ಕರ್ನಾಟಕಕ್ಕೆ “ಮಹದಾಯಿ” ಗೆಲುವು; ಗೆಜೆಟ್ ನೋಟಿಫಿಕೇಶನ್ ಹೊರಡಿಸಿ; ಕೇಂದ್ರಕ್ಕೆ ಸುಪ್ರೀಂ
ಜುಲೈ15ರಿಂದ ನಿರಂತರವಾಗಿ ಮಹದಾಯಿ ವಿವಾದದ ಮೇಲ್ಮನವಿಗಳ ವಿಚಾರಣೆ
Team Udayavani, Feb 20, 2020, 3:01 PM IST
ನವದೆಹಲಿ: ಮಹದಾಯಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸಬಹುದು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿರುವುದು ಕರ್ನಾಟಕ ಸರ್ಕಾರದ ವಾದಕ್ಕೆ ಮತ್ತಷ್ಟು ಬಲಬಂದಂತಾಗಿದೆ.
ಮಹದಾಯಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸಬೇಕೆಂದು ಕೋರಿ ಕರ್ನಾಟಕ ಮೇಲ್ಮನವಿ ಸಲ್ಲಿಸಿತ್ತು. ಆದರೆ ವಿವಾದ ಸುಪ್ರೀಂಕೋರ್ಟ್ ನಲ್ಲಿ ಬಗೆಹರಿಯದ ನಿಟ್ಟಿನಲ್ಲಿ ಗೆಜೆಟ್ ನೋಟಿಫಿಕೇಶನ್ ಹೊರಡಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಅಫಿಡವಿತ್ ಸಲ್ಲಿಸಿತ್ತು.
ವಿವಾದದ ಬಗ್ಗೆ ಜುಲೈ15ರಿಂದ ನಿರಂತರವಾಗಿ ಮಹದಾಯಿ ವಿವಾದದ ಮೇಲ್ಮನವಿಗಳ ವಿಚಾರಣೆ ನಡೆಸುವುದಾಗಿ ಹೇಳಿರುವ ಸುಪ್ರೀಂ ಪೀಠ, ಗೆಜೆಟ್ ನೋಟಿಫಿಕೇಶನ್ ಹೊರಡಿಸಬಹುದು ಎಂದು ತಿಳಿಸಿದೆ. ವಿಚಾರಣೆ ನಂತರ ನೀಡುವ ತೀರ್ಪಿನಲ್ಲಿ ಬದಲಾವಣೆ ಆದಲ್ಲಿ ಅಧಿಸೂಚನೆ ಬದಲಿಸಬೇಕು ಎಂದು ಸೂಚನೆ ನೀಡಿದೆ. ಇದರಿಂದಾಗಿ ಕೇಂದ್ರ ಸರ್ಕಾರ ಮಹದಾಯಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಗೆಜೆಟ್ ನೋಟಿಫಿಕೇಶನ್ ಹೊರಡಿಸಬೇಕಾಗಿದೆ ಎಂದು ವರದಿ ತಿಳಿಸಿದೆ.