ಯುಜಿಡಿ ಜಾಗ ಖರೀದಿ ವ್ಯವಹಾರ ಲೋಕಾಯುಕ್ತಕ್ಕೆ
ಕುಂದಾಪುರ ಪುರಸಭೆ ಸಾಮಾನ್ಯ ಸಭೆ
Team Udayavani, Sep 30, 2021, 5:13 AM IST
ಕುಂದಾಪುರ: ಒಳಚರಂಡಿ ಕಾಮಗಾರಿಗೆ ಪೂರಕವಾಗಿ ತ್ಯಾಜ್ಯ ಜಲ ಘಟಕ ನಿರ್ಮಾಣಕ್ಕೆ ಖರೀದಿಸಿದ ಜಾಗದಲ್ಲಿ ಅವ್ಯವಹಾರ ನಡೆದ ಅನುಮಾನವಿದ್ದರೆ ಈ ಕುರಿತು ತನಿಖೆಗೆ ನನ್ನ ಸಹಮತ ಇದೆ. ಆದರೆ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ರಾಜ್ಯ ಮಾರ್ಗದರ್ಶಿಯಂತೆ ಖರೀದಿಸಬೇಕಾಗುತ್ತದೆ. ಆದ್ದರಿಂದ ಅದರಲ್ಲಿ ಲೋಪದೋಷಗಳಿದ್ದರೆ ತನಿಖೆಯಲ್ಲಿ ಸತ್ಯಾಂಶ ಹೊರಬರಲಿ ಎಂದು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದ್ದಾರೆ.
ಬುಧವಾರ ಇಲ್ಲಿನ ಪುರಸಭೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
ಮಾರ್ಗಸೂಚಿಯಿದೆ
ಭೂಸ್ವಾಧೀನ ಪ್ರಕ್ರಿಯೆಗೆ ಪ್ರತ್ಯೇಕ ಮಾರ್ಗ ಸೂಚಿಯಿದೆ. ಅವ್ಯವಹಾರ ಮಾಡಲು ಸಾಧ್ಯ ವಾಗುವುದಿಲ್ಲ. ಸ್ಥಳೀಯಾಡಳಿತ ಸಂಸ್ಥೆ, ಗ್ರಾ.ಪಂ. ವ್ಯಾಪ್ತಿ ಹೀಗೆ ಬೇರೆ ಬೇರೆ ದರ ನಿಗದಿ ಮಾಡಲು ಅವಕಾಶ ಇದೆ ಎಂದು ಶಾಸಕರು ಹೇಳಿದರು. ಸದಸ್ಯ ಗಿರೀಶ್ ಜಿ.ಕೆ., ದರ ನಿಗದಿ ಸಂದರ್ಭ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಬೇರೆ ವಾರ್ಡ್ನ ದರ ನಮೂದಿಸಿ ಇನ್ನೊಂದು ವಾರ್ಡ್ನಲ್ಲಿ ಜಾಗ ಖರೀದಿಸಲಾಗಿದೆ. ನಮೂದಿಸಿದ ದಾಖಲಾತಿಗಳಲ್ಲೂ ಅವ್ಯವಹಾರದ ಶಂಕೆ ಇದೆ. 45 ಲಕ್ಷ ರೂ. ಹೆಚ್ಚುವರಿಯಾಗಿ ಪಾವತಿಸಲಾಗಿದೆ. ಅದನ್ನು ಮರುಪಾವತಿಸಬೇಕು ಎಂದರು. ಶ್ರೀಧರ್ ಶೇರೆಗಾರ್, ಜನರ ತೆರಿಗೆ ಹಣ ಪೋಲಾಗಬಾರದು ಎಂದರು. ಇದರ ತನಿಖೆಗೆ ಸರ್ವಾನುಮತದ ನಿರ್ಣಯ ಎಂದು ಮಾಡಲಾಗಿದೆ. ನಮ್ಮ ಬೆಂಬಲ ಇಲ್ಲ, ಆಕ್ಷೇಪ ಇದೆ ಎಂದು ಚಂದ್ರಶೇಖರ ಖಾರ್ವಿ, ಅಶ#ಕ್ ಕೋಡಿ ಹೇಳಿದರು.
ಈಗಾಗಲೇ ಗಿರೀಶ್ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ ಎಂದಾಗ, ತನಿಖಾ ಸಂಸ್ಥೆಯಲ್ಲಿ ಪ್ರಕರಣ ಇರುವಾಗ ಇಲ್ಲಿ ಚರ್ಚೆ ಮಾಡುವುದು ಸರಿಯಲ್ಲ. ಇಲ್ಲದೇ ಇದ್ದರೆ ಏನು ಲೋಪವಾಗಿದೆ ಎಂದು ಅಧಿಕಾರಿಗಳಿಂದ ಪ್ರತ್ಯೇಕ ತನಿಖೆ ನಡೆಸಬಹುದಿತ್ತು ಎಂದು ಶಾಸಕರು ಹೇಳಿದರು.
ಯಾವುದೇ ರೀತಿಯ ಅವ್ಯವಹಾರ ನಡೆದಿಲ್ಲ, ಕಾನೂನುಬದ್ಧವಾಗಿ ಜಿಲ್ಲಾಧಿಕಾರಿ ಅಧ್ಯಕ್ಷತೆಯ ದರ ನಿರ್ಧರಣ ಸಮಿತಿ ದರ ನಿಗದಿಪಡಿಸಿದೆ ಎಂದು ಮುಖ್ಯಾಧಿಕಾರಿ ಸ್ಪಷ್ಟಪಡಿಸಿದರು. ಸಭೆಯ ಗಮನಕ್ಕೆ ತಂದಿಲ್ಲ ಎಂದು ಕೆ.ಜಿ. ನಿತ್ಯಾನಂದ ಹೇಳಿದಾಗ,2 ವರ್ಷ ಆಡಳಿತ ಮಂಡಳಿ ಇಲ್ಲದ ಕಾರಣ ಕೆಲವು ನಿರ್ಣಯ ಆಡಳಿತಾಧಿಕಾರಿ ಮಾಡಿರುತ್ತಾರೆ ಎಂದು ಶಾಸಕರು ಹೇಳಿದರು.
ಇದನ್ನೂ ಓದಿ:ಪಂಜಾಬ್ ರಾಜಕೀಯ ಬೆಳವಣೆಗೆಗೆ ಬಿಗ್ ಟ್ವಿಸ್ಟ್ | ಕುತೂಹಲ ಮೂಡಿಸಿದ ಶಾ-ಕ್ಯಾಪ್ಟನ್ ಭೇಟಿ
ಅಧಿಕ ಬಿಲ್
ರಸ್ತೆಗೆ ವೆಟ್ಮಿಕ್ಸ್ ಹಾಕಿದ್ದಕ್ಕೆ ಬೇಕಾಬಿಟ್ಟಿ ಬಿಲ್ ಮಾಡಲಾಗಿದೆ ಎಂದು ಸಂತೋಷ್ ಕುಮಾರ್ ಶೆಟ್ಟಿ, ಮೋಹನದಾಸ ಶೆಣೈ, ರೋಹಿಣಿ ಉದಯ ಕುಮಾರ್, ಗಿರೀಶ್ ಜಿ.ಕೆ., ಪ್ರಭಾಕರ್ ವಿ., ಶ್ರೀಧರ ಶೇರೆಗಾರ್ ಆಕ್ಷೇಪಿಸಿದರು. ಹಳೆ ಬಿಲ್ಗಳನ್ನು ಜತೆಯಾಗಿ ಪಾವತಿಸಲಾಗಿದೆ, ವಿವರಗಳನ್ನು ನೀಡಲಾಗುವುದು ಎಂದು ಮುಖ್ಯಾಧಿಕಾರಿ ತಿಳಿಸಿದರು. ಮೂರು ವರ್ಷಗಳ ಹಿಂದೆ ಆಗಿನ ಸದಸ್ಯರ ಬೇಡಿಕೆಯಂತೆ ಕೆಲವು ಕಾಮಗಾರಿ ನಡೆದಿದ್ದು ಅದರ ಬಿಲ್ಗಳನ್ನು ಈಗ ಪಾವತಿಸಿದ್ದರೆ ಮೊತ್ತದಲ್ಲಿ ವ್ಯತ್ಯಾಸ ಬರುತ್ತದೆ ಎಂದು ಶಾಸಕರು ಹೇಳಿದರು.
ವಿಶೇಷ ಅನುದಾನ
ಸಾಲಿಗ್ರಾಮ ಪ.ಪಂ., ಕುಂದಾಪುರ ಪುರಸಭೆಗೆ ವಿಶೇಷ ಅನುದಾನ ತರಲು ಪ್ರಯತ್ನಿಸುತ್ತೇನೆ. ರಿಂಗ್ರೋಡ್ ನಿರ್ಮಾಣಕ್ಕೆ 20 ಕೋ.ರೂ. ಆರ್ಥಿಕ ಇಲಾಖೆಯಿಂದ ಮಂಜೂರಾಗಿ ಟೆಂಡರ್ ಮಾತ್ರ ಬಾಕಿಯಿದೆ. ಕೋಡಿಗೆ ರಸ್ತೆ ಕಲ್ಪಿ ಸಲು 4 ಕೋ.ರೂ. ಅನುದಾನ ಮಂಜೂರಾಗಿದೆ ಎಂದು ಶಾಸಕ ಹಾಲಾಡಿ ಹೇಳಿದರು.
ಹಕ್ಕು
ನಾಮನಿರ್ದೇಶಿತ ಸದಸ್ಯರ ಹಕ್ಕುಗಳೇನು ಎಂದು ಚಂದ್ರಶೇಖರ ಖಾರ್ವಿ ಕೇಳಿದರು. ಮುಖ್ಯಾಧಿಕಾರಿ ಓದಿ ಹೇಳಿದಾಗ, ಸದಸ್ಯರಾದ ಪುಷ್ಪಾ ಶೇಟ್, ಪ್ರಕಾಶ್ ಖಾರ್ವಿ, ನಾಗರಾಜ ಕಾಂಚನ್, ರತ್ನಾಕರ್ ಚರ್ಚ್ರಸ್ತೆ, ಹಕ್ಕುಗಳ ಕುರಿತಾಗಿ ಸ್ಪಷ್ಟ ಮಾಹಿತಿ ಬೇಕು. ಇಲ್ಲದಿದ್ದರೆ ನಾವು ಸಭೆಯಿಂದ ನಿರ್ಗಮಿಸುವುದಾಗಿ ಹೇಳಿದರು. ಸರಕಾರಕ್ಕೆ ಬರೆದು ಮಾಹಿತಿ ತರಿಸಿಕೊಳ್ಳುವುದಾಗಿ ಶಾಸಕರು ಹೇಳಿದರು. ಕೋಡಿ ಬಗ್ಗೆ ಪ್ರಸ್ತಾವವಾದರೂ ನಿರ್ಣಯದಲ್ಲಿ ಉಲ್ಲೇಖ ಇರುವುದಿಲ್ಲ ಎಂದು ಅಶ#ಕ್ ಕೋಡಿ, ಲಕ್ಷ್ಮೀ, ಕಮಲಾ ಹೇಳಿದರು.
ಪಾರ್ಕಿಂಗ್
ಪಾರ್ಕಿಂಗ್ ದಟ್ಟಣೆ ನಿವಾರಣೆಗೆ ಕೆಲವು ಪ್ರದೇಶಗಳನ್ನು ಪೊಲೀಸರು ಗುರುತಿಸಿದ್ದು ಅಧ್ಯಕ್ಷರು, ಸದಸ್ಯರ ನಿಯೋಗ ಪುನರ್ ಪರಿಶೀಲಿಸಿ ನಿಗದಿ ಮಾಡಲಿದೆ ಎಂದು ಮುಖ್ಯಾಧಿಕಾರಿ ಹೇಳಿದರು.
ಜಟಾಪಟಿ
ಶಾಸ್ತ್ರೀ ಸರ್ಕಲ್ ಬಳಿ ಗೂಡಂಗಡಿ ತೆರವು ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಶಾಸಕರು, ಹೊಸದಾಗಿ ನಿರ್ಮಿಸಿದ್ದಲ್ಲ. ಹಳೆಯ ಅಂಗಡಿ ಇದ್ದವರೇ ಹಾಕಿದ್ದು. ತೆರವು ಮಾಡುವುದು ಸರಿಯಲ್ಲ ಎಂದರು. ಇದನ್ನು ಚಂದ್ರಶೇಖರ ಖಾರ್ವಿ ಆಕ್ಷೇಪಿಸಿದರು. ಇಬ್ಬರ ನಡುವೆ ಮಾತಿನ ಜಟಾಪಟಿ ನಡೆಯಿತು.
ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ಅಧ್ಯಕ್ಷತೆ ವಹಿಸಿ ದ್ದರು. ಉಪಾಧ್ಯಕ್ಷ ಸಂದೀಪ್ ಖಾರ್ವಿ, ಸ್ಥಾಯೀ ಸಮಿತಿ ಅಧ್ಯಕ್ಷ ಶೇಖರ್ ಪೂಜಾರಿ ಉಪಸ್ಥಿತರಿದ್ದರು.
ಅಪರೂಪಕ್ಕೆ ಗರಂ ಆದ ಹಾಲಾಡಿ
ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹಾಗೂ ವಿಪಕ್ಷ ಸದಸ್ಯ ಚಂದ್ರಶೇಖರ ಖಾರ್ವಿ ಅವರ ನಡುವೆ ಮಾತಿನ ಜಟಾಪಟಿ ನಡೆದು ಇಬ್ಬರೂ ಸಭಾತ್ಯಾಗ ಮಾಡಲು ಮುಂದಾಗುವಲ್ಲಿವರೆಗೆ ಚರ್ಚೆ ಮುಂದುವರಿಯಿತು. ಸಭೆ ಮುಂದುವರಿಸಿ ಎಂದು ಚಂದ್ರಶೇಖರ್ ಹೇಳಿದಾಗ ಸಭೆ ಮುಂದುವರಿಸಬೇಡಿ ಎಂದು ಶಾಸಕರು ಗಡುಸಾಗಿ ಹೇಳಿದರು. ನೀವು ದೊಡ್ಡ ಜನ ಆಗಿರಬಹುದು, ವಿಪಕ್ಷ ನಾಯಕನಾಗಿರಬಹುದು ಎಂದು ಶಾಸಕರು ಚಂದ್ರಶೇಖರ್ಬಳಿ ಹೇಳಿದರು. ಪುರಸಭೆ ವಿಚಾರ ಅಲ್ಲದಿದ್ದರೆ ಯಾಕೆ ಸುಮ್ಮನೆ ಚರ್ಚೆ ಮಾಡುವುದು, ಅಧಿಕಾರ ಇರುವುದು ಅಧ್ಯಕ್ಷರಿಗೆ ಎಂದು ಖಾರ್ವಿ ಹೇಳಿದರು.
ನಾನೇ ಭಯಂಕರ ಎಂದು ಭಾವಿಸಬೇಡಿ, ನೀವು ಹೇಳಿದಂತೆ ಮುಂದುವರಿಸಲಾಗದು, ನೀವು ಮಾರ್ಗದರ್ಶನ ನೀಡುತ್ತೀರ ಎಂದು ಏರುಧ್ವನಿಯಲ್ಲಿ ಹೇಳಿದರು. ಈ ಸಭೆಯಲ್ಲಿ ನಾನಿರುವುದಿಲ್ಲ ಎಂದು ಚಂದ್ರಶೇಖರ್ ಹೊರಟರು. ನಾನೂ ಇರುವುದಿಲ್ಲ ಎಂದು ಶಾಸಕರೂ ಹೊರಡಲನುವಾದರು. ಕೊನೆಗೂ ಸಮಾಧಾನ ಆಗಿ ಸಭೆ ಮುಂದುವರಿಯಿತು. ಶಾಸಕರಿಗೆ ಗೌರವ ನೀಡಿ, ಅವರೆಂದೂ ರಾಜಕೀಯ ತಾರತಮ್ಯ ಮಾಡಿಲ್ಲ ಎಂದು ಮೋಹನದಾಸ ಶೆಣೈ ಹೇಳಿದರು. ಇದಕ್ಕೆ ಆಡಳಿತ ಪಕ್ಷದವರು ಧ್ವನಿಗೂಡಿಸಿದರು.
ಕಪ್ಪುಪಟ್ಟಿಗೆ ಹಾಕಿ
ಯುಜಿಡಿ ಕಾಮಗಾರಿ ಇನ್ನೂ ಆಗದ ಕಾರಣ ಅವರಿಗೆ ನೋಟಿಸ್ ಕೊಡಿ ಅಥವಾ ಕಾನೂನಾತ್ಮಕ ವಕಾಲತ್ತು ನೋಟಿಸ್ ನೀಡಿ. ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಹಾಕಿ ಎಂದು ಶಾಸಕರು ಸಲಹೆ ನೀಡಿದರು. ಜಾಗ ನೀಡಿದರೆ ಕಾಮಗಾರಿ ಮಾಡುವುದಾಗಿ ಅಧಿಕಾರಿಗಳು ತಿಳಿಸಿದ್ದಾಗಿ ಸದಸ್ಯ ಮೋಹನದಾಸ ಶೆಣೈ ಹೇಳಿದರು. 5 ವೆಟ್ವೆಲ್ಗಳ ಪೈಕಿ 4ರ ಜಾಗ ಹಸ್ತಾಂತರಿಸಿದ್ದು ಇನ್ನೊಂದು ಜಾಗ 15 ದಿನಗಳಲ್ಲಿ ಒದಗಿಸಲಾಗುವುದು ಎಂದು ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಹೇಳಿದರು. ಯುಜಿಡಿಗಾಗಿ ವಿಶೇಷ ಸಭೆ ಕರೆಯುವುದಾಗಿ ಅಧ್ಯಕ್ಷೆ ವೀಣಾ ಭಾಸ್ಕರ್ ಹೇಳಿದರು.
ಸುದಿನ ವರದಿ
ನಗರದಲ್ಲಿ ಪಾರ್ಕಿಂಗ್ ಸಮಸ್ಯೆ ಕುರಿತು “ಉದಯವಾಣಿ’ “ಸುದಿನ’ “ಪಾರ್ಕಿಂಗ್ ಅವಸ್ಥೆ, ಸ್ವಾಮಿ ಸ್ವಲ್ಪ ಜಾಗ ಬಿಡಿ’ ಎಂದು ಸರಣಿ ವರದಿ ಪ್ರಕಟಿಸಿತ್ತು. ಯುಜಿಡಿ ಅವ್ಯವಸ್ಥೆ ಕುರಿತು “ಯುಜಿಡಿ ಅವಾಂತರ’ ಎಂದು ಸರಣಿ ವರದಿ ಪ್ರಕಟಿಸಿತ್ತು. ಇವೆರಡೂ ವಿಚಾರಗಳು ಸಭೆ ಯಲ್ಲಿ ಚರ್ಚೆಗೆ ಬಂದಿದೆ. 1 ವಾರದಲ್ಲಿ ಪಾರ್ಕಿಂಗ್ಗೆ ಜಾಗ ಅಂತಿಮವಾಗಲಿದೆ. ಫ್ಲೈಓವರ್ ಅಡಿಯಲ್ಲಿ ಪಾರ್ಕಿಂಗ್ಗೆ ಅವಕಾಶ ಕೊಡಿ ಎಂದು ಶಾಸಕರು ಸೂಚಿಸಿದ್ದಾರೆ. ಯುಜಿಡಿ ಕುರಿತು ವಿಶೇಷ ಸಭೆ ಕರೆಯಲು ತೀರ್ಮಾನಿಸಲಾಗಿದೆ. ಬೊಬ್ಬರ್ಯನಕಟ್ಟೆ ಬಳಿ ಹೆದ್ದಾರಿಯಿಂದ ನಗರ ಪ್ರವೇಶ ಕುರಿತು “ಸುದಿನ’ ಜನರ ಬೇಡಿಕೆಗಳನ್ನು ಪ್ರಕಟಿಸಿದ್ದು, ಸ್ಥಳ ಪರಿಶೀಲಿಸಲಾಗಿದೆ. ಇನ್ನೊಮ್ಮೆ ಸಚಿವರ ಜತೆ ಸ್ಥಳ ವೀಕ್ಷಿಸಿ ತಾಂತ್ರಿಕವಾಗಿ ಸಮಸ್ಯೆ ಬಗೆ ಹರಿಸಲು ಯತ್ನಿಸಲಾಗುವುದು. ಅಲ್ಲಿವರೆಗೆ ಭರವಸೆ ನೀಡುವುದಿಲ್ಲ ಎಂದು ಶಾಸಕರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ
Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!