ದ್ವಿಚಕ್ರ ವಾಹ ಕಳ್ಳತನ ಮಾಡುತ್ತಿದ್ದ ಮೂವರ ಬಂಧನ : 17 ಲಕ್ಷ ರೂ. ಮೌಲ್ಯದ ಸೊತ್ತು ವಶ
17 ಲಕ್ಷ ರೂ. ಮೌಲ್ಯದ 26 ಬೈಕ್ಗಳು ಹಾಗೂ ಚಿನ್ನಾಭರಣ ವಶ
Team Udayavani, Aug 4, 2021, 3:07 PM IST
ಮಂಡ್ಯ: ಜಿಲ್ಲೆಯ ವಿವಿಧೆಡೆ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಮಂಡ್ಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಒಟ್ಟು 17 ಲಕ್ಷ ರೂ. ಮೌಲ್ಯದ 26 ದ್ವಿಚಕ್ರ ವಾಹನಗಳು ಹಾಗೂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.
ಮಂಡ್ಯ ತಾಲೂಕಿನ ತಿಬ್ಬನಹಳ್ಳಿ ಗ್ರಾಮದವರಾದ ಜೆ.ಎನ್.ಯತಿನ್(25), ಜೆ.ಎನ್.ವಿಜಯಕುಮಾರ್(30), ಜೆ.ಸಿ.ಕಾರ್ತಿಕ್(24) ಬಂಧಿತ ಆರೋಪಿಗಳು.
ನಗರದ ಪಶ್ಚಿಮ ಠಾಣೆಯ ವ್ಯಾಪ್ತಿಯ ಬೈಕ್ ಕಳ್ಳತನಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪತ್ತೆ ಹೆಚ್ಚಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದ್ವಿಚಕ್ರ ವಾಹನಗಳನ್ನು ಕಳವು ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎಂ.ಅಶ್ವಿನಿ ತಿಳಿಸಿದರು.
ನಗರದ ಪರೇಡ್ ಮೈದಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂಧಿತರಿಂದ 18 ಹೀರೋ ಸ್ಪೆಂಡ್ಲರ್ ಪ್ಲಸ್ ಮೋಟಾರ್ ಸೈಕಲ್ಗಳು, 6 ಹೀರೋ ಫ್ಯಾಷನ್ ಪ್ರೋ, 1 ಬಜಾಜ್ ಪಲ್ಸರ್, 1 ಬಜಾಜ್ ಪ್ಲಾಟಿನಂ ಸೇರಿದಂತೆ ಒಟ್ಟು 26 ದ್ವಿಚಕ್ರಗಳವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ :ಉಡುಪಿ : ಮೊಬೈಲ್ ಗೆ ಬಂದ ಲಿಂಕ್ ಕ್ಲಿಕ್ ಮಾಡಿ ದುಡ್ಡು ಕಳೆದುಕೊಂಡ ಪ್ರೊಫೆಸರ್
ಮನೆಗಳ್ಳತನ ಆರೋಪಿ ಬಂಧನ:
ಆರೋಪಿ ಯತಿನ್ ಸ್ವಇಚ್ಛಾ ಹೇಳಿಕೆಯ ಆಧಾರದ ಮೇಲೆ ತಾಲೂಕಿನ ಶಿವಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮನೆಯೊಂದರಲ್ಲಿ ನಡೆದಿದ್ದ ಕಳ್ಳತನ ಆರೋಪಿ ಜೆ.ಎನ್.ಶಿವಕುಮಾರ್ನನ್ನು ಬಂಧಿಸಿ ಆತನಿಂದ 18 ಗ್ರಾಂನ ಡಾಲರ್ ಇರುವ ಚಿನ್ನದ ಚೈನ್, 12 ಗ್ರಾಂನ ಎರಡು ಉಂಗುರ, 12 ಗ್ರಾಂ ಚಿನ್ನದ ಬ್ರಾಸ್ಲೆಟ್ ಸೇರಿದಂತೆ ಒಟ್ಟು 42 ಗ್ರಾಂನ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಒಟ್ಟು ಚಿನ್ನಾಭರಣ ಹಾಗೂ ಮೋಟಾರ್ ಸೈಕಲ್ಗಳು ಸೇರಿದಂತೆ ಒಟ್ಟು 17,01,600 ರೂ. ಮೌಲ್ಯದ ವಸ್ತುಗಳಾಗಿವೆ ಎಂದರು.
ಆರೋಪಿಗಳ ವಿರುದ್ಧ ಒಟ್ಟು 17 ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ ಇನ್ನೂ 10 ಮೋಟಾರ್ ಸೈಕಲ್ಗಳು ಎಲ್ಲಿ ಕಳ್ಳತನವಾಗಿದೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದರು.
ಆರೋಪಿಗಳ ಪತ್ತೆ ಕಾರ್ಯದಲ್ಲಿದ್ದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಅಭಿನಂದಿಸಿದರು. ಸುದ್ದಿಗೋಷ್ಠಿಯಲ್ಲಿ ಎಎಸ್ಪಿ ವಿ.ಧನಂಜಯ, ಡಿವೈಎಸ್ಪಿ ಮಂಜುನಾಥ, ಸಿಪಿಐ ಕೆ.ಸಂತೋಶ್, ಪಿಎಸ್ಐ ಶರತ್ಕುಮಾರ್, ಎಸ್.ಪ್ರಭಾ ಮತ್ತಿತರರಿದ್ದರು.