ್ವದಲ್ಲಿ ಬಿಜೆಪಿ ಜೊತೆ ಶಿವಸೇನೆ ಸೇರಿತ್ತು. ಆದರೆ ಚುನಾವಣೆ ಬಳಿಕ ಶಿವಸೇನೆ ಕಾಂಗ್ರೆಸ್, ಎನ್ಸಿಪಿ ಜೊತೆ ಮೈತ್ರಿ ಮಾಡಿಕೊಳ್ಳಲು ಶುರು ಮಾಡಿತು. ಕಾಂಗ್ರೆಸ್ ಹಿಂದುಗಳ ಪಕ್ಷದ ಜೊತೆ ನಾವು ಮೈತ್ರಿ ಮಾಡಿಕೊಳ್ಳಲ್ಲ ಎಂದಿತ್ತು. ಈಗ ಅವರೊಟ್ಟಿಗೆ ಮೈತ್ರಿಗೆ ಹೊರಟಿದೆ. ಈ ಹಿಂದೆ ಇದ್ದ ಕಾಂಗ್ರೆಸ್ ಈಗಿಲ್ಲ. ಈಗ ಸೋನಿಯಾ ಗಾಂಧಿ ಕಾಲದ ಕಾಂಗ್ರೆಸ್ ಆಗಿದೆ. ಈಗ ಕಾಂಗ್ರೆಸ್ ಅವಕಾಶವಾದಿ ರಾಜಕಾರಣ ಮಾಡಲು ಹೊರಟಿದೆ.
ಪೂರ್ಣ ಬಹುಮತ ಮಹಾರಾಷ್ಟ್ರದಲ್ಲಿ ನಮಗಿಲ್ಲ. ಎನ್ಸಿಪಿ ನಮ್ಮೊಟ್ಟಿಗೆ ಬರತ್ತದೆ ಎಂಬ ವಿಶ್ವಾಸವಿತ್ತು. ಈಗ ನಮ್ಮೊಟ್ಟಿಗೆ ಬರಲ್ಲ ಎಂದರೆ ಏನ್ ಮಾಡೋಕಾಗುತ್ತೆ ನಮ್ಮಷ್ಟಕ್ಕೆ ನಾವು ಇರುತ್ತೇವೆ ಎಂದರು.
ಇನ್ನು ರಾಜಕಾರಣವೇ ಗೊಂದಲವಾಗಿರುತ್ತದೆ. ಯಾವ ಪಕ್ಷದಲ್ಲಿ ಗೊಂದಲ ಇಲ್ಲ. ಕೆಲವೊಂದು ಕ್ಷೇತ್ರಗಳಲ್ಲಿ ಗೊಂದಲ ಇವೆ. ಒಂದು ಕುಟುಂಬ ಅಂದರೆ ಗೊಂದಲ ಇರುತ್ತೆ ಅಲ್ವಾ. ಹಾಗೆ ಕೆಲವೊಂದು ಕ್ಷೇತ್ರದಲ್ಲಿ ಗೊಂದಲ ಇವೆ. ಅವೆಲ್ಲವನ್ನು ಸರಿ ಮಾಡುವ ಕೆಲಸ ಮಾಡಿದ್ದೇವೆ. ಈ ಹಿಂದೆ ಬಿಜೆಪಿ, ಜನ ಸಂಘ ಅಂದರೆ ಅಭ್ಯರ್ಥಿಗಳೇ ಸ್ಪರ್ಧೆಗೆ ಮುಂದಾಗುತ್ತಿರಲಿಲ್ಲ. ಠೇವಣಿ ಹೋಗುತ್ತೆ ಎಂದು ಬರುತ್ತಿರಲಿಲ್ಲ. ಈಗ ಆಕಾಂಕ್ಷಿಗಳು ತುಂಬ ಜನ ಇದ್ದಾರೆ ನಮ್ಮದು ಗೆಲ್ಲುವಂತ ಪಕ್ಷ ಎಂದರು.
ಬಿಜೆಪಿಗೆ ಬಹುಮತ ಬಂದರೂ ಜೆಡಿಎಸ್ ಬೆಂಬಲ ನೀಡಿದ್ರೆ ನಾವು ಬೇಡ ಅನ್ನಲ್ಲ. ಕೇಂದ್ರದಲ್ಲಿ ಬಿಜೆಪಿಗೆ ಪೂರ್ಣ ಬಹುಮತ ಇದೆ. ಆದರೂ ಕೆಲವು ಮಿತ್ರ ಪಕ್ಷಗಳು ನಮ್ಮೊಟ್ಟಿಗೆ ಇವೆಯಲ್ಲ. ಬಿಜೆಪಿಗೆ ಕಾಂಗ್ರೆಸ್ ಹೊರತುಪಡಿಸಿ ಯಾವುದೇ ಪಕ್ಷದವರು ಬಂದರೂ ನಾವು ಸ್ವಾಗತ ಮಾಡುತ್ತೇವೆ ಎಂದರು.