ಸ್ವತ್ಛತೆ ನಿರ್ವಹಣೆ ಲೋಪ: ನಗರಸಭೆ ಅಧಿಕಾರಿಗಳಿಗೆ ತರಾಟ
Team Udayavani, Jan 17, 2021, 11:33 AM IST
ಕೋಲಾರ: ಜಿಲ್ಲಾಧಿಕಾರಿ ಸಿ.ಸತ್ಯಭಾಮ ನಗರದಲ್ಲಿ ಶನಿವಾರ ಬೆಳಗ್ಗೆ ದಿಢೀರ್ ಪ್ರದಕ್ಷಿಣೆ ಮಾಡುವ ಮೂಲಕ ಸ್ವತ್ಛತೆ ಮತ್ತಿತರ
ವಿಚಾರಗಳಲ್ಲಿ ಕರ್ತವ್ಯಲೋಪ ವೆಸಗಿದ್ದ ನಗರಸಭೆ ಅಧಿಕಾರಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ಯಾವುದೇ ಮುನ್ಸೂಚನೆ ನೀಡದೆ ದಿಢೀರ್ ನಗರಸಭೆ ಅಧ್ಯಕ್ಷೆ ಶ್ವೇತಾರೊಂದಿಗೆ ನಗರ ಪ್ರದಕ್ಷಿಣೆ ಆರಂಭಿಸಿದ್ದ ಡೀಸಿ ಸತ್ಯಭಾಮ, ನಗರದಲ್ಲಿ ತಾವು ಹಾದು ಬಂದ ಪ್ರತಿ ರಸ್ತೆಯಲ್ಲಿಯೂ ತಪ್ಪುಗಳನ್ನು ಹುಡುಕಿ ತೋರಿಸುತ್ತಾ ನಗರಸಭೆ ಕೈಗೊಂಡಿರುವ ಕ್ರಮಗಳಾದರೂ ಏನು ಎಂದು ಪ್ರಶ್ನಿಸಿದರು.
ಅಧಿಕಾರಿಗಳಲ್ಲಿ ನಡುಕ: ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ, ಅಕ್ರಮವಾಗಿ ರಸ್ತೆಯಲ್ಲಿಯೇ ಕಟ್ಟಣ ನಿರ್ಮಾಣ ಸಾಮಗ್ರಿಗಳನ್ನು ಹಾಕಿರುವುದು, ಫುಟ್ಪಾತ್ ಅತಿಕ್ರಮಿಸಿರುವುದು, ಬಹುತೇಕ ಅಂಗಡಿಗಳಿಗೆ ಪರವಾನಗಿಯೇ ಇಲ್ಲದಿರುವುದು ಹೀಗೆ ಜಿಲ್ಲಾಧಿಕಾರಿಗಳು ಪ್ರತಿ ಹಂತದಲ್ಲಿಯೂ ತಪ್ಪುಗಳನ್ನು ಎತ್ತಿ ತೋರಿಸುತ್ತಾ ಮಂಜು ಮುಸುಕಿದ ಮುಂಜಾನೆಯೇ ನಗರಸಭೆ ಅಧಿಕಾರಿಗಳಲ್ಲಿ ನಡುಕ ಹುಟ್ಟಿಸಿದರು.
ಇದನ್ನೂ ಓದಿ:ಗಾಬ್ಬಾದಲ್ಲಿ ದಾಖಲೆ ಬರೆದ ಶಾರ್ದೂಲ್ ಠಾಕೂರ್- ವಾಷಿಂಗ್ಟನ್ ಸುಂದರ್
ಕಾಳಮ್ಮ ಗುಡಿ ಬೀದಿ ಮತ್ತು ಅಮ್ಮವಾರಿ ಪೇಟೆಯ ರಸ್ತೆಯಲ್ಲಿ ರಸ್ತೆ ಬದಿಯೇ ಕಸವನ್ನು ರಾಶಿ ಹಾಕಿರುವುದರ ವಿರುದ್ಧ ಕಿಡಿ ಕಾರಿದರು. ತಮ್ಮ ಮನೆಯ ಮುಂದೆಯೇ ಕಸ ಹಾಕುವುದಲ್ಲದೇ ಮಾಂಸದಂಗಡಿಯ ತ್ಯಾಜ್ಯವನ್ನು ತಂದು ಸುರಿಯುತ್ತಿದ್ದಾರೆಂದು ಸ್ಥಳೀಯರು ಆರೋಪಿಸಿದರು.
ವಸ್ತುಗಳನ್ನು ಜಪ್ತಿ ಮಾಡಿ: ಕೆಲವು ಕಟ್ಟಡಗಳನ್ನು ಯಾವುದೇ ಸೆಟ್ ಬ್ಯಾಕ್ ಇಲ್ಲದೇ ನಿರ್ಮಾಣ ಮಾಡುತ್ತಿರುವುದು ಹಾಗೂ ರಸ್ತೆ ಅತಿಕ್ರಮಿಸಿ ಇಟ್ಟಿಗೆ, ಮರಳು ಗುಡ್ಡೆ ಹಾಕಿರುವುದರ ವಿರುದ್ಧ ಗರಂ ಆದರು.
ಕೆಲವು ಅಂಗಡಿಗಳು ಫುಟ್ಪಾತ್ ಅತಿಕ್ರಮಿಸಿ ತಮ್ಮ ಅಂಗಡಿಗಳನ್ನು ಇಟ್ಟುಕೊಂಡಿರುವುದರ ವಿರುದ್ಧವೂ ಸಿಡಿಮಿಡಿಗೊಂಡ ಜಿಲ್ಲಾಧಿಕಾರಿಗಳು, ಫುಟ್ಪಾತ್ ಅತಿಕ್ರಮಿಸಿದ ಅಂಗಡಿಗಳ ವಸ್ತುಗಳನ್ನು ಜಪ್ತಿ ಮಾಡುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು.
ಅಂಗಡಿಗಳಿಗೆ ಬೀಗ: ಈ ಹಂತದಲ್ಲಿ ಮಾಂಸದ ಮಾರುಕಟ್ಟೆಯಲ್ಲಿ ಬಹುತೇಕ ಕೋಳಿ ಅಂಗಡಿಗಳು ಪ್ರತಿ ಅಂಗಡಿಯ ಮುಂದೆ ಫುಟ್ ಪಾತ್ ಅತಿಕ್ರಮಿಸಿ ಕೋಳಿ ತುಂಬಿದ್ದ ಪಂಜರಗಳನ್ನಿಟ್ಟುಕೊಂಡಿದ್ದು, ಕೋಳಿ ಅಂಗಡಿಗಳನ್ನು ಕೊಳಕಾಗಿರಿಸಿರುವುದು,
ಬಹುತೇಕ ಕೋಳಿ ಮಾರಾಟ ಅಂಗಡಿಗಳಿಗೆ ನಗರಸಭೆ ಪರವಾನಗಿಯೇ ಇಲ್ಲದಿರುವುದನ್ನು ಗಮನಿಸಿ, ನಗರಸಭೆ ಸಿಬ್ಬಂದಿಯಿಂದ
ಅಂಗಡಿಗಳಿಗೆ ಬೀಗ ಜಡಿಸಿದರು.
ನಗರಸಭೆ ಆಯುಕ್ತ ಶ್ರೀಕಾಂತ್, ಇಂಜಿನಿಯರ್ ಪುನೀತ್ ಇತರರು ತೀವ್ರ ತರಾಟೆಗೊಳಗಾದರು. ನಗರಸಭೆ ಸಮರ್ಪಕವಾಗಿ ಕೆಲಸ ಮಾಡುತ್ತಿದ್ದರೆ ಇಷ್ಟೊಂದು ಅದ್ವಾನದ ವ್ಯವಸ್ಥೆ ಹೇಗೆ ಕಾಣಲು ಸಾಧ್ಯ, ಅಯೋಗ್ಯರು ಸೇರಿಕೊಂಡು ಹೀಗಾಗಿದೆ ಎಂದು ಜರಿದರು.