ಹೆದೆಯೇರಿಸಿ ಬಿಟ್ಟ ಬಾಣದಂಥ ಬದುಕು
Team Udayavani, Feb 3, 2021, 8:00 AM IST
ಆಂಧ್ರಪ್ರದೇಶದಲ್ಲಿ ವೇಮನ ಎಂಬ ಮಹಾಕವಿಯೊಬ್ಬರು ಆಗಿಹೋಗಿದ್ದಾರೆ. ಕನ್ನಡಕ್ಕೆ ಪಂಪನಿದ್ದಂತೆ ತೆಲುಗಿ ನಲ್ಲಿ ವೇಮನ. ತೆಲುಗರ ಮನೆಮಾತು ಅವನು. ಅವನ ಮೂಲ ಹೆಸರೇನೋ ಬೇರೆ; ವೇಮನನೆಂದೇ ಪ್ರಸಿದ್ಧಿ.
ವಾಲ್ಮೀಕಿ, ಕಾಳಿದಾಸರಂತೆ ವೇಮನ ಮೂಲತಃ ಅನಕ್ಷರಸ್ಥನಾಗಿದ್ದವ. ಬೇಟೆ ಗಾರನಾಗಿದ್ದ ರತ್ನಾಕರ ವಾಲ್ಮೀಕಿಯಾದ ಕಥೆ ನಮಗೆ ಗೊತ್ತಿದೆ. ಕಾಳಿದಾಸನೂ ಶತದಡ್ಡನಾಗಿದ್ದವ, ಕಾಳಿಯ ಅನುಗ್ರಹ ದಿಂದ ಮಹಾಕವಿಯಾದ. ವಾಲ್ಮೀಕಿ ಮತ್ತು ವೇಮನರ ನಡುವೆ ಇದಕ್ಕೂ ಮಿಗಿ ಲಾದ ಒಂದು ಸಾಮ್ಯತೆ ಇದೆ. ಬಾಣದ ಮೊನೆ ಯಂಥ ಏಕಾಗ್ರ ಚಿತ್ತ ದಿಂದ ಅಸಾಧ್ಯವೂ ಸಾಧ್ಯ ವಾಗಬಲ್ಲುದು ಎಂಬುದಕ್ಕೆ ನಿದರ್ಶನ ಇವರಿಬ್ಬರ ಜೀವನ.
ಬಾಲಕನಾಗಿದ್ದಾಗ ವೇಮನ ಪೆದ್ದ ನಾಗಿದ್ದ. ಅವನ ತಂದೆತಾಯಂದಿರು ಅವನನ್ನು ಗುರುಗಳೊಬ್ಬರ ಬಳಿ ವಿದ್ಯಾ ಭ್ಯಾಸಕ್ಕಾಗಿ ಕಳುಹಿಸಿದ್ದರು. ಗುರುಕುಲ ದಲ್ಲಿ ಹಲವು ವರ್ಷಗಳು ಕಳೆದರೂ ಅವನ ತಲೆಗೆ ಹತ್ತಲಿಲ್ಲ. ಹದಿನೈದು ವರ್ಷ ವಯಸ್ಸಾದರೂ ವರ್ಣಮಾ ಲೆಯ ಕೆಲವು ಅಕ್ಷರಗಳನ್ನು ಮಾತ್ರವೇ ಗುರುತಿಸಬಲ್ಲವನಾಗಿದ್ದ ವೇಮನ. ಅವನ ಬುದ್ಧಿಯೇ ಮಂದ ಎಂದರೂ ಅತಿಶಯೋಕ್ತಿಯಲ್ಲ. ಅವನಿಗೆ ಕಲಿಸಿ ಗುರುವಿಗೂ ಸಾಕಾಗಿ ಹೋಗಿತ್ತು.
ಒಂದು ದಿನ ಗುರುವಿಗೆ ಒಂದು ಮುಖ್ಯ ಕೆಲಸಕ್ಕಾಗಿ ದೂರ ಪ್ರಯಾಣ ಹೋಗುವುದಿತ್ತು. ಅದಕ್ಕೆ ಮುನ್ನ ಅವರು ಹತ್ತಿರದ ನದಿಯಲ್ಲಿ ಸ್ನಾನಕ್ಕೆ ಹೊರಟಿದ್ದರು. ನದಿಯ ದಡದಲ್ಲಿ ಕೆಸರಿರುತ್ತದೆ, ಬಟ್ಟೆ ಅಲ್ಲಿರಿಸಿದರೆ ಮೆತ್ತಿಕೊಳ್ಳುತ್ತದೆ. ಹೀಗಾಗಿ ವೇಮನ ನನ್ನು ಕರೆದು, “ನಾನು ಸ್ನಾನ ಮುಗಿಸಿ ಬರುವಷ್ಟು ಹೊತ್ತು ನನ್ನ ಒಣ ಬಟ್ಟೆಗಳನ್ನು ಹಿಡಿದುಕೋ’ ಎಂದು ಕೊಟ್ಟು ನದಿ ಗಿಳಿದರು. ಸ್ನಾನವಾಗಿ ಮೇಲೆ ಬಂದ ಗುರುಗಳು, “ಇಲ್ಲಿ ಬಾ’ ಎಂದು ವೇಮನನನ್ನು ಕರೆದರು. ಆತ ಬಟ್ಟೆಗಳನ್ನು ನೆಲದ ಮೇಲೆ ಎಸೆದು ಗುರುಗಳ ಬಳಿಗೆ ಓಡಿದ. ಗುರುಗಳು ಕರೆದದ್ದು ಮಾತ್ರ, ಬಟ್ಟೆ ತೆಗೆದುಕೊಂಡು ಬರುವಂತೆ ಹೇಳಲಿಲ್ಲವಲ್ಲ!
ವೇಮನ ಎಂಥ ಶತದಡ್ಡನಾಗಿದ್ದ ಎಂಬುದಕ್ಕೆ ಇದು ಉದಾಹರಣೆ.
ಶಿಷ್ಯನ ಪೆದ್ದುತನ ಕಂಡು ಗುರುಗಳು ಹಣೆ ಬಡಿದುಕೊಂಡರು. ಒಂದು ಸೀಮೆ ಸುಣ್ಣದ ತುಂಡನ್ನು ಕೊಟ್ಟು ಅತ್ಯಂತ ಹತಾಶೆಯಿಂದ, “ನಾನು ಬರುವ ವರೆಗೆ ಈ ಬಂಡೆಯ ಮೇಲೆ ರಾಮ, ರಾಮ ಎಂದು ಬರೆಯುತ್ತಿರು’ ಎಂದು ಆದೇಶಿಸಿ ಹೊರಟು ಹೋದರು.
ವೇಮನ ಬರೆಯ ಲಾರಂಭಿಸಿದ. ಸೀಮೆ ಸುಣ್ಣದ ತುಂಡು ಮುಗಿ ಯಿತು. ವೇಮನ ಬರೆ ಯುತ್ತಲೇ ಇದ್ದ. ಬಂಡೆಗೆ ಉಜ್ಜಿ ಬೆರಳಿಗೆ ಗಾಯವಾಯಿತು. . ವೇಮನ ಬರೆಯುತ್ತಲೇ ಇದ್ದ. ರಕ್ತ ಹರಿಯಿತು. ವೇಮನ ಬರೆಯುತ್ತಲೇ ಇದ್ದ…
ಸಂಜೆ ಗುರುಗಳು ಗುರುಕುಲಕ್ಕೆ ಮರಳಿದಾಗ ವೇಮನ ಕಾಣಲಿಲ್ಲ. ಬೆಳಗಿನ ಘಟನೆ ನೆನಪಾಯಿತು. ನದಿ ದಂಡೆಗೆ ಧಾವಿಸಿದರೆ ವೇಮನ ಬರೆಯುತ್ತಲೇ ಇದ್ದ. ಬಂಡೆಗೆ ಉಜ್ಜಿ ಬೆರಳುಗಳು ಮಾಯವಾಗಿದ್ದವು. ಬರವಣಿಗೆ ಮುಂದುವರಿದೇ ಇತ್ತು. ಗುರುಗಳು ಅವನನ್ನು ಆಲಂಗಿಸಿ, “ಅಯ್ಯೋ ಇದೇನು ಮಾಡಿಬಿಟ್ಟೆ’ ಎಂದು ಅತ್ತರು.
ಆ ಬಳಿಕ ವೇಮನ ಮಹಾಕವಿಯಾಗಿ ಬೆಳೆದ. ಅತ್ಯಂತ ಮೇಧಾವಿಯಾದ ವ್ಯಕ್ತಿ ಎನಿಸಿಕೊಂಡ. ಈಗಲೂ ವೇಮನನ ಹೆಸರು ಭಾರತದಾದ್ಯಂತ ಚಿರಪರಿಚಿತವಾಗಿದೆ.
ನಾವು ಹೀಗೆ ಒಂದು ಗುರಿಯತ್ತ ಗಮನ ಕೇಂದ್ರೀಕರಿಸಿದರೆ ಅಸಾಧ್ಯ ವಾದುದು ಯಾವುದೂ ಇಲ್ಲ. ಶಂಕರಾಚಾರ್ಯರು, “ನಿಶ್ಚಲತತ್ವೇ ಜೀವನ್ಮುಕ್ತಿ’ ಎಂದು ಹೇಳಿದ್ದು ಇದನ್ನು. ಒಂದು ಗುರಿಯ ಕಡೆಗೆ ಸ್ಥಿರ ಚಿತ್ತದಿಂದ ಗಮನ, ಅದರಿಂದ ಸಾಧನೆ, ಮೋಕ್ಷ. ಇಂಥ ಏಕಾಗ್ರತೆ ನಮ್ಮ ಎಲ್ಲ ಶಕ್ತಿ, ಸಾಮರ್ಥ್ಯಗಳನ್ನು ಒಂದು ಗುರಿಯ ಕಡೆಗೆ ಹೂಡುತ್ತದೆ. ಬದುಕು ಬಿಲ್ಲು ಹೆದೆಯೇರಿಸಿ ಬಿಟ್ಟ ಬಾಣದಂತಿರುತ್ತದೆ. ಸಾಧನೆಗೆ ಇದು ಮಾರ್ಗ.
( ಸಾರ ಸಂಗ್ರಹ)