ಕುಂದಾಪುರ : ಕೊನೆಗೂ ಸಂಚಾರಕ್ಕೆ ಮುಕ್ತಗೊಂಡ ಫ್ಲೈಓವರ್
Team Udayavani, Apr 27, 2021, 2:30 AM IST
ಕುಂದಾಪುರ: ಕುಂದಾಪುರ ಜನತೆಯ ದಶಕಗಳ ಕನಸು ನನಸಾಗಿದೆ. ಅನೇಕ ವರ್ಷಗಳ ಬಳಿಕ ಶಾಸ್ತ್ರಿ ಸರ್ಕಲ್ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ ಫ್ಲೈಓವರ್ನ ಡಾಮರು ಕಾಮ ಗಾ ರಿ ಮುಕ್ತಾಯವಾಗಿದೆ. ವಾಹನಗಳ ಪ್ರಾಯೋಗಿಕ ಓಡಾಟ ಆರಂಭವಾಗಿದೆ. ಜನ ನಿಟ್ಟುಸಿರು ಬಿಡುವಂತಾಗಿದೆ. ಸಾಮಾಜಿಕ ಜಾಲ ತಾಣದಲ್ಲಿ ಅಕ್ಷರಶಃ ಹಬ್ಬದ ಸಂಭ್ರಮ ಕಂಡು ಬಂದಿದೆ. ಇಷ್ಟರವರೆಗೆ ರಾಷ್ಟ್ರೀಯ ಹೆದ್ದಾರಿಯೇ ಆಗಿದ್ದ ಸರ್ವೀಸ್ ರಸ್ತೆ ತುಸು ನಿರಾಳವಾಗಿದೆ.
ಬಾಕಿ
ದಶಕಗಳ ಹಿಂದೆ ಆರಂಭವಾದ ಹೆದ್ದಾರಿ ಕಾಮಗಾರಿಗೆ ಶಾಸಿŒ ಸರ್ಕಲ್ ಬಳಿ ಫ್ಲೈ ಓವರ್ ಮಾಡುವ ಯೋಜನೆ ಮೂಲ ನಕಾಶೆಯಲ್ಲಿ ಇರಲಿಲ್ಲ. ಆಗ ಸಂಸದರಾಗಿದ್ದ ಜಯಪ್ರಕಾಶ್ ಹೆಗ್ಡೆ ಅವರು ದಿಲ್ಲಿಯಲ್ಲಿ ಸಚಿವರು ಹಾಗೂ ಅಧಿಕಾರಿಗಳ ಜತೆ ಮಾತುಕತೆ ನಡೆಸಿ ಮಂಜೂರು ಮಾಡಿಸಿದರು. ಮೂಲ ನಕ್ಷೆಯಲ್ಲಿ ಇಲ್ಲದೇ ತಡವಾಗಿ ಆದ ಮಂಜೂರಾತಿ ಎಂಬ ಒಂದು ಕಾರಣ ಇಟ್ಟುಕೊಂಡೇ ಕಾಮಗಾರಿಯನ್ನು ವಿಳಂಬ ಮಾಡಲಾಯಿತು. ಇದರ ಮಂಜೂರಾತಿ ಬಳಿಕ ಬಸೂÅರು ಮೂರುಕೈ ಅಂಡರ್ಪಾಸ್ ಮಂಜೂರಾಯಿತು. ಈ ಎರಡೂ ಕಾಮಗಾರಿಗಳು ವಿಳಂಬವಾಗಿ ಜನರಿಂದ ಸರಾಗವಾಗಿ ಟೀಕೆಗೆ ಒಳಗಾಯಿತು.
ಸಮಸ್ಯೆ
ಗುತ್ತಿಗೆ ವಹಿಸಿಕೊಂಡ ನವಯುಗ ಸಂಸ್ಥೆ ಹಣಕಾಸಿನ ಸಮಸ್ಯೆ ಎದುರಿಸಿತು. ಸಾಲ ತೆಗೆಸಿಕೊಡಲಾಯಿತು. ಪಂಪ್ವೆಲ್ ಮತ್ತು ಕುಂದಾಪುರ ಎಂಬ ಎರಡು ಫ್ಲೈಓವರ್ಗಳೇ ನವಯುಗ ಸಂಸ್ಥೆಯ ಹೆಸರಿಗೆ ಮಸಿ ಬಳಿಯಿತು. ಇಬ್ಬರು ಸಂಸದರಿಗೂ ಇದು ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಆದರೆ ಕಾಮಗಾರಿ ಮುಕ್ತಾಯವಾಗುವಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿದ ಕೀರ್ತಿ ಸಲ್ಲುವುದು ಏನಿದ್ದರೂ ಅಧಿಕಾರಿ ವರ್ಗಕ್ಕೆ. ಉಡುಪಿಯ ಡಿಸಿ ಹಾಗೂ ಕುಂದಾಪುರ ಎಸಿಗಳೇ ಹೆಚ್ಚು ನಿಗಾ ವಹಿಸಿದ್ದರು. ಎಸಿ ಭೂಬಾಲನ್ ಕೇಸು ಹಾಕಿದ್ದರು. ರಾಷ್ಟ್ರೀಯ ಹೆದ್ದಾರಿ ಜಾಗೃತಿ ಹೋರಾಟ ಸಮಿತಿ ಸಹಿತ ಅನೇಕ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಪ್ರತಿ ಬಾರಿಯೂ ಇನ್ನೆರಡು ತಿಂಗಳಲ್ಲಿ ಕಾಮಗಾರಿ ಮುಕ್ತಾಯ ಎಂಬಂತೆ ದಿನಾಂಕ ಕೊಡಲಾಗುತ್ತಿತ್ತು.
ಮುಕ್ತಾಯ
ಲಾಕ್ಡೌನ್ಗಿಂತ ಎರಡು ದಿನ ಮೊದಲೇ ಮುಕ್ತಾಯವಾದ ಕಾರಣ ನೆಪ ಹೇಳುವುದು ತಪ್ಪಿದಂತಾಗಿದೆ. ಕಾರ್ಮಿಕರು ಊರಿಗೆ ಹೋದರೂ ವಾಹನ ಓಡಾಟ ನಿರಾತಂಕವಾಗಿರಲಿದೆ. ಡಾಮರು ಕಾಮಗಾರಿ ಮುಕ್ತಾಯವಾಗಿದೆ. ಸುಣ್ಣ ಬಣ್ಣ ಬಳಿಯುವುದು ಬಾಕಿ ಇದೆ. ವಿದ್ಯುತ್ ಕಂಬ ಹಾಕುವುದು, ದಾರಿದೀಪ ಅಳವಡಿಕೆ ನಡೆಯುತ್ತಿದೆ. ಸುಂಕ ವಸೂಲಾತಿ ರಸ್ತೆ ಮುಕ್ತಾಯ ಎಂದು ಫಲಕ ಅಳವಡಿಸಲಾಗಿದೆ. ಲಾಕ್ಡೌನ್ನಿಂದ ರಸ್ತೆ ಕಾಮಗಾರಿಗೆ ಸಮಸ್ಯೆ ಆಗದೇ ಇದ್ದಲ್ಲಿ ಇವೆಲ್ಲ ಕೆಲವೇ ದಿನಗಳಲ್ಲಿ ಮುಕ್ತಾಯವಾಗಬಹುದು.
ತೆರೆದು ಕೊಡಲಿ
ಬೊಬ್ಬರ್ಯನಕಟ್ಟೆ ಬಳಿ ಹೆದ್ದಾರಿಯಿಂದ ಸರ್ವೀಸ್ ರಸ್ತೆಗೆ ಹೋಗಲು ಅವಕಾಶ ನೀಡಲಿ. ಅಂತೆಯೇ ಇದರ ಆಚೆ ಬದಿ ಹೆದ್ದಾರಿಗೆ ಸರ್ವೀಸ್ ರಸ್ತೆಯಿಂದ ಹೋಗಲು ಅವಕಾಶ ನೀಡಲಿ. ಆಗ ಅರ್ಧದಷ್ಟು ಸಮಸ್ಯೆ ಕಡಿಮೆಯಾಗುತ್ತದೆ. ಇಲ್ಲಿ ಎರಡು ಹೆದ್ದಾರಿಗಳನ್ನು ಹಾದುಹೋಗಲು ಅವಕಾಶ ಕೊಡದೇ ಇದ್ದರೂ ಇದಿಷ್ಟಾದರೂ ಮಾಡಲಿ. ಏಕೆಂದರೆ ಸುಮಾರು 17 ಕಚೇರಿಗಳು ಈ ವ್ಯಾಪ್ತಿಯಲ್ಲಿವೆ. ಕಿ.ಮೀ.ಗಟ್ಟಲೆ ಸುತ್ತಾಡಬೇಕಾಗುತ್ತದೆ. ಸಾರ್ವಜನಿಕರಿಗೆ ಇಂಧನ, ಸಮಯ ಅನಗತ್ಯ ವ್ಯಯವಾಗಲಿದೆ. ಇದಿಷ್ಟಲ್ಲದೆ ಹೋರಾಟ ಸಮಿತಿ ಕೆಲವು ಬೇಡಿಕೆಗಳನ್ನು ಇಟ್ಟಿದ್ದು ಅದನ್ನೂ ಗುತ್ತಿಗೆ ಸಂಸ್ಥೆ ಪೂರ್ಣಗೊಳಿಸಬೇಕಿದೆ. ಸರ್ವೀಸ್ ರಸ್ತೆ ಕಾಮಗಾರಿ ಮಾಡಬೇಕಿದೆ.
ದೀರ್ಘ ಸುತ್ತಾಟ
ವಿನಾಯಕ ಬಳಿ ಅದೆಷ್ಟೇ ಬೇಡಿಕೆ ಇದ್ದರೂ ಸರ್ವೀಸ್ ರಸ್ತೆಗೆ ಸಂಪರ್ಕ ನೀಡಿಲ್ಲ. ಈವರೆಗೆ ಇದ್ದುದನ್ನು ಮುಚ್ಚಿ ದುರ್ಗಾಂಬಾ ಬಳಿ ನೀಡಲಾಗಿದೆ. ದುರ್ಗಾಂಬಾ ಬಳಿ ಫ್ಲೈಓವರ್ ಹತ್ತಿದರೆ ಇಳಿಯುವುದು ಎಪಿಎಂಸಿ ಬಳಿಯೇ! ಎಲ್ಲಿಯೂ ಕುಂದಾಪುರ ನಗರವನ್ನು ಸಂಪರ್ಕಿಸಲು ಅವಕಾಶವೇ ಇಲ್ಲ. ಒಂದು ಅಂಡರ್ಪಾಸ್, ಒಂದು ಫ್ಲೈಓವರ್, ಒಂದು ಪಾದಚಾರಿ ಓಡಾಟ ಸುರಂಗ, ಒಂದು ಜಾನುವಾರು ಓಡಾಟ ಸುರಂಗ ಇಷ್ಟನ್ನು ದಾಟಿ ಹೋಗಬೇಕು. ಇವಿಷ್ಟೇ ಎರಡು ಸರ್ವೀಸ್ ರಸ್ತೆಗಳ ನಡುವಿನ ಸಂಪರ್ಕ ದಾರಿ. ಉಳಿದಂತೆ ಎಲ್ಲಿಯೂ ಹೆದ್ದಾರಿ ಸಂಪರ್ಕ ವ್ಯವಸ್ಥೆ§ಯೇ ಇಲ್ಲ. ಬಹಳ ದೀರ್ಘ ಸುತ್ತಾಟವಾಗುತ್ತದೆ.