ವಿರೋಧಿಗಳ ಆಸೆ-ಆಮಿಷಕ್ಕೆ ಒಳಗಾಗದಿರಿ: ಲಖನ್
Team Udayavani, Dec 2, 2021, 3:57 PM IST
ಬೆಳಗಾವಿ: ಈ ಚುನಾವಣೆಯಲ್ಲಿ ಯಾವುದೇ ಆಸೆ ಆಮಿಷಗಳಿಗೆ ಕಿವಿಗೊಡದೇ, ವಿರೋಧಿಗಳ ಅಪಪ್ರಚಾರಕ್ಕೆ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಪಕ್ಷೇತರ ಅಭ್ಯರ್ಥಿ
ಲಖನ್ ಜಾರಕಿಹೊಳಿ ಹೇಳಿದರು.
ಮಾರೀಹಾಳ ಗ್ರಾಮದ ಗುಡದಮ್ಮನ ದೇವಸ್ಥಾನ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸುಳೇಭಾವಿ ಜಿಪಂ ವ್ಯಾಪ್ತಿಯ ವಿವಿಧ ಗ್ರಾಪಂ ಚುನಾಯಿತ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದ ಅವರು, ವಿರೋಧಿಗಳು ಇಂಥ ಸಂದರ್ಭದಲ್ಲಿ ಅಪಪ್ರಚಾರ ನಡೆಸುತ್ತಾರೆ. ಯಾರೂ ಮಾನಸಿಕವಾಗಿ ಕುಗ್ಗಬಾರದು. ಧೈರ್ಯದಿಂದ ಮುನ್ನಡೆದರೆ ನಮ್ಮ ಗೆಲುವು
ನಿಶ್ಚಿತ. ಆಸೆ ಆಮಿಷ ಒಡ್ಡಿ ಮತ ಸೆಳೆಯಲು ಕೆಲವರು ಕುತಂತ್ರ ನಡೆಸಿದ್ದಾರೆ. ಜನರು ಜಾರಕಿಹೊಳಿ ಕುಟುಂಬದ ಪರವಾಗಿ ಇದ್ದಾರೆ ಎಂದು ಹೇಳಿದರು.
20 ವರ್ಷಗಳಿಂದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನರೊಂದಿಗೆ ಒಳ್ಳೆಯ ಒಡನಾಟ ಹೊಂದಿದ್ದೇನೆ. ಯಾವುದೇ ಫಲಾಪೇಕ್ಷೆ ಇಲ್ಲದೇ ಸ್ಥಳೀಯ ಸಂಸ್ಥೆಗಳ ಧ್ವನಿಯಾಗಿ ಕೆಲಸ ಮಾಡುವೆ. ಅಭಿವೃದ್ಧಿ ಕಾರ್ಯಗಳಲ್ಲಿ ಎಂದಿಗೂ ತಾರತಮ್ಯ ಮಾಡುವುದಿಲ್ಲ ಎಂದು ಅವರು ಹೇಳಿದರು. ಚುನಾವಣೆ ಬಂದ ಮೇಲೆ ನಿಮ್ಮನ್ನು ಸುತ್ತುವರಿಯುವ ಅಭ್ಯರ್ಥಿಗಳು ಆಮೇಲೆ ನಾಪತ್ತೆ ಆಗುತ್ತಾರೆ. ಹುಡು ಕಾಡಿದರೂ ನಿಮಗೆ ಸಿಗುವುದಿಲ್ಲ. ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುವ ವ್ಯಕ್ತಿಯನ್ನು ಬೆಂಬಲಿಸಬೇಕು. ಸುಳೇಭಾವಿ ಮತ್ತು ಸಾಂಬ್ರಾ ವ್ಯಾಪ್ತಿಯ ಎಲ್ಲ ಗ್ರಾಪಂಗಳ
ಅಭಿವೃದ್ಧಿ ಮಾಡಲಾಗುವುದು. ಅನುದಾನ ಹೆಚ್ಚಿಸಿ ಗ್ರಾಮದಲ್ಲಿ ಅಗತ್ಯ ಇರುವ ಮೂಲ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಹೇಳಿದರು. ಮಾರಿಹಾಳ ಗ್ರಾಮ ಪಂಚಾಯತ್ ಸದಸ್ಯರು ಈ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಅವರನ್ನು ಬೆಂಬಲಿಸಿ ಒಗ್ಗಟ್ಟಿನಿಂದ ಮತ ಚಲಾಯಿಸುವುದಾಗಿ ಪ್ರಕಟಿಸಿದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕೃಷ್ಣಾ ಅನಗೋಳಕರ, ಜಿಪಂ ಮಾಜಿ ಸದಸ್ಯ ಟಿ.ಆರ್. ಕಾಗಲ್, ಮಾರೀಹಾಳ ಗ್ರಾಪಂ ಅಧ್ಯಕ್ಷ ತೌಸೀಫ ಫಣಿಬಂಧ, ತುಮ್ಮರಗುದ್ದಿ ಗ್ರಾಪಂ ಅಧ್ಯಕ್ಷ ಶೇಖರ ಕಾಲೇರಿ, ಅಬೀದಾಬೇಗಂ ಸನದಿ, ಭಾಗ್ಯಶ್ರೀ ಹಣಬರ, ರಫೀಕ್ ಗೋಕಾಕ, ಅಲ್ಲಣ್ಣ ನಾಯ್ಕ, ನಾಗಪ್ಪ ಕಾಲೇರಿ ಸೇರಿದಂತೆ ಗ್ರಾಪಂ ಸದಸ್ಯರಿದ್ದರು.
ಇದನ್ನೂ ಓದಿ : ತೆಗಳಿದ್ರೆ ಹೀರೋ ಆಗಲ್ಲ; ಜೀರೋ ಆಗ್ತಾರೆ : ಚುನಾವಣೆ ಪ್ರಚಾರ ಸಭೆಯಲ್ಲಿ ಕಾರಜೋಳ ಕಿಡಿ