ಎಲ್ಲೋಡು ಗ್ರಾಮ ಪಂಚಾಯತ್ ಸುತ್ತಮುತ್ತ ಚಿರತೆಗಳ ಭೀತಿ ; ಭಯದಲ್ಲಿ ಜನತೆ
Team Udayavani, Mar 21, 2022, 7:48 PM IST
ಗುಡಿಬಂಡೆ : ತಾಲೂಕಿನ ಎಲ್ಲೋಡು ಗ್ರಾಮ ಪಂಚಾಯಿತಿ ಸುತ್ತಮುತ್ತಲ ಗ್ರಾಮಗಳಲ್ಲಿ ಎರಡು ಚಿರತೆಗಳು ಪ್ರತ್ಯಕ್ಷವಾಗಿದ್ದು, ಜನರು ಭಯಬೀತರಾಗಿದ್ದಾರೆ.
ತಾಲೂಕಿನ ಎಲ್ಲೋಡು ಗ್ರಾಮದಲ್ಲಿ ಕಳೆದ ಗುರುವಾರ ಬೆಳ್ಳಂ ಬೆಳ್ಳಿಗ್ಗೆ 2;30 ರ ಸಮಯದಲ್ಲಿ ಕುರಿ ದೊಡ್ಡಿಯ ಮೇಲೆ ಎರಡು ಚಿರತೆ ದಾಳಿ ಮಾಡಿ ಸುಮಾರು 14 ಕುರಿಗಳ ಸಾವಿಗೆ ಕಾರಣವಾಗಿದ್ದ ಘಟನೆ ಇನ್ನು ಜನರ ಮನದಲ್ಲಿ ಇರುವಾಗಲೇ, ಎಲ್ಲೋಡು ಗ್ರಾಮ ಪಂಚಾಯಿತಿ ಸುತ್ತಮುತ್ತಲ ಅರಣ್ಯ ವ್ಯಾಪ್ತಿಯ ಸಮೀಪದ ಗ್ರಾಮಗಳ ಅಕ್ಕಪಕ್ಕದಲ್ಲಿ ಚಿರತೆಗಳ ಓಡಾಟ ಕಂಡು ಬರುತ್ತಿದ್ದು, ಚಿರತೆಗಳನ್ನು ನೋಡಿದ ಜನ ತಮ್ಮ ಪ್ರಾಣಗಳನ್ನು ಕೈಯಲ್ಲಿ ಇಟ್ಟು ಓಡಾಡುವಂತಾಗಿದ್ದು, ವೃದ್ದರು, ಮಹಿಳೆಯರು, ಮಕ್ಕಳಂತೂ ಮನೆಯಿಂದ ಹೊರಬಾರದಾಗಿದ್ದಾರೆ.
ಎಲ್ಲೋಡು ಗ್ರಾಮಕ್ಕೆ ಬೇಟಿ ನೀಡಿದ್ದ ಉಪವಿಭಾಗಾಧಿಕಾರಿ: ಎಲ್ಲೋಡು ಗ್ರಾಮದಲ್ಲಿ ಚಿರತೆಗಳ ದಾಳಿಯಿಂದ ಕುರಿಗಳು ಸತ್ತುಹೋಗಿದ್ದ ಘಟನ ಸ್ಥಳಕ್ಕೆ ಉಪವಿಭಾಗಾಧಿಕಾರಿ ಸಂತೋಷ್ ಕುಮಾರ್ ಮತ್ತು ತಹಶೀಲ್ದಾರ್ ಸಿಗ್ಬತುಲ್ಲಾ, ಅರಣ್ಯಾಧಿಕಾರಿ ಚಂದ್ರಶೇಖರ್ ಮತ್ತು ಸಿಬ್ಬಂದಿ ಬೇಟಿ ಕೊಟ್ಟು ಪರಿಶೀಲನೆ ನಡೆಸಿ, ಚಿರತೆಗಳನ್ನು ಸೆರೆ ಹಿಡಿಯಲು ಸೂಕ್ತ ಕ್ರಮ ವಹಿಸುವುದಾಗಿ ಭರವಸೆ ಕೊಟ್ಟಿದ್ದರು.
ರಸ್ತೆ ಮಾರ್ಗದಲ್ಲಿ ಕಂಡು ಬಂದ ಚಿರತೆ: ಗುಡಿಬಂಡೆಯಿಂದ ಚೋಳಶೆಟ್ಟಿಹಳ್ಳಿಗೆ ಹೋಗುವ ದಾರಿ ಮಧೆಯ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ತಡ ರಾತ್ರಿ ಎರಡು ಚಿರತೆಗಳು ಓಡಾಡುವುದನ್ನು ವಾಹನ ಸವಾರರು ನೋಡಿದ್ದು, ಕೂಡಲೇ ಸವಾರರು ಸಾಮಾಜಿಕ ಜಾಲತಾಣಗಳ ಮೂಲಕ ಚಿರತೆಗಳು ಓಡಾಡುವ ಬಗ್ಗೆ ಎಚ್ಚರಿಕೆ ಸಂದೇಶಗಳನ್ನು ಸಹ ಹರಿಬಿಟ್ಟಿದ್ದಾರೆ.
ಚಿರತೆಗಳು ಜನರ ಮೇಲೆ ದಾಳಿ ಮಾಡುವುದರ ಒಳಗಾಗಿಯೇ ಅರಣ್ಯ ಇಲಾಖೆ ಎಚ್ಚರ ಗೊಂಡು, ಚಿರತೆಗಳನ್ನು ಹಿಡಿಯಬೇಕೆಂದು ಎಲ್ಲೋಡು ಗ್ರಾಮ ಪಂಚಾಯಿತಿಯ ಸ್ಥಳೀಯ ಜನರು ಅಧಿಕಾರಿಗಳಲ್ಲಿ ಒತ್ತಾಯಿಸುತ್ತಿದ್ದಾರೆ.
ಇದನ್ನೂ ಓದಿ : ಹಾಡು ಹಗಲೇ ಬೇಕರಿ ಮುಂದೆ ನಿಲ್ಲಿಸಿದ ಬೈಕ್ ನಿಂದ 3.40 ಲಕ್ಷ ಹಣ ದೋಚಿ ಪರಾರಿಯಾದ ಖದೀಮ
ಚಂದ್ರಶೇಖರ್, ವಲಯ ಅರಣ್ಯಾಧಿಕಾರಿ ಹೇಳಿಕೆ: ಗುಡಿಬಂಡೆ ತಾಲೂಕಿನ ಎಲ್ಲೋಡು ಗ್ರಾಮದಲ್ಲಿ ಗುರುವಾರ ಕುರಿದೊಡ್ಡಿಯ ಮೇಲೆ ಎರಡು ಚಿರತೆಗಳು ದಾಳಿ ಮಾಡಿ, ಕುರಿಗಳ ಸಾವಿಗೆ ಕಾರಣವಾಗಿದ್ದು, ಈಗ ಅವುಗಳು ಎಲ್ಲೋಡು ಮತ್ತು ಸುತ್ತಮುತ್ತಲ ಗ್ರಾಮಗಳ ಸಮೀಪದ ಅರಣ್ಯ ಪ್ರದೇಶದಲ್ಲಿ ಕಂಡು ಬರುತ್ತಿವೆ ಎಂದು ಗ್ರಾಮಸ್ಥರು ಹೇಳುತ್ತಿದ್ದು, ಅವುಗಳ ಸೆರೆಗಾಗಿ ಈಗಾಗಲೇ ಎಲ್ಲೋಡು ಸಮೀಪದ ಅರಣ್ಯದಲ್ಲಿ ಒಂದು ಬೋನ್ ಸಹ ಇಡಲಾಗಿದ್ದು, ನಾನು ಮತ್ತು ಅರಣ್ಯ ಸಿಬ್ಬಂದಿ ರಾತ್ರಿ ವೇಳೆಯಲ್ಲಿ ಗಸ್ತು ಸಹ ಹೋಗುತ್ತಿದ್ದು, ಪ್ರಮುಖವಾಗಿ ಕೆರೆ, ಕುಂಟೆ, ನೀರು ನಿಂತ ಕಾಲುವೆಗಳ ಸಮೀಪದಲ್ಲಿ ಅವುಗಳ ಹೆಜ್ಜೆ ಗುರುತು ಹಿಡಿದು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದು, ಅತಿ ಜರೂರಾಗಿ ಅವುಗಳ ಗುರುತು ಪತ್ತೆ ಹಚ್ಚಿ ಸೆರೆ ಹಿಡಿಯಲು ಪ್ರಯತ್ನಿಸುತ್ತೇವೆ ಎಂದರು, ಅದೆ ಅಲ್ಲದೇ ಗ್ರಾಮಗಳಲ್ಲಿ ಬೆಳಗಿನ ಜಾವ ಮತ್ತು ಸಂಜೆ ಹಾಗೂ ರಾತ್ರಿ ವೇಳೆ ಸಾರ್ವಜನಿಕರು ಎಚ್ಚರಿಕೆಯಿಂದ ಓಡಾಡಲು ಸೂಚನೆ ಸಹ ನೀಡಲಾಗುತ್ತದೆ ಎಂದರು.